ಕೃಷಿ ಸಮಸ್ಯೆ ನೀಗಲು ತಜ್ಞರ ಜತೆ ಪಿಎಂ ಚರ್ಚೆ
Team Udayavani, Feb 15, 2018, 10:35 AM IST
ಹೊಸದಿಲ್ಲಿ: 2022ರ ಹೊತ್ತಿಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ, ತಮ್ಮ ಗುರಿ ಸಾಕಾರಕ್ಕಾಗಿ ದೇಶದ ಆರ್ಥಿಕ, ಶಿಕ್ಷಣ ತಜ್ಞರು, ಸಚಿವಾಲಯಗಳ ಅಧಿಕಾರಿಗಳುಳ್ಳ ಸಮಾವೇಶವನ್ನು ಕೇಂದ್ರ ಕೃಷಿ ಇಲಾಖೆ ಆಯೋಜಿಸಿದೆ.
ಇದೇ ತಿಂಗಳ 18, 19ರಂದು ದಿಲ್ಲಿಯ ಪುಸಾ ಅಗ್ರಿಕಲ್ಚರಲ್ ಕಾಂಪ್ಲೆಕ್ಸ್ನಲ್ಲಿ ಈ ಸಮ್ಮೇಳನ ನಡೆಯಲಿದ್ದು, ಇಲ್ಲಿ ರೈತರ ಕೃಷಿ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ಕುರಿತಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚಿಂತನ- ಮಂಥನ ನಡೆಸಲಾಗುತ್ತದೆ. ಸಮ್ಮೇಳನಕ್ಕೆ ರೈತ ಸಮುದಾಯದ ಪ್ರತಿನಿಧಿಗಳನ್ನೂ ಆಹ್ವಾನಿಸಲಾಗಿದೆ. ರೈತರಿಂದ ಬರುವ ಬೇರುಮಟ್ಟದ ಸಮಸ್ಯೆಗಳ ಮೇಲೆಯೇ ಸಮ್ಮೇಳನದಲ್ಲಿ ಚರ್ಚಿಸುವ ಉದ್ದೇಶವನ್ನು ಹೊಂದಲಾಗಿದೆ. ಇಲ್ಲಿ ಕೈಗೊಂಡ ತೀರ್ಮಾನಗಳನ್ನು ಪರಿಶೀಲಿಸಿ, ಇವನ್ನು ಮಾದರಿ ಸೂತ್ರಗಳನ್ನಾಗಿಸಿ ಶೀಘ್ರವೇ ಅನುಷ್ಠಾನಗೊಳಿಸಲು ಕೇಂದ್ರ ಆಲೋಚಿಸಿದೆ.
ಇದಲ್ಲದೆ, ಬೆಂಬಲ ಬೆಲೆಯೂ ಸೇರಿ, ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಕೆ, ಉತ್ತಮ ದರ್ಜೆಯ ಬೀಜ, ಗರಿಷ್ಠ ಫಸಲು ಸಾಧಿಸಲು ಕ್ರಮ, ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಸುಧಾರಣೆ ಮುಂ ತಾದ ಉದ್ದೇಶಗಳನ್ನು ಸಾಧಿಸುವ ಬಗ್ಗೆ ತಜ್ಞರ, ರೈತರ ಸಲಹೆ ಪಡೆಯಲಾಗುತ್ತದೆ.
ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದೇ ರೈತರು ತಮ್ಮ ಫಸಲನ್ನು ರಸ್ತೆಗೆ ಸುರಿದು ಪ್ರತಿಭಟಿಸುವಂಥ ಘಟನೆಗಳು ಆಗಾಗ ಜರುಗುತ್ತಲೇ ಇರುವುದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ, ಇಂಥ ಸಮಸ್ಯೆಗಳು ಬಾರದಂತೆ ಕ್ರಮ ಕೈಗೊಳ್ಳಲು ಉದ್ದೇಶಿದೆ.