ಪುಟ್ಟಕತೆಗಳು
Team Udayavani, Feb 18, 2018, 8:15 AM IST
ಮನುಷ್ಯ
ಅರ್ಧ ತುಂಬಿದ್ದ ನೀರಿನ ಪಾತ್ರೆಯನ್ನು ನೋಡಿ ಒಬ್ಟಾತ ನುಡಿದ, “”ಈ ಪಾತ್ರೆ ಅರ್ಧ ಖಾಲಿಯಾಗಿದೆ, ನಾನು ನಿರಾಶಾವಾದಿ!”
ಇನ್ನೊಬ್ಬ ಹೆಮ್ಮೆಯಿಂದ ಕೂಗಿದ, “”ಈ ಪಾತ್ರೆ ಅರ್ಧ ತುಂಬಿದೆ, ನಾನು ಆಶಾವಾದಿ!” ಮೂರನೆಯವ ಆ ಪಾತ್ರೆಯ ನೀರನ್ನು ಬಾಯಾರಿದ ಮಗುವಿಗೆ ಉಣಿಸುತ್ತ ಪಿಸುನುಡಿದ, “”ನಾನು ಮನುಷ್ಯ!”
ಭಯ
ಸಾಯಂಗೃಹನನ್ನು ಕೇಳಿದೆ, “”ಸ್ಮಶಾನವೇಕೆ ಭಯ ಹುಟ್ಟಿಸುತ್ತದೆ?”
ಆತ ತಿರುಗಿ ಪ್ರಶ್ನಿಸಿದ, “”ಸಮುದ್ರದ ನೀರೇಕೆ ಇಷ್ಟೊಂದು ಉಪ್ಪು?”
“”ನದಿಗಳೆಲ್ಲವೂ ತಮ್ಮ ತಮ್ಮ ಉಪ್ಪನ್ನು ತೊರೆದ ಜಾಗವದು”
“”ಹಾಗೆಯೇ ಸತ್ತವರೆಲ್ಲರೂ, ತಮ್ಮ ತಮ್ಮ ಸಾವಿನ ಭಯವನ್ನು ತೊರೆದ ಜಾಗವಿದು!”
ಗ್ರಂಥ
ಖನ್ನತೆಯಿಂದ ಬಳಲುತ್ತಿದ್ದ ಒಬ್ಟಾತ, ಗುರುವಿನ ಬಳಿ ತನ್ನ ಸಮಸ್ಯೆಯನ್ನು ತೋಡಿಕೊಂಡ.
ಗುರು ಆತನಿಗೆ ಧರ್ಮಗ್ರಂಥವೊಂದನ್ನು ನೀಡಿ, ಅದನ್ನು ಪ್ರತಿನಿತ್ಯವೂ ಪೂಜಿಸಿದರೆ ಸಮಸ್ಯೆ ಪರಿಹಾರವಾಗುತ್ತದೆಂದು ಸೂಚಿಸಿದ.
ಅದರಂತೆಯೇ ಆತ ಆ ಗ್ರಂಥವನ್ನು ಪೂಜಾಗೃಹದಲ್ಲಿಟ್ಟು, ಗಂಧ, ಆರತಿಗಳಿಂದ ದಿನವೂ ಪೂಜಿಸಿದ.
ಆದರೂ ಯಾವ ಫಲವೂ ಕಾಣದಿ¨ªಾಗ ಮತ್ತೆ ಗುರುವಿನ ಬಳಿ ನಡೆದು ಧರ್ಮಗ್ರಂಥವನ್ನು ದೂರಿದ.
ಗುರು ವಿಷಾದದ ನಗೆ ನಕ್ಕು ನುಡಿದ, “”ಹುಚ್ಚಾ! ನೀನು ಒಂದು ದಿನವೂ ಆ ಗ್ರಂಥವನ್ನು ಪೂಜಿಸಲಿಲ್ಲ!”
ಅನುಭವ
ಪಂಡಿತ ಹೇಳಿದ, “”ನಮ್ಮ ಇಂದ್ರಿಯಗಳ ಅನುಭವಕ್ಕೆ ನಿಲುಕದ ಸಂಗತಿಗಳೆಲ್ಲವೂ ಮಿಥ್ಯೆ!”
ರಸಿಕ ಕೇಳಿದ, “”ಅನುಭವವೆಂದರೇನು?”
ಪ್ರೀತಿ
ಪರಮ ಕ್ರೂರಿಯೊಬ್ಬ ಝೆನ್ ಗುರುವಿನ ಅಡಿಯಲ್ಲಿ ತನ್ನ ಕತ್ತಿಯನ್ನಿರಿಸಿ ನುಡಿದ, “”ಎಲ್ಲವನ್ನು ಬಿಟ್ಟು ಬರುತ್ತೇನೆ, ನನಗೆ ವೈರಾಗ್ಯವನ್ನು ಬೋಧಿಸಿ!”
“”ನೀನು ಇಲ್ಲಿಯವರೆಗೆ ಯಾರನ್ನಾದರೂ ಪ್ರೀತಿಸಿರುವೆಯಾ?”, ಕೇಳಿದನು ಗುರು.
“”ಇಲ್ಲ”
“”ಮೊದಲು ಪ್ರೀತಿಸು ಮಗೂ, ಎಲ್ಲವನ್ನು ಬಿಡುವ ಮುನ್ನ ಏನಾದರೂ ಇರಬೇಕಲ್ಲವೆ?”
ಕನ್ನಡಿ
ಯುದ್ಧದಲ್ಲಿ ಕಾಲುಗಳನ್ನು ಕಳೆದುಕೊಂಡ ರಾಜಕುಮಾರ, ಕತ್ತಲ ಕೋಣೆಯನ್ನು ಸೇರಿ, ತನ್ನ ದುಃಸ್ಥಿತಿಗೆ ಮರುಗುತ್ತ ಅನೇಕ ವರ್ಷಗಳನ್ನು ಸವೆಸಿದನು. ಹೀಗಿರಲೊಂದು ದಿನ ಕನ್ನಡಿಗಳನ್ನು ಮಾರುವವಳೊಬ್ಬಳು ಅರಮನೆಯೆದುರಿನ ಬೀದಿಯಲ್ಲಿ ಹಾಡುತ್ತ ಸಾಗಿದಳು. ಕುತೂಹಲದಿಂದ ಕಿಟಕಿಯನ್ನು ತೆರೆದ ರಾಜಕುಮಾರನಿಗೆ, ಆಕೆ ಹೊತ್ತ ಕನ್ನಡಿಗಳಲ್ಲಿ ತನ್ನ ಬೆನ್ನ ಹಿಂದೆ ಹುದುಗಿದ್ದ ರೆಕ್ಕೆಗಳ ಪ್ರತಿಬಿಂಬ ಕಾಣಿಸಿತು.
ರಾಜಕುಮಾರ ಆನಂದದಿಂದ ಆಕೆಯನ್ನು ಅಪ್ಪಿದ, ತತ್ಕ್ಷಣವೇ ಶಾಪವನ್ನು ಕಳೆದುಕೊಂಡ ಕನ್ನಡಿ ಮಾರುವವಳು ಕಿನ್ನರಿಯಾದಳು.
ಇನ್ನೀಗ ಇಬ್ಬರೂ ಒಂದಾಗಿ ಬಾನಿಗೇರಿದರು, ಮೇಲೆ ಹಾರಿದರು!
ಅಡ್ಡದಾರಿ
ಸಾಧಕನನ್ನು ಕೇಳಿದೆ, “”ಗೆಲುವು ಸಾಧಿಸಲು ಅಡ್ಡ ದಾರಿ ಇದೆಯೆ?”
“”ಇದೆ”
“”ಯಾವುದು?”
“”ಸೋಲು!”
ಅರ್ಥ
ಶಿಷ್ಯ: ಬದುಕೆಂದರೇನು?
ಗುರು: ಅರ್ಥವಾಗದ್ದನ್ನು ಅರ್ಥವಾದಂತೆ ನಟಿಸುವುದು.
ಶಿಷ್ಯ: ಅರ್ಥವಾಯಿತು!
ಗುಡಿ
ದೇವರಿಲ್ಲ ಎಂದು ಆತ ನಾಲ್ಕು ಜನರೆದುರು ಸಾರಿ ಹೇಳಿದ.
ಮೊದಲನೆಯವ ಒಪ್ಪಿದನು.
ಎರಡನೆಯವ ನಕ್ಕನು.
ಮೂರನೆಯವ ನಿಂದಿಸಿದನು.
ನಾಲ್ಕನೆಯವ ಕೊಂದನು.
ಈಗ ಮೊದಲನೆಯವ ಸತ್ತವನಿಗೊಂದು ಗುಡಿ ಕಟ್ಟಿಸಿದನು!
ದಾರಿ
ದಟ್ಟವಾದ ಕಾಡಿನಲ್ಲಿ ಬುದ್ಧಿ ಮತ್ತು ಹೃದಯ ದಾರಿ ತಪ್ಪಿದವು.
ಬುದ್ಧಿ ತನಗೆ ತೋಚಿದ ದಿಕ್ಕಿನಲ್ಲಿ ಓಡಿತು.
ಹೃದಯ ಕಾಡಿನ ಸೌಂದರ್ಯಕ್ಕೆ ಮರುಳಾಗಿ ಕದಲದೆ ನಿಂತಿತು.
ಹೀಗಿರಲೊಂದು ದಿನ ಬುದ್ಧಿ ಮತ್ತು ಹೃದಯ ಒಂದನ್ನೊಂದು ಸಂಧಿಸಿದವು. ಈಗ ಕಾಡ ನಡುವಿನ ಕಾಲುದಾರಿ ಸ್ಪಷ್ಟವಾಗಿ ಗೋಚರಿಸಿತು.
ಸಾವು
ಚಿರಂಜೀವಿಯಾಗುವ ವರವನ್ನು ಪಡೆದ ಆತ ಅನೇಕ ವರ್ಷಗಳನ್ನು ಸುಖದಿಂದ ಸವೆಸಿದನು. ಆದರೆ, ವೇಗವಾಗಿ ಓಡುತ್ತಿದ್ದ ಕಾಲದೊಂದಿಗೆ ಓಡಲಾಗದೆ, ಒಂದೆಡೆ ತಟಸ್ಥನಾಗಿ ನಿಂತನು.
ನಿಂತ ಮರುಕ್ಷಣವೇ ಆತ ಸತ್ತಿರುವನೆಂದು ಘೋಷಿಸಿದ ಜಗತ್ತು, ಅವನ ಅಂತ್ಯಕ್ರಿಯೆಯನ್ನು ನೆರವೇರಿಸಿತು!
ಸವಿರಾಜ ಆನಂದೂರು