ಹಡಿಲು ಬಿದ್ದ ಹೊಲದ ಮಡಿಲು ತುಂಬಿದ ಯುವಕ
Team Udayavani, Dec 9, 2017, 12:55 PM IST
ಮೂಡಬಿದಿರೆ: ಕೃಷಿಗೆ ಬೆನ್ನು ಹಾಕಿ ನಗರದತ್ತ ಮುಖ ಮಾಡುತ್ತಿರುವ ಈಗಿನ ಯುವ ಜನತೆಗೆ ಮಾದರಿಯಾಗುವಂತೆ ಇಲ್ಲೊಬ್ಬರಿದ್ದಾರೆ. ಅವರೇ ನೀರ್ಕೆರೆಯ ಲಿಂಗಪ್ಪ ಗೌಡ(ಲಿಖೀತ್ರಾಜ್). ಪರಿಶ್ರಮವೇ ಮೂರ್ತಿವೆತ್ತಂತೆ ಇರುವವರು.
ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ, ಕುಡುಬಿ ಜ್ಞಾನದೀಪ್ತಿ ಮಾಸ ಪತ್ರಿಕೆಯ ಸಂಪಾದಕ, ಎಲೆಕ್ಟ್ರಿಶಿಯನ್, ಆಫ್ಘಾನಿಸ್ಥಾನದ ಕಂದಹಾರ್ನ ಯುದ್ಧ ಭೂಮಿಯಲ್ಲಿ ಟ್ಯಾಂಕರ್ ಚಾಲಕರಾಗಿದ್ದವರು ಈಗ ಹಡಿಲು ಹೊಲದಲ್ಲಿ ಭತ್ತದ ಹೊನ್ನ ಬೆಳೆ ತೆಗೆವ ಛಲಗಾರ.
ಮೂಡಬಿದಿರೆ ಶ್ರೀ ಮಹಾವೀರ ಕಾಲೇಜು ಬಳಿಯ ನೂಯಿಯಲ್ಲಿ 2 ದಶಕಗಳಿಂದ ಹಡಿಲು ಬಿದ್ದಿದ್ದ ಹೊಲಗಳನ್ನು ಮಾಲಕರಿಂದ ಪಡೆದು, ಭತ್ತ ಬೆಳೆದು ಅಬ್ಟಾ ಅನ್ನಿಸುವಂಥ ಸಾಧನೆ ಮಾಡಿ ತೋರಿದ್ದಾರೆ. 3 ಎಕ್ರೆ ಹೊಲದಲ್ಲಿ ಖರ್ಚು ಕಳೆದು ಎಕ್ರೆಗೆ 50 ಸಾವಿರ ರೂ.ಗಳಷ್ಟು ಆದಾಯ ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ.
ಲಿಂಗಪ್ಪ ಅವರು ಐಟಿಐ ವ್ಯಾಸಂಗ ಮಾಡಿದ್ದರೂ ಕೃಷಿಯಲ್ಲಿ ಆಸಕ್ತಿ ಹೊಂದಿದವರು. ಕೃಷಿ ಕುಟುಂಬದವರಲ್ಲದಿದ್ದರೂ ಬಜಪೆಯಲ್ಲಿ ಈ ಹಿಂದೆ ಭೂಮಿ ಎರವಲು ಪಡೆದು ಭತ್ತ ಬೆಳೆದಿದ್ದರು. ಆ ಅನುಭವವೇ ಅವರನ್ನು ಮೂಡಬಿದಿರೆ ನೂಯಿಯಲ್ಲಿ ಭತ್ತ ಬೆಳೆವಂತೆ ಪ್ರೇರೇಪಿಸಿತು. ನೂಯಿಯಲ್ಲಿ ಜಾಗ ಖರೀದಿಸಿದ್ದ ಕೇಶವ್ ಕಿರಣ್ ಅವರ ಸ್ನೇಹದಿಂದಾಗಿ ಭತ್ತ ಬೆಳೆಯಲು ಮುಂದಾದರು.
ಯಂತ್ರಧಾರೆ ನೆರವು
ಕಳೆಗಿಡ, ಮುಳ್ಳು ಬೆಳೆದ ಭೂಮಿಯ ಕಾಯಕಲ್ಪಕ್ಕೆ ಕೃಷಿ ಇಲಾಖೆಯ “ಯಂತ್ರಧಾರೆ’ ನೆರವು ನೀಡಿತು. ಕಳೆಗಿಡ ಕೊಚ್ಚುವ ಯಂತ್ರವನ್ನು ದಿನಕ್ಕೆ 500 ರೂ. ಬಾಡಿಗೆಗೆ ತಂದು ಲಿಂಗಪ್ಪ ಅವರು ತಾನೇ ಕಳೆ ತೆಗೆದಿದ್ದರು. ಬಳಿಕ ಗಂಟೆಗೆ 480 ರೂ. ಬಾಡಿಗೆಯಲ್ಲಿ ಉಳುಮೆ ಮಾಡಿದ್ದೂ ಆಯಿತು. ಸನಿಹದ ತೋಡಿನಿಂದ ಭೂಮಿಗೆ ನೀರು ಹಾಯಿಸಿದ್ದರು. ಮೂಡಬಿದಿರೆ ರೈತ ಸಂಪರ್ಕ ಕೇಂದ್ರದಿಂದ “ಭದ್ರ’ ಭತ್ತ ಮತ್ತು “ಕಜೆ ಜಯ’ ಭತ್ತದ ಬೀಜವನ್ನು ತಂದು ಬಿತ್ತಿದ್ದರು. ಸಾವಯವ ಗೊಬ್ಬರವನ್ನೇ ಅವರು ಬಳಸಿದ್ದು, ಯಾವುದೇ ಕೀಟ ನಾಶಕವನ್ನೂ ಬಳಸಲಿಲ್ಲ.
ಇದೆಲ್ಲ ಆಗಿ 120 ದಿನಗಳಲ್ಲಿ. ಭತ್ತದ ಬೆಳೆ ಕೊಯ್ಲಿಗೆ ಬಂತು. ಮನೆಯವರ ಸಹಿತ ಊರಿನ 10 ಮಂದಿ ಕೃಷಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬಂದು ಕಟಾವು ಮಾಡಿದರು. ಲಿಂಗಪ್ಪ ಗೌಡರ ಈ ಸಾಹಸ ನೋಡಿ ಜಾಗದ ಮಾಲಕರು ಪ್ರೋತ್ಸಾಹ ಧನವನ್ನೂ ಕೈಗಿತ್ತಿದ್ದಾರಂತೆ! ನೂಯಿಯಲ್ಲಿ ಪಂಪ್ ಬಳಸಿ 2ನೇ ಬೆಳೆ ಮಾಡುವೆ, ಮುಂದೆ ತರಕಾರಿಯನ್ನೂ ಬೆಳೆಸುವೆ ಎನ್ನುತ್ತಿದ್ದಾರೆ ಲಿಂಗಪ್ಪ.
ಕಟಾವಿಗೆ ಯಂತ್ರ ತಂದರೆ ಬೈಹುಲ್ಲು ಪುಡಿಯಾಗುತ್ತದೆ. ಡೀಸೆಲ್ ವಾಸನೆಯಿಂದ ಜಾನುವಾರುಗಳು ತಿನ್ನುವುದಿಲ್ಲ. ಅದಕ್ಕಾಗಿ ಕೃಷಿ ಕಾರ್ಮಿಕರನ್ನೇ ಬಳಸಿದೆ ಎಂದಿದ್ದಾರೆ. ಇವರ ಸಾಧನೆಗೆ ತಾಯಿ, ನಾಟಿ ವೈದ್ಯೆ ಕಲ್ಯಾಣಿ ಬಾಯಿ ಕೈ ಜೋಡಿಸಿದ್ದಾರೆ.
ಬಹುಮುಖೀ ಸಾಧಕ
ಲಿಂಗಪ್ಪ ಗೌಡ ಹೋರಾಟಮಯ ಬದುಕಿನ ವ್ಯಕ್ತಿ. ತನ್ನೂರಿನಲ್ಲಿ ಈ ಹಿಂದೆ ಆಗುತ್ತಿದ್ದ ಅಕ್ರಮಗಳನ್ನು ಬಹಿರಂಗಗೊಳಿಸುತ್ತ ಗ್ರಾಮಸಭೆಗಳನ್ನು “ಗರಂ ಸಭೆ’ಗಳನ್ನಾಗಿಸುತ್ತಿದ್ದರು. ಕುಡುಬಿ ಜನಾಂಗದ ಒಳಿತಿಗಾಗಿ ಶ್ರಮಿಸುತ್ತಿರುವ ಅವರೀಗ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಮಾಂಡ್ ಸೋಭಾಣ್ ಸದಸ್ಯರಾಗಿದ್ದಾರೆ. “ಕುಡುಬಿ ಜ್ಞಾನದೀಪ್ತಿ’ ಮಾಸಪತ್ರಿಕೆಯನ್ನೂ ಸಂಪಾದಿಸಿ, ಪ್ರಕಟಿಸುತ್ತಿದ್ದಾರೆ. ಎಲೆಕ್ಟ್ರಿಕಲ್, ಪ್ಲಂಬಿಂಗ್, ನೀರಾವರಿ ಮುಂತಾದ ತಾಂತ್ರಿಕ ಕೆಲಸ ಬಲ್ಲ ಲಿಂಗಪ್ಪ ಗೌಡರು ಅಫ್ಘಾನಿಸ್ಥಾನದ ಕಂದಹಾರ್ನ ಯುದ್ಧಭೂಮಿಯಲ್ಲಿ ಟ್ಯಾಂಕರ್ ಚಾಲಕರಾಗಿಯೂ ಕೆಲಸ ಮಾಡಿದ್ದರು. ಕೆಲ ತಿಂಗಳ ಹಿಂದಷ್ಟೇ ಅವರಿಗೆ ಸಿಂಗಾಪುರದಲ್ಲಿ ನೌಕರಿಯ ಆಫರ್ ಬಂದಿತ್ತು. ಆದರೂ ನೂಯಿಯ ಹೊನ್ನಿನ ಭತ್ತದ ಬೆಳೆ ಅವರನ್ನು ಸದ್ಯ ಇಲ್ಲೇ ಇರುವಂತೆ ಮಾಡಿದೆ!
1.50 ಲಕ್ಷ ರೂ. ಲಾಭ!
ಭತ್ತದ ಕೃಷಿಯಿಂದ ಸುಮಾರು 80-85 ಮುಡಿ ಅಕ್ಕಿ ಸಂಗ್ರಹವಾಗಿದೆ. ಇದರ ಮೌಲ್ಯ ಸುಮಾರು 1.35 ಲಕ್ಷ ರೂ. ಇದೆ. ಇದರೊಂದಿಗೆ ಸೂಡಿ ಬೈಹುಲ್ಲಿಂದ 12 ಸಾವಿರ ರೂ. ಆದಾಯ ನಿರೀಕ್ಷೆ ಇದೆ. ಒಟ್ಟಾರೆ 1.70 ಲಕ್ಷ ಆದಾಯದ ಲೆಕ್ಕಾಚಾರವಿದೆ. ಖರ್ಚು ಕಳೆದು 1.50 ಲಕ್ಷ ರೂ. ಕೈ ಸೇರಬಹುದು ಎಂದು ಲಿಂಗಪ್ಪ ಅವರು ಹೇಳುತ್ತಾರೆ.
ಧನಂಜಯ ಮೂಡಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ