ಚಿಕಿತ್ಸೆ : ಬೆಂಗಳೂರಿಗೆ ಕುಗ್ರಾಮದ ಬಾಲಕಿ
Team Udayavani, Dec 22, 2017, 11:13 AM IST
ಬೈಂದೂರು: ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸುವುದಕ್ಕಾಗಿ ಬೈಂದೂರು ಅರೆಶಿರೂರಿನಿಂದ ಗುರುವಾರ ಝೀರೊ ಟ್ರಾಫಿಕ್ ಮೂಲಕ ಆ್ಯಂಬುಲೆನ್ಸ್ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದ್ದು, ಬಾಲಕಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಅನುಷಾಳನ್ನು ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲು ಆಕಯ ತಂದೆ, ಶಿಕ್ಷಕ ಸಂಜೀವ ಗೌಡ ಅವರು ತನ್ನ ಮನೆ ಸಮೀಪದ ನಿವಾಸಿ, ಕರ್ನಾಟಕ ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಅವರಲ್ಲಿ ನೆರವಿಗಾಗಿ ಮನವಿ ಮಾಡಿದ್ದರು.
ನೆರವು ನೀಡಿದ ಕಾರ್ಮಿಕ ವೇದಿಕೆ; ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ
ವಿ ಶೆಟ್ಟಿ ಅವರು ಕೂಡಲೇ ಬೆಂಗಳೂರಿನ ಆಸ್ಪತ್ರೆಯನ್ನು ಸಂಪರ್ಕಿಸಿ ಅನುಷಾಳ ವೈದ್ಯಕೀಯ ದಾಖಲೆಗಳನ್ನು ಕಳುಹಿಸಿದ್ದರು. ತತ್ಕ್ಷಣ ಬಂದಲ್ಲಿ ಚಿಕಿತ್ಸೆ ನೀಡಿ ಬಾಲಕಿಯನ್ನು ರಕ್ಷಿಸಬಹುದು ಎಂದು ಅಲ್ಲಿನ ವೈದ್ಯರು ತಿಳಿಸಿದ್ದರು. ಕೂಡಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಿದ ರವಿ ಶೆಟ್ಟಿ ಅವರು ಶೂನ್ಯ ಟ್ರಾಫಿಕ್ ಮೂಲಕ ಬಾಲಕಿಯನ್ನು ಮಂಗಳೂರು ವಿಮಾನನಿಲ್ದಾಣ ತಲುಪಿಸುವಂತೆ ಕೇಳಿ ಕೊಂಡಿದ್ದರು. ಅರೆಶಿರೂರಿನಿಂದ ಮಂಗಳೂರಿಗೆ ಝೀರೋ ಟ್ರಾಫಿಕ್ನಲ್ಲಿ ಆ್ಯಂಬುಲೆನ್ಸ್ ಪ್ರಯಾಣಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಹಕಾರ ನೀಡಿತ್ತು.
ಬಡ ಕುಟುಂಬಕ್ಕೆ ಬರಸಿಡಿಲು
ಕಾಲ್ತೊಡುವಿನ ಕಪ್ಪಾಡಿ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಂಜೀವ ಗೌಡರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ. ಈ ಹಿಂದೆ ಅವರ ಓರ್ವ ಮಗ ಇದೇ ರೀತಿ ಯಕೃತ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಸಾಲ ಮಾಡಿ ಚಿಕಿತ್ಸೆ ನೀಡಿದರೂ ಫಲಿಸದೆ ಮೃತಪಟ್ಟಿದ್ದರು. ಆಗಿನ ಸಾಲ ತೀರಿಸಲಾಗದೆ ಒದ್ದಾಡುತ್ತಿದ್ದ ಕುಟುಂಬಕ್ಕೆ ಈಗ ಅನುಷಾಳ ಕಾಯಿಲೆ ಬರಸಿಡಿಲಿನಂತೆ ಎರಗಿದೆ.
ಹತ್ತು ನಿಮಿಷಗಳಲ್ಲಿ ಝೀರೋ ಟ್ರಾಫಿಕ್ ನಿರ್ಮಿಸಿದ ಇಲಾಖೆ
ಕೇವಲ 10 ನಿಮಿಷಗಳಲ್ಲಿ ಬೈಂದೂರಿನಿಂದ ಮಂಗಳೂರು ವಿಮಾನ ನಿಲ್ದಾಣದವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಒದಗಿಸಿಕೊಡುವ ಮೂಲಕ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ. 150 ಕಿ.ಮೀ.ಗಳಷ್ಟು ದೂರ ಶೂನ್ಯ ಸಾರಿಗೆ ನಿರ್ಮಾಣ ರಾಜ್ಯದಲ್ಲಿ ಇದೇ ಪ್ರಥಮ. ವಿದ್ಯಾರ್ಥಿನಿಯ ಸಂಕಷ್ಟಕ್ಕೆ ಡಿಸಿ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸ್ಪಂದನೆ ಮೆಚ್ಚುಗೆ ಗಳಿಸಿದೆ.