ಡಿ. 12: “ಸಾಮರಸ್ಯ ನಡಿಗೆ ಸೌಹಾರ್ದತೆಯೆಡೆಗೆ’
Team Udayavani, Dec 1, 2017, 9:39 AM IST
ಮಂಗಳೂರು: ಬುದ್ಧಿವಂತರ ಜಿಲ್ಲೆ ಎಂದು ಹೆಸರಾದ ದಕ್ಷಿಣ ಕನ್ನಡದಲ್ಲಿ ಸಾಮರಸ್ಯದ ಕೊರತೆ ಇದ್ದು, ಜಿಲ್ಲೆಯ ಗೌರವಕ್ಕೆ ಕುಂದುಂಟಾಗಿದೆ. ಸಾಮರಸ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಜಾತ್ಯತೀತ ಸಂಘಟನೆಗಳು ಒಟ್ಟು ಸೇರಿ ಡಿ. 12ರಂದು “ಸಾಮರಸ್ಯ ನಡಿಗೆ ಸೌಹಾರ್ದತೆಯೆಡೆಗೆ’ ಎಂಬ ಧ್ಯೇಯವನ್ನಿಟ್ಟು ಫರಂಗಿಪೇಟೆಯಿಂದ ಮಾಣಿ ವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.
ಬೆಳಗ್ಗೆ 9 ಗಂಟೆಗೆ ಜಾಥಾ ಆರಂಭ ವಾಗಲಿದ್ದು, ಸಂಜೆ 4.30ಕ್ಕೆ ಮಾಣಿಯಲ್ಲಿ ಮುಕ್ತಾಯವಾಗಲಿದೆ. ಸಮಾರೋಪದಲ್ಲಿ ಜಾತ್ಯತೀತ ನಿಲುವಿನ ಮಹನೀಯರು ಪಾಲ್ಗೊಳ್ಳುವರು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಜಾಥಾದಲ್ಲಿ ಯಾವುದೇ ಘೋಷಣೆ ಇರುವುದಿಲ್ಲ. ಮೌನವಾಗಿ ಜಾಥಾ ನಡೆಯಲಿದೆ. ವೈಯಕ್ತಿಕ ಹಿತಾಸಕ್ತಿ ಅಥವಾ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದ ಕಾರ್ಯಕ್ರಮ ಇದಲ್ಲ. ಭಾವೈಕ್ಯ ಕಾಪಾಡಲು ಅಗತ್ಯವಾದ ಕಾರ್ಯಕ್ರಮವಾಗಿದೆ ಎಂದರು.
ಮಂಗಳೂರು ನಗರದಲ್ಲಿ ಜಾಥಾ ನಡೆಸಿದರೆ ಸಂಚಾರ ಸುವ್ಯವಸ್ಥೆಗೆ ತೊಂದರೆ ಆಗುತ್ತಿರುವುದನ್ನು ಮನಗಂಡು ನಗರದ ಹೊರ ವಲಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾಥಾ ರಸ್ತೆಯ ಒಂದು ಬದಿಯಲ್ಲಿ ಪಾದಯಾತ್ರೆ ಮುಖಾಂತರ ಸಾಗಲಿದ್ದು, ವಾಹನ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ತಡೆ ಉಂಟು ಮಾಡುವುದಿಲ್ಲ ಎಂದು ತಿಳಿಸಿದರು.
ಮುಂದೆ ತಾಲೂಕು ಮಟ್ಟದಲ್ಲಿ
ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕು ಮಟ್ಟದ ಸಾಮರಸ್ಯ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ರಮಾನಾಥ ರೈ ವಿವರಿಸಿದರು. ಇದೇ ಸಂದರ್ಭದಲ್ಲಿ ಸಚಿವರು ಜಾಥಾದ ಪೋಸ್ಟರನ್ನು ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಸಿಪಿಐಎಂ ಮುಖಂಡರಾದ ವಸಂತ ಆಚಾರಿ ಮತ್ತು ಯಾದವ ಶೆಟ್ಟಿ, ಸಿಪಿಐ ನಾಯಕರಾದ ಸೀತಾರಾಮ ಬೇರಿಂಜ ಮತ್ತು ಕರುಣಾಕರ, ಕೆ. ತಿಮ್ಮಪ್ಪ, ರಘು ಎಕ್ಕಾರು, ದಲಿತ ಸಂಘಟನೆಗಳ ಮುಖಂಡರಾದ ಎಂ. ದೇವದಾಸ್, ಪಿ. ಕೇಶವ, ವಿಶು ಕುಮಾರ್, ರೈತ ಹಸಿರು ಸೇನೆಯ ರವಿ ಕಿರಣ್ ಪುಣಚ, ಹಿರಿಯ ವಕೀಲ ಟಿ. ನಾರಾಯಣ ಪೂಜಾರಿ, ಕೆಥೋಲಿಕ್ ರಾಷ್ಟ್ರೀಯ ಪರಿಷತ್ ಸದಸ್ಯ ಸುಶಿಲ್ ನೊರೋನ್ಹಾ, ವಿವಿಧ ಸಂಘಟನೆಗಳ ಪ್ರಮುಖರಾದ ವಾಸುದೇವ ಬೋಳೂರು, ಸರೋಜಿನಿ, ಚಂದು ಎಲ್., ವಾಸುದೇವ ಉಚ್ಚಿಲ, ರೀಟಾ ನೊರೋನ್ಹಾ, ಬಿ.ಕೆ. ವಸಂತ್, ನೇಮಿರಾಜ್, ಮಹಮದ್ ಹನೀಫ್, ಜಯಶೀಲ, ಬಿ. ಶ್ರೀನಿವಾಸ್, ಯೋಗೀಶ್ ಶೆಟ್ಟಿ ಜಪ್ಪು, ಮುನೀರ್ ಕಾಟಿಪಳ್ಳ ಉಪಸ್ಥಿತರಿದ್ದರು.