ಹೆಜಮಾಡಿ ಬಂದರಿಗೆ ಕೇಂದ್ರ ಸಚಿವರ ಒಪ್ಪಿಗೆ
Team Udayavani, Aug 14, 2017, 8:40 AM IST
ಪಡುಬಿದ್ರಿ: ಹೆಜಮಾಡಿ ಮೀನುಗಾರಿಕಾ ಬಂದರಿನ 138.60 ಕೋಟಿ ರೂ.ಗಳ ನೂತನ ಯೋಜನೆಗೆ ಕೇಂದ್ರ, ರಾಜ್ಯಗಳ ಶೇ. 50 ದಾಮಾಶಯದ ಪಾಲುದಾರಿಕೆಯಲ್ಲಿ ಕೇಂದ್ರದ ಸಾಗರಮಾಲಾ ಯೋಜನೆಯಲ್ಲಿ ಅನುಷ್ಠಾನಿಸಲು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಮತ್ತು ಬಂದರು ಸಚಿವ ನಿತಿನ್ ಗಡ್ಕರಿ ತಮ್ಮ ತಾತ್ವಿಕ ಒಪ್ಪಿಗೆ ನೀಡಿದ್ದಾರೆ.
ಹೆಜಮಾಡಿಯ ಮೂಲ್ಕಿ ವಲಯ ಪಸೀìನ್ ಹಾಗೂ ಟ್ರಾಲ್ ಬೋಟ್ಮೀನುಗಾರರ ಸಂಘದ ಪದಾಧಿಕಾರಿಗಳು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಬಿಜೆಪಿ ಕಾರ್ಯ ದರ್ಶಿ ಉದಯಕುಮಾರ್ ಶೆಟ್ಟಿ ಅವರನ್ನೊಳಗೊಂಡ ನಿಯೋಗ ದೊಂದಿಗೆ ದಿಲ್ಲಿಯ ಕೃಷಿ ಮತ್ತು ಬಂದರು ಸಚಿವಾಲಯಕ್ಕೆ ತೆರಳಿ ಸಚಿವದ್ವ ಯರನ್ನು ಭೇಟಿ ಮಾಡಿ ಚರ್ಚಿಸಿದ್ದರು.
ಸಚಿವರೀರ್ವರೂ ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದು ಯೋಜನೆಯನ್ನು ಕಾರ್ಯಗತಗೊಳಿಸಲು ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಿರುವುದಾಗಿಯೂ ಹೆಜಮಾಡಿಯ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಬಂಗೇರ ತಿಳಿಸಿದ್ದಾರೆ.
69.3 ಕೋಟಿ ರೂ. ರಾಜ್ಯದ ಪಾಲು
ಈಗಾಗಲೇ ಈ ಯೋಜನೆಗೆ ರಾಜ್ಯ ಸರಕಾರವು ತಮ್ಮ ಪಾಲಿನ 69.3 ಕೋಟಿ ರೂ.ಗಳನ್ನು ನೀಡಲು ಮುಂದೆ ಬಂದಿದೆ. ಕೇಂದ್ರ ಸರಕಾರಕ್ಕೆ ಯೋಜನಾ ಪ್ರಸ್ತಾವನೆಯು ರಾಜ್ಯ ಸರಕಾರದಿಂದ ರವಾನೆಯಾಗಿದ್ದು ಬಂದರಿನ ಯೋಜನಾನುಷ್ಠಾನದಲ್ಲಿ ಆಗುತ್ತಿರುವ ವಿಳಂಬವನ್ನು ಪರಿಗಣಿಸಿ ರಾಜ್ಯ ಬಿಜೆಪಿ ನಾಯಕರೊಂದಿಗೆ ಹೆಜಮಾಡಿಯ ಮೀನುಗಾರರ ನಿಯೋಗವು ದಿಲ್ಲಿಗೆ ತೆರಳಿತ್ತು.
ದ.ಕ., ಮೀನು ಮಾರಾಟ ಫೆಡರೇಶನ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ದ.ಕ., ಮೊಗವೀರ ಮಹಾಜನ ಸಂಘದ ಕೋಶಾಧಿಕಾರಿ ಎನ್.ಡಿ. ಬಂಗೇರ, ಹರಿಶ್ಚಂದ್ರ ಮೆಂಡನ್, ಬಂದರು ಇಲಾಖೆಯ ಕಾರ್ಯಕಾರಿ ಎಂಜಿನಿಯರ್ ದಯಾನಂದ್, ಮೀನುಗಾರಿಕಾ ಇಲಾಖಾ ಜಂಟಿ ನಿರ್ದೇಶಕ ಗಣಪತಿ ಭಟ್, ಮಲ್ಪೆಯ ಮೀನುಗಾರ ಮುಖಂಡರು ನಿಯೋಗದಲ್ಲಿದ್ದರು.