ನಟ್ಟಿಬೈಲು: ರಸ್ತೆ ಕಾಂಕ್ರೀಟ್ ಕಾಮಗಾರಿ ಪುನಾರಂಭ
Team Udayavani, Feb 1, 2018, 3:16 PM IST
ಉಪ್ಪಿನಂಗಡಿ: ನಟ್ಟಿಬೈಲು ರಸ್ತೆಯ ಕಾಮಗಾರಿ ಆರಂಭಿಸಿ ಗುತ್ತಿಗೆದಾರರು ರಸ್ತೆಯನ್ನು ಅಗೆದು ಹಾಕಿ ತೆರಳಿದ್ದರಿಂದ ನಡೆದಾಡಲೂ ಆಗದಂಥ ಸ್ಥಿತಿ ಉಂಟಾಗಿದ್ದ ಬಗ್ಗೆ ‘ಉದಯವಾಣಿ – ಸುದಿನ’ ವರದಿ ಮಾಡಿದ ಬೆನ್ನಲ್ಲೇ ಕಾಮಗಾರಿ ಬಿರುಸಿನಿಂದ ಆರಂಭಗೊಂಡಿದೆ.
ಇದು ಆಸುಪಾಸಿನ ಎರಡು ಶಾಲೆಗಳಿಗೆ ಹಾಗೂ ಹಿರೆಬಂಡಾಡಿ ಗ್ರಾಮಕ್ಕೆ ಸಂಪರ್ಕ ರಸ್ತೆಯಾಗಿದ್ದು, ಹಲವು ಸಮಯದಿಂದ ಹೊಂಡಮಯವಾಗಿತ್ತು. ಇದನ್ನರಿತ ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ ಮಡಿವಾಳ, ಭಾರತಿ ಪುಷ್ಪಕುಂಜ ಹಾಗೂ ಚಂದ್ರಾವತಿ ಅವರು ಕ್ಷೇತ್ರದ ಶಾಸಕಿ ಶಕುಂತಳಾ ಶೆಟ್ಟಿ ಅವರ ಗಮನಕ್ಕೆ ತಂದು, ಅನುದಾನ ಮಂಜೂರಾತಿಗೆ ಆಗ್ರಹಿಸಿದ್ದರು. ಅದರಂತೆ ಶಾಸಕರು 143 ಮೀ. ಉದ್ದ ಹಾಗೂ 3.5 ಮೀ. ಅಗಲದ ರಸ್ತೆಗೆ ಕಾಂಕ್ರೀಟ್ ಹಾಕುವ ಕಾಮಗಾರಿಗೆ 6 ಲಕ್ಷ ರೂ. ಬಿಡುಗಡೆ ಮಾಡಿದ್ದರು.
ಆದರೆ, ಈ ಭಾಗದ ಶಾಲೆಗಳ ವಾರ್ಷಿಕೋತ್ಸವ ನಿಮಿತ್ತ ಕಾಮಗಾರಿ ಪೂರ್ಣಗೊಳಿಸಲು ಸ್ಥಳೀಯರ ಕೋರಿಕೆಯಂತೆ ರಸ್ತೆ ಅಗೆಯಲಾಗಿತ್ತು.
ಅಷ್ಟರಲ್ಲಿ ಕಾರಣಾಂತರದಿಂದ ಕಾಮಗಾರಿ ಸ್ಥಗಿತಗೊಂಡು ಸಮಸ್ಯೆಯಾಗಿತ್ತು. ಈಗ ಮತ್ತೆ ಕಾಮಗಾರಿ ಆರಂಭಗೊಂಡಿದ್ದು, 5 ದಿನಗಳಲ್ಲಿ ಪೂರ್ಣಗೊಳ್ಳಲಿದೆ. 20 ದಿನಗಳ ಕಾಲ ನೀರುಣಿಸಿದ ಬಳಿಕ ಮಾ. 1ರಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಗುತ್ತಿಗೆದಾರ ಪಿ.ಎ. ಉಸ್ಮಾನ್ ತಿಳಿಸಿದ್ದಾರೆ.