ಕಾಂಗ್ರೆಸ್ ಅಧ್ಯಕ್ಷರು ಬೇಲ್ ಮೇಲೆ ಓಡಾಡ್ತಿಲ್ಲವೇ?
Team Udayavani, Dec 11, 2017, 6:00 AM IST
ಬೆಂಗಳೂರು: ಬಿಜೆಪಿಯನ್ನು ಜೈಲು ಮತ್ತು ಬೇಲು (ಜಾಮೀನು) ಪಾರ್ಟಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಿಮ್ಮ ಪಕ್ಷದ (ಕಾಂಗ್ರೆಸ್) ಈಗಿನ ಮತ್ತು ಮುಂದಿನ ಅಧ್ಯಕ್ಷರು ಬೇಲ್ ಮೇಲೆ ಓಡಾಡುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಎಸಿಬಿ ಮತ್ತು ಸಿಐಡಿ ದುರುಪಯೋಗಪಡಿಸಿಕೊಂಡು ಆರೋಪಿ ಸಚಿವರಿಗೆ ಕ್ಲೀನ್ ಚಿಟ್ ನೀಡುವುದು, ಕೊಲೆ ಆರೋಪಿ ಸಚಿವರನ್ನು ರಕ್ಷಿಸುವುದು ಇನ್ನು ಹೆಚ್ಚು ದಿನ ಇರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕ್ಲೀನ್ಚಿಟ್ ಪಡೆದವರನ್ನು ಎಲ್ಲಿರಬೇಕೋ, ಅಲ್ಲಿಗೆ (ಜೈಲಿಗೆ) ಕಳುಹಿಸುತ್ತೇವೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಅಂಗವಾಗಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಜೆ.ಪಿ.ನಗರ ಆರ್ಬಿಐ ಲೇಔಟ್ ಆಟದ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯನ್ನು ಜೈಲು ಮತ್ತು ಬೇಲು ಪಾರ್ಟಿ. ಆ ಪಕ್ಷದ ನಾಯಕರು ಜೈಲಿಗೆ ಹೋಗಿ ಬಂದಿದ್ದು, ಹಲವರು ಬೇಲ್ ಮೇಲೆ ಓಡಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಅವರ ಪಕ್ಷದ ಈಗಿನ ಮತ್ತು ಮುಂದಿನ ಅಧ್ಯಕ್ಷರು (ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೆಸರು ಹೇಳದೆ) ಬೇಲ್ ಮೇಲೆ ಓಡಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಎಸಿಬಿ ಮತ್ತು ಸಿಐಡಿಯನ್ನು ದುರುಪಯೋಗಪಡಿಸಿಕೊಂಡು ಕೊಲೆ, ಆತ್ಮಹತ್ಯೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಾಮೀಲಾಗಿರುವ ಸಚಿವರಿಗೆ ಕ್ಲೀನ್ಚಿಟ್ ನೀಡುತ್ತಾ, ಕೊಲೆ ಆರೋಪಿಗಳನ್ನು ರಕ್ಷಿಸುತ್ತಾ ಸಿದ್ದರಾಮಯ್ಯ ಅವರು ನಮ್ಮ ಸರ್ಕಾರ ಅತ್ಯಂತ ಪ್ರಾಮಾಣಿಕ ಸರ್ಕಾರ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನಾನು ಮುಖ್ಯಮಂತ್ರಿಯಾದ ಮೇಲೆ ಆ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಈಗ ಕ್ಲೀನ್ಚಿಟ್ ಪಡೆದವರು ಎಲ್ಲಿರಬೇಕೋ ಅಲ್ಲಿಗೆ ಕಳುಹಿಸುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿಗೆ ನನ್ನನ್ನು ಕಂಡರೆ ಭಯ. ಅವರು ಹೇಳಿದಂತೆ ಅಚ್ಚೇದಿನ್ ಯಾವಾಗ ಬರುತ್ತದೆ ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರ ಮುಂದೆ ಸಿದ್ದರಾಮಯ್ಯ ಬಚ್ಚಾ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯವನ್ನು ಕಾಂಗ್ರೆಸ್ಮುಕ್ತಗೊಳಿಸಿ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಿದ ಬಳಿಕ ಅಚ್ಚೇದಿನ್ ಬರುತ್ತದೆ. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು, ಕೆಲಸ ಮಾಡಬೇಕು ಎಂದು ಹೇಳಿದರು.
ಅತ್ಯಾಚಾರ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಕಳೆದ ಮೂರು ವರ್ಷದಲ್ಲಿ ಇಂತಹ ಪ್ರಕರಣಗಳು ಶೇ. 186ರಷ್ಟು ಹೆಚ್ಚಾಗಿದೆ. ಗಂಭೀರ ಅಪರಾಧ ಪ್ರಕರಣಗಳ ಸಂಖ್ಯೆ ಶೇ. 28ರಷ್ಟು ಹೆಚ್ಚಿದೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ವರದಿ ಹೇಳಿದೆ. ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರು ಎಲ್ಲದರಲ್ಲೂ ಮೂಗು ತೂರಿಸಿ ಪೊಲೀಸರು ಸರಿಯಾಗಿ ಕೆಲಸ ಮಾಡದಂತೆ ಮಾಡಿದ್ದಾರೆ. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಂದ ರಾಜ್ಯದಲ್ಲಿ ಹೂಡಿಕೆ ಪ್ರಮಾಣವೂ ಇಳಿಮುಖವಾಗಿದ್ದು, ಕಳೆದ ವರ್ಷ ನಡೆದ ಇನ್ವೆಸ್ಟ್ ಕರ್ನಾಟಕದಲ್ಲಿ ಮಾಡಿಕೊಂಡ ಒಪ್ಪಂದಗಳ ಪೈಕಿ ಶೇ. 7.8ರಷ್ಟು ಮಾತ್ರ ಹೂಡಿಕೆಯಾಗಿದೆ. ಮಂತ್ರಿಗಳ ಮಕ್ಕಳೇ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದಾರೆ. ಇದಕ್ಕೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಕಾರಣವಾಗಿರುವಾಗ ಅವರು ಅಚ್ಚೇದಿನ್ ನೋಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬೆಂಗಳೂರಲ್ಲಿ 25 ಸೀಟು: ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ಮಹಾನಗರ ಮತ್ತು ನಗರ ಜಿಲ್ಲೆಯ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಭರವಸೆಯನ್ನು ಈ ಸಮಾವೇಶದಲ್ಲಿ ಯಡಿಯೂರಪ್ಪ ಅವರಿಗೆ ನೀಡುತ್ತೇನೆ ಎಂದರು.
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಶಾಸಕರಾದ ಎಸ್.ಸುರೇಶ್ಕುಮಾರ್, ಸಿಟ.ರವಿ, ಬಿ.ಎನ್.ವಿಜಯಕುಮಾರ್, ರವಿ ಸುಬ್ರಮಣ್ಯ ವಿಧಾನ ಪರಿಷತ್ ಸದಸ್ಯರಾದ ವಿ.ಸೋಮಣ್ಣ, ತಾರಾ ಅನುರಾಧ, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಎಸ್.ಮುನಿರಾಜು, ಮಹಾನಗರ ಅಧ್ಯಕ್ಷ ಪಿ.ಎನ್.ಸದಾಶಿವ ಮತ್ತಿತರರು ಇದ್ದರು.
ನಾನು ಚಿಕ್ಕಂದಿನಲ್ಲೇ ನನ್ನ ತಾಯಿಯನ್ನು ಕಳೆದುಕೊಂಡೆ. ಆದ್ದರಿಂದ ತಾಯಿಯ ಅಭಿಮಾನ, ಪ್ರೀತಿಯ ಹೆಚ್ಚು ಪರಿಚಯ ನನಗಿಲ್ಲ. ಸಮಾವೇಶಕ್ಕೆ ಬಂದಿರುವ ತಾಯಂದಿರಲ್ಲೇ ನನ್ನ ತಾಯಿಯನ್ನು ಕಾಣುತ್ತೇನೆ. ಆದ್ದರಿಂದ ಪ್ರತಿನಿತ್ಯ ತಾಯಂದಿರು ಪೂಜೆ ಮಾಡುವಾಗ ಯಡಿಯೂರಪ್ಪಗೆ ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಹೋಗಲಿ ಎಂದು ಪ್ರಾರ್ಥಿಸಿ ದೇವರಿಗೆ ಎರಡು ಹೂವು ಹಾಕಿ.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾತ್ರಿ 9ಕ್ಕೆ ಸ್ಟೀಲ್ ಬ್ರಿಡ್ಜ್ (ಅವ್ಯವಹಾರ), 10 ಗಂಟೆಗೆ ಸಚಿವ ಕೆ.ಜೆ.ಜಾರ್ಜ್ (ಅಪರಾಧ), 11 ಗಂಟೆಗೆ ಮರಳು ಕಳ್ಳಸಾಗಣೆ (ಅಪರಾಧ) ಮತ್ತು ಮಧ್ಯರಾತ್ರಿ 12 ಗಂಟೆಗೆ ಮೇಟಿಯ (ಕಲರ್ಫುಲ್) ಕನಸು ಕಾಣುತ್ತದೆ. ಯಾವಾಗಲೂ ನಿದ್ದೆ ಮಾಡುತ್ತಾ ಇಂತಹ ಕನಸುಗಳಲ್ಲೇ ದಿನ ಕಳೆಯುತ್ತಿರುವ ಅವರು ರಾಜ್ಯದ ಅಭಿವೃದ್ಧಿ ಮಾಡುವುದಾದರೂ ಹೇಗೆ?
– ಅನಂತಕುಮಾರ್, ಕೇಂದ್ರ ಸಚಿವ
ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ದುಡ್ಡಲ್ಲಿ ಮಜಾ ಮಾಡುತ್ತಾ ಬುರುಡೆ ಬಿಟ್ಟುಕೊಂಡು ಅಧಿಕಾರ ನಡೆಸುತ್ತಿದೆ. ಇದರ ಪರಿಣಾಮ ರಾಜ್ಯದ ಸಾಲ ಹೆಚ್ಚಾಗಿ ಪ್ರತಿಯೊಬ್ಬ ಪ್ರಜೆಯ ತಲೆ ಮೇಲೆ 38 ಸಾವಿರ ರೂ. ಸಾಲದ ಹೊರೆ ಬೀಳುವಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಗುಡಿಸಿ ತೊಳೆಯಲು ಜನ ಪೆನಾಯಿಲ್ನೊಂದಿಗೆ ಕಾಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದರಾಮಯ್ಯನ ಕಾಯಂ ಆಗಿ ಹುಂಡಿಗೆ ಹೋಗಲೇಬೇಕಷ್ಟೆ.
– ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ನಮ್ಮ ವಿರುದ್ಧ ಷಡ್ಯಂತ್ರ: ಎಚ್.ಡಿ. ರೇವಣ್ಣ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ
ನಮ್ಮ ವಿರುದ್ಧ ಷಡ್ಯಂತ್ರ: ಎಚ್.ಡಿ. ರೇವಣ್ಣ