ಬಂದ್; ಮಹಾರಾಷ್ಟ್ರ ಸ್ತಬ್ಧ: ದಲಿತ ಸಂಘಟನೆಗಳ ಆಕ್ರೋಶ
Team Udayavani, Jan 3, 2018, 9:40 AM IST
ಮುಂಬಯಿ: ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ಸೇನೆಯು ಮಹಾರಾಷ್ಟ್ರದ ಪೇಶ್ವೆಗಳ ಸೈನ್ಯವನ್ನು ಸೋಲಿಸಿದ ಭೀಮ-ಕೊರೆಗಾಂವ್ ಯುದ್ಧದ 200ನೇ ವರ್ಷಾಚರಣೆಯ ಬಳಿಕ ಭುಗಿಲೆದ್ದಿರುವ ಹಿಂಸಾಚಾರವು ಪುಣೆ ಹಾಗೂ ಮುಂಬಯಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಬಿಜೆಪಿ ಸರ್ಕಾರದ ವಿರುದ್ಧ ದಲಿತ ಸಂಘಟನೆಗಳು ಬುಧವಾರ ಮಹಾರಾಷ್ಟ್ರ ಬಂದ್ಗೆ ಕರೆ ನೀಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜ್ಯಾದ್ಯಂತ ಉದ್ವಿಗ್ನ ಪರಿಸ್ಥಿತಿ ಕಂಡು ಬಂದಿದ್ದು ಆಯಕಟ್ಟಿನ ಪ್ರದೇಶಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಶಾಲಾ ಕಾಲೇಜುಗಳ ವಾಹನಗಳು ಸುರಕ್ಷತೆಯ ದೃಷ್ಟಿಯಿಂದ ರಸ್ತೆಗಿಳಿದಿಲ್ಲ. ಮುಂಬಯಿಯ ಬಹುತೇಕ ಶಾಲೆಗಳು ಇಂದು ಪಾಠ ಮಾಡುವ ಸಾಧ್ಯತೆಗಳಿಲ್ಲ.
ಮುಂಬಯಿಯಲ್ಲಿ ಡಬ್ಟಾವಾಲಾಗಳು ಇಂದು ಯಾವುದೇ ಸೇವೆ ನೀಡುವುದಿಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷ ಸುಭಾಷ್ ಠಕ್ಕರ್ ಹೇಳಿದ್ದಾರೆ. ಸಂಚಾರ ಅಸಾಧ್ಯವಾಗಿರುವ ಕಾರಣ ಮಾತ್ರ ಸೇವೆ ನೀಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಥಾಣೆ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಕಚೇರಿಗಳಿಗೆ ಹೊರಟಿದ್ದ ಹಲವರು ವಾಹನಗಳು ಸಿಗದೆ ಮನೆಗಳಿಗೆ ಮರಳಿದ್ದಾರೆ.
ಚೆಂಬೂರ್ ಮತ್ತು ಥಾಣೆಯ ಕೆಲವೆಡೆ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಹಿಂಸಾಚಾರಕ್ಕೆ ಹೆದರಿ ಖಾಸಗಿ ಬಸ್ ಮತ್ತು ಟ್ಯಾಕ್ಸಿಗಳು ರಸ್ತೆಗಳಿದಿಲ್ಲ. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದೆ.
ಯಾವುದೇ ಕಾರಣಕ್ಕೂ ಶಾಂತಿ ಭಂಗ ಮಾಡುವ ಯತ್ನ ಮಾಡಬೇಡಿ ಎಂದು ಜನತೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನವಿ ಮಾಡಿದ್ದಾರೆ.
ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಕರೆ ನೀಡಿರುವ ಬಂದ್ಗೆ 250 ಕ್ಕೂ ಹೆಚ್ಚು ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿವೆ.
ಸೋಮವಾರ ಸಂಜೆ ನಡೆದಿದ್ದ ಯುದ್ಧ ವರ್ಷಾಚರಣೆ ಕಾರ್ಯಕ್ರಮದಲ್ಲಿ ಘರ್ಷಣೆ ಉಂಟಾಗಿ ವ್ಯಕ್ತಿಯೊಬ್ಬ ಬಲಿಯಾಗಿದ್ದ. ಇದು ಮತ್ತಷ್ಟು ಹಿಂಸಾಚಾರಕ್ಕೆ ನಾಂದಿ ಹಾಡಿತು. ಮಂಗಳವಾರ ಬೆಳಗ್ಗೆಯೇ ಬೀದಿಗಿಳಿದ ಪ್ರತಿಭಟನಾಕಾರರು, ಮುಂಬಯಿಯ ಹಲವಾರು ಕಡೆ ರಸ್ತೆ ತಡೆ ಮಾಡಿದರಲ್ಲದೆ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಗದ್ದಲ ನಡೆಸಿದರು. ಈ ಹಿಂಸಾಚಾರದ ಕಿಚ್ಚು ಪ್ರಿಯದರ್ಶಿನಿ, ಕುರ್ಲಾ, ಸಿದ್ದಾರ್ಥ್ ಕಾಲನಿಗಳಿಗೂ ಹಬ್ಬಿತು. ಅಮರ್ ಮಲಾಲ್ ಪ್ರಾಂತ್ಯದಲ್ಲಿ ಟಿವಿ ವರದಿಗಾರನ ಮೇಲೆ ಹಲ್ಲೆ ನಡೆಯಿತುು. ರಮಾಬಾಯಿ ಅಂಬೇಡ್ಕರ್ ನಗರದಲ್ಲಿ ಬಸ್ಗಳಿಗೆ ಕಲ್ಲು ತೂರಾಟ ನಡೆಸಿ, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಪ್ರತಿಭಟನೆ ತಾರಕಕ್ಕೇರಿದ್ದನ್ನು ಗಮನಿಸಿದ ಕೇಂದ್ರೀಯ ರೈಲ್ವೇ ಕುರ್ಲಾ ಹಾಗೂ ವಶಿ ನಡುವಿನ ರೈಲು ಸಂಚಾರ ಸ್ಥಗಿತಗೊಳಿಸಿತು.
ಹಲವಾರು ಪ್ರಾಂತ್ಯಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಗಲಭೆ ಪೀಡಿತ ಪ್ರದೇಶಗಳಲ್ಲಿ ಪೊಲೀಸರು ನಾಗರಿಕರಿಗೆ ಅಭಯ ಸಂದೇಶ ಸಾರುತ್ತಿದ್ದಾರೆ. ಇದೇ ವೇಳೆ, ಘಟನೆಯ ತನಿಖೆಗೆ ಸಿಎಂ ದೇವೇಂದ್ರ ಫಡ್ನವೀಸ್ ಅವರು ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ.
ಗಲಭೆಗೆ ಕಾರಣ
ಭೀಮ-ಕೊರೆಗಾವ್ ಯುದ್ಧದಲ್ಲಿ ಬ್ರಿಟಿಷರ ಜಯಕ್ಕೆ ಕಾರಣವಾಗಿದ್ದು ಈಸ್ಟ್ ಇಂಡಿಯಾ ಸೇನೆಯಲ್ಲಿದ್ದ ದಲಿತರು ಎಂಬುದು ಇಂದಿನ ಪೀಳಿಗೆಯ ದಲಿತರ ಅಭಿಪ್ರಾಯ. ಅಂದಿನ ಸಮಾಜದಲ್ಲಿ ತಮ್ಮನ್ನು ಅಸ್ಪೃಶ್ಯರೆಂದು ಹೀನಾ ಯ ವಾಗಿ ಕಾಣುತ್ತಿದ್ದ ದಲಿತರ ತೋಳ್ಬಲವನ್ನು ಸಾರಿದ ಈ ಯುದ್ಧದ ಸಂಸ್ಮರಣೆಗೆ ದಲಿತ ಮುಖಂ ಡರು ಮುಂದಾಗಿದ್ದನ್ನು ಬಲ ಪಂಥೀಯ ಸಂಘಟನೆಗಳು ವಿರೋಧಿಸಿದ್ದು ಹಿಂಸಾ ಚಾರಕ್ಕೆ ಮೂಲ ಕಾರಣ ಎನ್ನಲಾಗಿದೆ.