ಜೀಪಿಗೆ ಕಾರು ನೇರ ಢಿಕ್ಕಿ; 7 ಮಂದಿ ಸಾವು; 14 ಮಂದಿಗೆ ಗಾಯ
Team Udayavani, Nov 28, 2017, 12:08 PM IST
ಔರಂಗಾಬಾದ್, ಮಹಾರಾಷ್ಟ್ರ : ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಇಂದು ಮಂಗಳವಾರ ನಸುಕಿನ ವೇಳೆ ಅತಿ ವೇಗದಿಂದ ಧಾವಿಸುತ್ತಿದ್ದ ಕಾರೊಂದು ಎದುರುಗಡೆಯಿಂದ ಬರುತ್ತಿದ್ದ ಜೀಪಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಏಳು ಮಂದಿ ಮೃತಪಟ್ಟು ಇತರ 14 ಮಂದಿ ಗಾಯಗೊಂಡರು.
ನತದೃಷ್ಟ ಎಸ್ಯುವಿ ಕಾರು ಪಂಡರಾಪುರದಿಂದ ನಾಂದೇಡ್ಗೆ ಹೋಗುತ್ತಿತ್ತು. ಲಾತೂರ್ನ ಕೋಲ್ಪಾ ಪಾಟಿ ಗ್ರಾಮದಲ್ಲಿ ನಸುಕಿನ 4.50ರ ಹೊತ್ತಿಗೆ ಅದು ಎದುರುಗಡೆಯಿಂದ ಬರುತ್ತಿದ್ದ ಜೀಪಿಗೆ ನೇರವಾಗಿ ಢಿಕ್ಕಿ ಹೊಡೆಯಿತು ಎಂದು ಲಾತೂರಿನ ವಿವೇಕಾನಂದ ಚೌಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಭಟಾಲ್ವಾಂಡೆ ತಿಳಿಸಿದರು.
ತನ್ನ ಮುಂದುಗಡೆ ಸಾಗುತ್ತಿದ್ದ ಟೆಂಪೋವನ್ನು ಹಿಂದಿಕ್ಕುವ ಭರದಲ್ಲಿ ಅತಿ ವೇಗವಾಗಿ ಕಾರನ್ನು ನಡೆಸಿದ ಚಾಲಕನಿಗೆ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಅದು ಎದುರುಗಡೆಯಿಂದ ಬರುತ್ತಿದ್ದ ಜೀಪಿಗೆ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಎಲ್ಲ 7 ಮಂದಿ ಸ್ಥಳದಲ್ಲೇ ಸಾವಪ್ಪಿದ್ದರು. ಇವರನ್ನು ತುಕಾರಾಮ ದಳವಿ 34, ಮನೋಜ್ ಶಿಂಧೆ 25, ಶುಭಂ ಶಿಂಧೆ 23, ದತ್ತು ಶಿಂಧೆ 34, ವಿಜಯ್ ಪಾಂಡೆ 30, ಉಮಾಕಾಂತ್ ಕರುಳೆ 45 ಮತ್ತು ಮೀನಾ ಉಮಾಕಾಂತ್ ಕರುಳೆ 39 ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.