ಜೆಪ್ಪುಕುಡ್ಪಾಡಿ ಮುಖ್ಯ ರಸ್ತೆಗೆ ಗುದ್ದಲಿಪೂಜೆ
Team Udayavani, Jan 20, 2018, 12:16 PM IST
ಮಹಾನಗರ: ಜೆಪ್ಪು ಕುಡ್ಪಾಡಿ ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿಯ ಗುದ್ದಲಿಪೂಜೆಯನ್ನು ಶಾಸಕ ಜೆ.ಆರ್. ಲೋಬೋ ಹಾಗೂ ಮೇಯರ್ ಕವಿತಾ ಸನಿಲ್ ಅವರು ಶುಕ್ರವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಆರ್. ಲೋಬೋ, ಕುಡ್ಪಾಡಿ ರಸ್ತೆಯು ನಗರದ ಅತೀ ಮುಖ್ಯವಾದ ಕೂಡು ರಸ್ತೆಯಾಗಿದ್ದು, ಈಗಾಗಲೇ ರೈಲ್ವೇ ಅಂಡರ್ ಪಾಸ್ ಕಾಮಗಾರಿಯು ಮುಕ್ತಾಯವಾಗಿದೆ. ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವಾಗಲಿದ್ದು, ಸಾರ್ವಜನಿಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ. ಈ ರಸ್ತೆಯ ವಿಸ್ತರಣೆ ಕಾಮಗಾರಿ ಪೂರ್ಣಗೊಂಡರೆ ಜನರ ಬೇಡಿಕೆಗಳನ್ನು ಈಡೇರಿಸಬಹುದು. ಮಂಗಳೂರು ಮಹಾನಗರ ಪಾಲಿಕೆಯ ಪ್ರೀಮಿಯಂ ಅಫೈರ್ ನಿಧಿಯಿಂದ ಈಗಾಗಲೇ 43 ಲಕ್ಷ ರೂ. ಮಂಜೂರಾಗಿದೆ. ಶೀಘ್ರ ಈ ಕಾಮಗಾರಿಯನ್ನು ಪೂರ್ತಿಗೊಳಿಸಲು ಪ್ರಯತ್ನಿಸಲಾಗುವುದು. ಮುಂದಿನ ದಿನಗಳಲ್ಲಿ ಮಂಗಳೂರುನಲ್ಲಿರುವ ಹೆಚ್ಚಿನ ಪರ್ಯಾಯ ರಸ್ತೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಪಾಲಿಕೆಯ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಪಾಲಿಕೆಯ ಸದಸ್ಯರಾದ ಅಪ್ಪಿ, ಶೈಲಜಾ, ರತಿಕಲಾ, ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಟಿ. ಕೆ . ಸುಧೀರ್, ಮೆಸ್ಕಾಂ ನಿರ್ದೇಶಕ ಸದಾಶಿವ ಅಮಿನ್, ರಮಾನಂದ ಪೂಜಾರಿ, ಮಹಮದ್ ನವಾಜ್, ಕೀರ್ತಿರಾಜ್, ಹರ್ಬರ್ಟ್ ಡಿ’ಸೋಜಾ ಅಶೋಕ್ ಕುಡ್ಪಾಡಿ , ಪಾಲಿಕೆಯ ಅಭಿಯಂತರ ಗಣಪತಿ, ಗುತ್ತಿಗೆದಾರ ಗುರುಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.