ರಾಯರಡ್ಡಿ ವಿರುದ್ಧ ಸಿಎಂಗೆ ರಾಜ್ಯಪಾಲರ ಪತ್ರ
Team Udayavani, Dec 5, 2017, 6:35 AM IST
ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ವಿರುದ್ಧ ರಾಜ್ಯಪಾಲ ವಿ.ಆರ್. ವಾಲಾ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಸಚಿವರ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮೂರನೇ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಸಚಿವರ ಹೆಸರು ಪ್ರಸ್ತಾಪಿಸದೇ ನಿಮ್ಮ ಸಂಪುಟದ ಸಚಿವರು ರಾಜಭವನದ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ನೀವೇ ಕರೆದು ಬುದ್ಧಿ ಹೇಳಿ, ಇಲ್ಲದಿದ್ದರೆ, ನಾನೇ ನನ್ನ ದಾರಿಯಲ್ಲಿ ಅವರಿಗೆ ಬುದ್ಧಿ ಹೇಳುತ್ತೇನೆಂದು ರಾಯರಡ್ಡಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಮೈಸೂರು ಹಾಗೂ ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಕುಲಪತಿಗಳ ನೇಮಕ ವಿಷಯದಲ್ಲಿ ರಾಜ್ಯಪಾಲರು ಹಾಗೂ ರಾಯರಡ್ಡಿ ನಡುವೆ ಗುದ್ದಾಟ ನಡೆದಿದೆ. ಸರ್ಕಾರ ಮೈಸೂರು ವಿವಿಗೆ ಪ್ರೊ. ಸಿದ್ದಾಶ್ರಮ್ ಬೆಂಗಳೂರು ವಿವಿ ಕುಲಪತಿ ಹುದ್ದೆಗೆ ಪ್ರೊ. ಸಂಗಮೇಶ್ ಪಾಟೀಲ್ ಹೆಸರನ್ನು ಶಿಫಾರಸು ಮಾಡಿ ಕಳುಹಿಸಿದೆ. ಸಚಿವರು ಎರಡು ಬಾರಿ ಕಳುಹಿಸಿರುವ ಹೆಸರನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದು, ಮತ್ತೆ ಸರ್ಕಾರದ ಶಿಫಾರಸನ್ನು ತಿರಸ್ಕರಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆಂದು ತಿಳಿದು ಬಂದಿದೆ.