ರಾಹುಲ್ ಗಾಂಧಿ ಗೋ ಬ್ಯಾಕ್ ಚಳವಳಿ
Team Udayavani, Feb 9, 2018, 5:13 PM IST
ರಾಯಚೂರು: ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಕಳೆದರೂ ನ್ಯಾ| ಎ.ಜೆ. ಸದಾಶಿವ ಆಯೋಗದ ವರದಿ ಅಂಗೀಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಂಡಿಲ್ಲ. ಸರ್ಕಾರದ ಈ ನಡೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ರಾಹುಲ್ ಗಾಂಧಿ ಗೋ ಬ್ಯಾಕ್ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾ| ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ
ಸಮಿತಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಾರಸಂದ್ರ ಮುನಿಯಪ್ಪ ತಿಳಿಸಿದರು
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವರದಿ ಜಾರಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ವಿರೋ ಧಿ ನಿಲುವು ತಾಳಿದ್ದಾರೆ. ಇದನ್ನು ಖಂಡಿಸಿ ಫೆ.11ರಂದು ಜಿಲ್ಲೆಗೆ ಭೇಟಿ ನೀಡುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಗೋ ಬ್ಯಾಕ್ ಆಂದೋಲನ ನಡೆಸಲಿದ್ದು, ಅವರು ಹೋದಲೆಲ್ಲ ಕಪ್ಪು ಪಟ್ಟಿ ಪ್ರದರ್ಶಿಸಲಾಗುವುದು ಎಂದರು.
ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿದ್ದು, ಎಲ್ಲರಿಗೂ ಸಮಾನ ಮೀಸಲಾತಿ ಕಲ್ಪಿಸಲು ನ್ಯಾ| ಎ.ಜೆ.ಸದಾಶಿವ ಅವರು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ಹಿಂದಿನ ಸರ್ಕಾರಗಳು ಇದಕ್ಕೆ ಸ್ಪಂದಿಸಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವರದಿ ಅಂಗೀಕಾರಕ್ಕೆ ಮುಂದಾಗದೆ ದಲಿತರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ದೂರಿದರು.
ಇಷ್ಟು ದಿನ ದಲಿತರಲ್ಲಿಯೇ ವಿರೋಧವಿದೆ ಎಂದು ವರದಿ ಜಾರಿಗೊಳಿಸಲಿಲ್ಲ. ಆದರೆ, ದಲಿತರೆಲ್ಲ ಒಗ್ಗಟ್ಟು ತೋರಿದ್ದು, ನಮಗೆ ಸಹಮತವಿದೆ ಎಂದು ತಿಳಿಸಿದಾಗ್ಯೂ ಜಾರಿಗೆ ಮುಂದಾಗುತ್ತಿಲ್ಲ. ಈ ಕುರಿತು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿಡುಕಿನ ಉತ್ತರ ನೀಡುವ ಮೂಲಕ ನಮ್ಮ ಬಗೆಗಿನ ತಾತ್ಸಾರ ತೋರಿದರು. ಕಾಂಗ್ರೆಸ್ ಸರ್ಕಾರ ಮಾದಿಗರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ ಎಂದು ಅವರು ದೂರಿದರು.
ಸಮಿತಿ ರಾಜ್ಯ ಮುಖಂಡ ಎನ್.ಮೂರ್ತಿ ಮಾತನಾಡಿ, ಚುನಾವಣೆ ಮುನ್ನ ಬೇಡಿಕೆ ಈಡೇರಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ವರದಿ ಜಾರಿ ವಿಚಾರ ಬಂದಾಗ ಪರ-ವಿರೋಧದ ನೆಪವೊಡ್ಡಿ ಸಮಾಜ ಒಡೆಯುವ ಕುತಂತ್ರ ನಡೆಸುತ್ತಿದ್ದಾರೆ. ಮೀಸಲಾತಿಯಲ್ಲಿ ಸಮಪಾಲು ಸಿಕ್ಕರೂ ಪಡೆಯಲು ಸಿದ್ಧ ಎಂದು ದಲಿತರೆಲ್ಲ ಒಪ್ಪಿದ್ದೇವೆ. ಆದರೆ, ಕೆಲ ಭಟ್ಟಂಗಿಗಳ ಮಾತು ಕೇಳಿ ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ. ವೀರಶೈವ ಲಿಂಗಾಯತ ಧರ್ಮ ಪ್ರತ್ಯೇಕಿಸಿ ರಾಜಕೀಯ ಬೇಳೆ ಬೇಯಿಸಿಕೊಂಡಂತೆ ದಲಿತರನ್ನೂ ಒಡೆದಾಳುವ ಚಿಂತನೆಯಲ್ಲಿದ್ದಾರೆ. ಆದರೆ, ಅದು ಎಂದಿಗೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ನೇರವಾಗಿ ಕೋಮುವಾದ ಮಾಡಿದರೆ, ಕಾಂಗ್ರೆಸ್ನವರು ಮೃದು ಕೋಮವಾದ ಮಾಡುತ್ತಾರೆ. ಬಜೆಟ್ನಲ್ಲಿ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಮಾದಿಗರು ಒಟ್ಟಾಗಿ ಕಾಂಗ್ರೆಸ್ಗೆ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ದಲಿತಪರ ಸಂಘಟನೆಗಳ ಮುಖಂಡರಾದ ರವೀಂದ್ರನಾಥ ಪಟ್ಟಿ,
ಅಂಬಣ್ಣ ಅರೋಲಿಕರ್, ಬಸವರಾಜ ಸಾಸಲಮರಿ, ಜಯಣ್ಣ, ಹನುಮಂತಪ್ಪ, ರವಿಕುಮಾರ, ಲಕ್ಷಿ ¾à ನಾರಾಯಣ, ಅಬ್ರಾಹಂ ಹೊನ್ನಟಗಿ, ಹನುಮಂತಪ್ಪ ಅತ್ತನೂರು ಇತರರು ಇದ್ದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಢೋಂಗಿ ಸಮಾಜವಾದಿ. ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೂ ದಲಿತರನ್ನು ಕಡೆಗಣಿಸಿದ್ದಾರೆ. ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಚಾರದಲ್ಲಿ ಮಾತನಾಡಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಒಟ್ಟಾಗುತ್ತೇವೆ. ಎನ್. ಮೂರ್ತಿ, ದಲಿತ ಮುಖಂಡ