ರನ್ ಹೋದರೂ ಪರವಾಗಿಲ್ಲ,ವಿಕೆಟ್ ಮುಖ್ಯ’ಚಾಹಲ್ಗೆ ಲಭಿಸಿದೆ ಬೆಂಬಲ…
Team Udayavani, Feb 6, 2018, 6:20 AM IST
ಸೆಂಚುರಿಯನ್: ಹರಿಯಾಣದ ಲೆಗ್ಬ್ರೇಕ್ ಗೂಗ್ಲಿ ಬೌಲರ್ ಯಜುವೇಂದ್ರ ಚಾಹಲ್ ಏಕದಿನ ಸರಣಿಯಲ್ಲಿ ಹರಿಣಗಳನ್ನು ಹೆದರಿಸುತ್ತಿರುವ ಪರಿ ನಿಜಕ್ಕೂ ರಂಜನೀಯ. 2 ಪಂದ್ಯಗಳಿಂದ 7 ವಿಕೆಟ್ ಉರುಳಿಸಿದ ಸಾಧನೆ ಚಾಹಲ್ ಅವರದು.
ರವಿವಾರದ ಸೆಂಚುರಿಯನ್ ಪಂದ್ಯದಲ್ಲಿ ಜೀವನಶ್ರೇಷ್ಠ 5 ವಿಕೆಟ್ ಬೇಟೆಯಾಡಿ ಆತಿಥೇಯರನ್ನು ಅಲ್ಪ ಮೊತ್ತಕ್ಕೆ ಗಂಟುಮೂಟೆ ಕಟ್ಟುವಂತೆ ಮಾಡಿದ್ದು ಚಾಹಲ್ ಅವರ ಅಮೋಘ ಸಾಧನೆಯಾಗಿ ದಾಖಲಾಗಿದೆ.
ತಂಡದ ನಾಯಕ ಹಾಗೂ ಆಡಳಿತ ಮಂಡಳಿ ಸಂಪೂರ್ಣ ಬೆಂಬಲ ನೀಡಿದ್ದರಿಂದ ಇಂಥದೊಂದು ಯಶಸ್ಸು ಸಾಧ್ಯವಾಯಿತು ಎಂದು ಯಜುವೇಂದ್ರ ಚಾಹಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ನಾನು ವಿಕೆಟ್ ಉರುಳಿಸಲು ಚೆಂಡನ್ನು ಸಾಮಾನ್ಯವಾಗಿ ಫ್ಲೈಟ್ ಮಾಡುತ್ತೇನೆ. ಇದು ಸಿಕ್ಸರ್ಗೆ ಹೋಗುವ ಸಾಧ್ಯತೆಯೂ ಇದೆ. ಹೋದರೆ ಹೋಗಲಿ, ಈ ಬಗ್ಗೆ ಚಿಂತಿಸಬೇಡ; ವಿಕೆಟ್ ಕೀಳುವ ಹಾದಿಯಲ್ಲಿ ಹೀಗೆ ಕೆಲವು ರನ್ ಸೋರಿಹೋದರೆ ಪರಾÌಗಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಆಡಳಿತ ಮಂಡಳಿ ನನ್ನ ಬೆನ್ನಿಗೆ ನಿಂತಿರುವುದರಲ್ಲಿ ನನ್ನ ಯಶಸ್ಸು ಅಡಗಿದೆ ಎನ್ನಬಹುದು’ ಎಂದು ಚಾಹಲ್ ಹೇಳಿದ್ದಾರೆ.
ರನ್ ಉಳಿಸುವುದೇ ಮುಖ್ಯವಲ್ಲ
“ಆರ್ಸಿಬಿ ಪರ ಇದಕ್ಕಿಂತ ಫ್ಲ್ಯಾಟ್ ಆದ ಬೆಂಗಳೂರು ಪಿಚ್ ಮೇಲೆ ನಾನು ಬೌಲಿಂಗ್ ನಡೆಸಿದ್ದೇನೆ. ಹೀಗಾಗಿ ದಕ್ಷಿಣ ಆಫ್ರಿಕಾದಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಬೌಲಿಂಗ್ ನಡೆಸಿ ಹೆಚ್ಚಿನ ಯಶಸ್ಸು ಸಂಪಾದಿಸಬಹುದು ಎಂಬುದು ನನ್ನ ಲೆಕ್ಕಾಚಾರವಾಗಿತ್ತು. ಎದುರಾಳಿ ಬ್ಯಾಟ್ಸ್ಮನ್ಗಳ ದಾಖಲೆ ಅಥವಾ ಅವರ ತಾಕತ್ತಿನ ಬಗ್ಗೆ ಚಿಂತಿಸುತ್ತ ಉಳಿದರೆ ನಿಮಗೆ ಖಂಡಿತ ಪೂರ್ಣ ಪ್ರಮಾಣದ ಸಾಮರ್ಥ್ಯವನ್ನು ಹೊರಗೆಡಹಲು ಸಾಧ್ಯವಾಗದು. ಇದು ನನ್ನ ಸ್ವಂತ ಅನುಭವ. ಐಪಿಎಲ್ನಲ್ಲಿ 4 ಓವರ್ಗಳಲ್ಲಿ ನಾನು 40 ರನ್ ಕೊಟ್ಟದ್ದೂ ಇದೆ. ರನ್ ಉಳಿಸುವ ಉದ್ದೇಶದಿಂದಷ್ಟೇ ನಾನು ಬೌಲಿಂಗ್ ಮಾಡುವುದಿಲ್ಲ. ವಿಕೆಟ್ ಉರುಳಿಸುವುದೇ ನನ್ನ ಮುಖ್ಯ ಗುರಿ, ಆದ್ದರಿಂದಲೇ ನಾನು ತಂಡದಲ್ಲಿ ಉಳಿದಿದ್ದೇನೆ’ ಎಂದರು ಚಾಹಲ್.
“ಕಳೆದ ವರ್ಷ ನಾನು ಎ ತಂಡದ ಜತೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದೆ. ಹೀಗಾಗಿ ಇಲ್ಲಿನ ಅಂಗಳ, ಪಿಚ್ ಬಗ್ಗೆ ಸ್ವಲ್ಪ ಮಟ್ಟಿಗೆ ಅರಿವಿತ್ತು. ಇಂಥ ಕಠಿನ ಪ್ರವಾಸದ ವೇಳೆ ವೀಡಿಯೋ ದೃಶ್ಯಾವಳಿಗಳನ್ನು ವೀಕ್ಷಿಸುವುದೂ ಮುಖ್ಯ’ ಎಂದು ಚಾಹಲ್ ಅಭಿಪ್ರಾಯಪಟ್ಟರು.