ಸಾಮರಸ್ಯದಿಂದ ಬದುಕು ನಡೆಸುವುದು ಅವಶ್ಯ
Team Udayavani, Feb 22, 2018, 2:51 PM IST
ಬೆಳ್ತಂಗಡಿ: ಇತ್ತೀಚೆಗೆ ಕರಾವಳಿ ಭಾಗದಲ್ಲಿ ಕೋಮುಗಲಭೆ ಹೆಚ್ಚಾಗಿದ್ದು, ಶಾಂತಿ ಕದಡುವ ಘಟನೆ ಗಳು ನಡೆಯುತ್ತಿದೆ. ಬುದ್ಧಿವಂತರ ಜಿಲ್ಲೆ ಎಂದು ಖ್ಯಾತಿ ಹೊಂದಿರುವ ಜಿಲ್ಲೆಗೆ ಅಪಖ್ಯಾತಿ ಬರುತ್ತಿದೆ. ಇದನ್ನು ಬಿಟ್ಟು ಎಲ್ಲರೂ ಸಾಮರಸ್ಯದಿಂದ ಬದುಕು ಸಾಗಿಸಲು ಪ್ರಯತ್ನಿಸಬೇಕು ಎಂದು ರಂಗಭೂಮಿ ಕಲಾವಿದ, ಚಿತ್ರನಟ ನವೀನ್ ಡಿ. ಪಡೀಲ್ ತಿಳಿಸಿದರು.
ಅವರು ಮಂಗಳವಾರ ಇಲ್ಲಿನ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಡೆದ 8ನೇ ವರ್ಷದ ಸುವರ್ಣಾಸ್ ಸಾಂಸ್ಕೃತಿಕ ಕಲಾವೈಭವ ದಲ್ಲಿ ಸುವರ್ಣ ರಂಗಸಮ್ಮಾನ ಸ್ವೀಕರಿಸಿ ಮಾತನಾಡಿದರು. ಯುವ ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಸುವರ್ಣ ರಂಗ ಸಮ್ಮಾನ್ ಸ್ವೀಕರಿಸಿದರು.
ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ, ವೈ. ನಾಣ್ಯಪ್ಪ ಪೂಜಾರಿ, ಯು. ವಿಜಯ ರಾಘವ ಪಡ್ವೆಟ್ನಾಯ, ಬಳ್ಳಮಂಜ ದೇವಸ್ಥಾನದ ಮೊಕ್ತೇಸರ ಡಾ| ಹರ್ಷ ಎಂ. ಸಂಪಿಗೆತ್ತಾಯ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಜಿಲ್ಲಾ ಬಿಜೆಪಿ ಪ್ರಭಾರಿ ಪ್ರತಾಪಸಿಂಹ ನಾಯಕ್, ಬಿಜೆಪಿ ತಾಲೂಕು ಅಧ್ಯಕ್ಷ ರಂಜನ್ ಜಿ. ಗೌಡ, ಯುವಮೋರ್ಚಾ ಜಿಲ್ಲಾ ಧ್ಯಕ್ಷ ಹರೀಶ್ ಪೂಂಜಾ, ನ.ಪಂ. ಸದಸ್ಯ ಸಂತೋಷ್ ಕುಮಾರ್ ಜೈನ್, ಭುಜಬಲಿ ಧರ್ಮಸ್ಥಳ, ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ, ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಬಳಂಜ, ಡಾ| ಶಶಿಧರ ಡೋಂಗ್ರೆ, ಎನ್. ಮಂಜುನಾಥ ರೈ ಮೊದಲಾದವರು ಭಾಗವಹಿಸಿದ್ದರು.