ಜಾತ್ಯತೀತ ಅರಸರಾಗಿದ್ದ ಶಿವಾಜಿ
Team Udayavani, Feb 20, 2018, 11:26 AM IST
ಬೀದರ: ಛತ್ರಪತಿ ಶಿವಾಜಿ ಮಹಾರಾಜರು ಸೈನ್ಯದಲ್ಲಿ ಎಲ್ಲಾ ಜಾತಿ, ಭಾಷೆ, ವರ್ಗದ ಜನರನ್ನು ಸೇರಿಸಿಕೊಂಡು ಜಾತ್ಯತೀತ ಅರಸ ಎನಿಸಿಕೊಂಡವರು. ತಮ್ಮ ಆಡಳಿತಾವ ಧಿಯಲ್ಲಿ ರೈತರ ಏಳ್ಗೆಗೆ ಹೆಚ್ಚು ಆದ್ಯತೆ ನೀಡಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ವಿಶೇಷ ಗೌರವ ಕಲ್ಪಿಸಿದ ಆದರ್ಶ ರಾಜರಾಗಿದ್ದರು ಎಂದರು.
ಅಜ್ಞಾನ, ಅಂಧವಿಶ್ವಾಸ, ಅನ್ಯಾಯ ಮತ್ತು ದೌರ್ಜನ್ಯದಂತಹ ನಾನಾ ಸಮಸ್ಯೆಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದ ಸನ್ನಿವೇಶದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಜನ್ಮತಾಳಿದವರು. ತಮ್ಮ 15ನೇ ವಯಸ್ಸಿನಲ್ಲಿ ಯುದ್ಧ ಕಲೆ, ವಿದ್ಯಾಭ್ಯಾಸ ಮತ್ತು ಸಂಸ್ಕಾರಗಳನ್ನು ಅರಿತವರು. ಕಾರ್ಮಿಕರು, ರೈತರು ಮತ್ತು ಸಾಮಾನ್ಯ ಜನರನ್ನು ಸೇರಿಸಿಕೊಂಡು ಯುದ್ಧ ಸಾರಿದ ಸಾಮಾನ್ಯರ ಅರಸರಾಗಿದ್ದರು ಎಂದು ಬಣ್ಣಿಸಿದರು. ಶಿವಾಜಿ ಮಹಾರಾಜರ
ಆದರ್ಶಗಳು, ರಾಷ್ಟ್ರೀಯತೆ ಮತ್ತು ದೇಶಭಕ್ತಿ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕರು ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಮ್ ಖಾನ್ ಮಾತನಾಡಿ, ಶಿವಾಜಿ ಮಹಾರಾಜರು ಎಲ್ಲಾ ಜನರನ್ನು ಸಮಾನವಾಗಿ ಪರಿಗಣಿಸಿದ್ದ ಮಹಾತ್ಮರಾಗಿದ್ದಾರೆ. ಅವರ ಆಸ್ಥಾನದಲ್ಲಿ 12 ಬಹದೊಡ್ಡ ಹುದ್ದೆಗಳಲ್ಲಿ ಸುಮಾರು 12 ಮುಸ್ಲಿಮರು ಕರ್ತವ್ಯ ನಿರ್ವಹಿಸುತ್ತಿದ್ದರು. ಅಸಂಖ್ಯಾತ ಮುಸ್ಲಿಮ್ ಸೈನಿಕರಿದ್ದರು ಎಂದು ಹೇಳಿದರು.
ಸಂಸದ ಭಗವಂತ ಖೂಬಾ ಮಾತನಾಡಿ, ಶಿವಾಜಿ ಮಹಾರಾಜರು ಯುವ ಜನಾಂಗದಲ್ಲಿ ಹೊಸ ಚೈತನ್ಯ ಮೂಡಿಸುವ ವ್ಯಕ್ತಿತ್ವ ಉಳ್ಳವರು. ಜನಸಾಮಾನ್ಯರನ್ನು ಸೇರಿಸಿಕೊಂಡು ಬಲಿಷ್ಠ ಸಾಮ್ರಾಜ್ಯ ನಿರ್ಮಿಸಿದ್ದ ಮಹಾನ್ ಅರಸರಾಗಿದ್ದರು. ಅವರ ಕನಸಿನ ಸಮಾಜ ನಿರ್ಮಿಸುವ ಹೊಣೆ ಎಲ್ಲರ ಮೇಲಿದೆ ಎಂದರು.
ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ ಮಾತನಾಡಿ, ಶಿವಾಜಿ ಮಹಾರಾಜರ ಯುದ್ಧ ಯಾವುದೇ ಧರ್ಮದ ವಿರುದ್ಧ ಅಲ್ಲದೇ ಸಮಾಜಕ್ಕೆ ಕಳಂಕವಾಗಿದ್ದ ಅಸಮಾನತೆ, ಅನ್ಯಾಯ, ಅತ್ಯಾಚಾರ, ದೌರ್ಜನ್ಯದಂತಹ ದುಷ್ಠ ಶಕ್ತಿಗಳ ವಿರುದ್ಧವಾಗಿತ್ತು ಎಂದು ಹೇಳಿದರು.
ಹಿಂಗೋಲಿ ಜಿಲ್ಲೆಯ ಬಹಿರ್ಜಿ ಸ್ಮಾರಕ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ| ರಾಮಭಾವು ಮೊಟಕುಳೆ ಉಪನ್ಯಾಸ ನೀಡಿದರು. ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಕಂಠೀರವ ಸ್ಟುಡಿಯೋ ನಿಯಮಿತದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಬೀದರ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಸಂಜಯ ಜಾಗೀರದಾರ, ಸಮಾಜದ ಮುಖಂಡ ಮುರುಳಿಧರರಾವ್ ಕಾಳೆ, ತಹಶೀಲ್ದಾರ ಕೀರ್ತಿ ಚಾಲಕ್ ಹಾಗೂ ಇತರರು ಇದ್ದರು. ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಸ್ವಾಗತಿಸಿದರು. ಪ್ರಾಂಶುಪಾಲ ಚನ್ನಬಸವ ಹೇಡೆ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ