ಮರಣೋತ್ತರ ಪರೀಕ್ಷೆಗೆ ಖಾಸಗಿ ಆಸ್ಪತ್ರೆಗೆ ಕಳಿಸಿದ್ದೇಕೆ?
Team Udayavani, Dec 15, 2017, 6:15 AM IST
ಶಿರಸಿ: ಪರೇಶ್ ಮೇಸ್ತ ಮರಣೋತ್ತರ ಪರೀಕ್ಷೆಗೆ ಖಾಸಗಿ ಆಸ್ಪತ್ರೆಗೆ ಕಳಿಸಿದ್ದೇಕೆ? ಸರಕಾರಿ ಆಸ್ಪತ್ರೆ ವೈದ್ಯರಿಗೆ ಸಾಮರ್ಥ್ಯ ಇರಲಿಲ್ಲವೇ? ಇಲ್ಲಿ ಯಾರ ಒತ್ತಡಕ್ಕೆ ದಾರಿ ತಪ್ಪಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರಶ್ನಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಸ್ತ ಅವರ ತಂದೆ ಉಸ್ತುವಾರಿ ಸಚಿವರಿಗೆ ಹಣ ವಾಪಸ್ ನೀಡಿದ್ದು ಸರಿ ಇದೆ. ಅವರು ಭಿಕ್ಷೆ ಕೇಳಿಲ್ಲ. ಅವರ ಮಗನ ಸಾವಿಗೆ ನ್ಯಾಯ ಕೇಳಿದ್ದಾರೆ. ನೆರವಾಗುವದಿದ್ದರೆ ಸರ್ಕಾರದಿಂದ ಆಗಬೇಕಿತ್ತು. ಹಿಂದು ಸಮಾಜ ಮೇಸ್ತ ಕುಟುಂಬಕ್ಕೆ ನೆರವಾಗುತ್ತದೆ. ಖಾನಾಪುರ ಟಿಕೆಟ್ ಆಕಾಂಕ್ಷಿ ನಿಂಬಾಳ್ಕರ ಅವರ ಪತಿ ಐಜಿ ಆದರೆ ನ್ಯಾಯ ಎಲ್ಲಿ ಸಿಗುತ್ತದೆ ಎಂದರು.
18ರಂದು ಹೊನ್ನಾವರಕ್ಕೆ ಬಿಜೆಪಿ ನಾಯಕರು ಆಗಮಿಸಲಿದ್ದಾರೆ. ಭ್ರಷ್ಟ ಅಧಿಕಾರಿಗಳ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು.
ಶಿರಸಿಯಲ್ಲೂ ಅಮಾಯಕರ ವಿರುದ್ಧವೇ ಪ್ರಕರಣ ದಾಖಲಾಗಿದೆ.
ಪೊಲೀಸರೇ ಕಲ್ಲು ತೂರಿದ, ಗಾಜು ಒಡೆದ ದಾಖಲೆಗಳಿವೆ. 307 ಪ್ರಕರಣ ದಾಖಲಿಸಿದ್ದೂ ಯಾಕೆ? ಪರೇಶ್ ಸಾವಿಗೆ ನ್ಯಾಯ ಒದಗಿಸಿಕೊಡಲು ಹಾಗೂ ಸಿಬಿಐ ತನಿಖೆಗೆ ವಹಿಸಲು ಒತ್ತಡ ಹಾಕಲು ಜಿಲ್ಲಾ ಜನತೆ ನೆರವಾಗಿದ್ದಾರೆ. ವಾರದಲ್ಲಿ ಸಿಬಿಐಗೆ ವಹಿಸಿದ ಉದಾಹರಣೆ ಬೇರೆಲ್ಲೂ ಇಲ್ಲ ಎಂದರು.