ದೇಶ ಹಾಳಾಗಲು ಎಡಬಿಡಂಗಿಗಳೇ ಕಾರಣ!
Team Udayavani, Feb 26, 2018, 6:00 AM IST
ಬೆಂಗಳೂರು: ಭಾರತ ದೇಶದ ಅಂತಃಶಕ್ತಿ ಕೊಂದಿರುವುದು ಹೊರಗಿನಿಂದ ಬಂದಿರುವ ಉಗ್ರಗಾಮಿಗಳು ಅಥವಾ ದಾಳಿಕೋರರಲ್ಲ. ನಮ್ಮ ಮನೆಯಲ್ಲೇ (ದೇಶದಲ್ಲಿ) ಹುಟ್ಟಿದ ಹೆಗ್ಗಣಗಳು. ಕೆಂಪಂಗಿ ದೊರೆಗಳು,ಎಡಬಿಡಂಗಿಗಳು ಎನ್ನಿಸಿಕೊಂಡ ಬುದ್ಧಿ ಜೀವಿಗಳು ನಮ್ಮ ದೇಶವನ್ನು ಹಾಳು ಮಾಡಿದ್ದಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಕಿಡಿಕಾರಿದ್ದಾರೆ.
ಡಾ.ಎಚ್.ಎಂ.ಪ್ರಸನ್ನ ಫೌಂಡೇಷನ್, ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ, ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಭಾನುವಾರ ಕುರುಬರಹಳ್ಳಿ ಬಿಬಿಎಂಪಿ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಯುವಶಕ್ತಿ ಸಬಲೀಕರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಪಕ್ಷವನ್ನೂ ಉಲ್ಲೇಖೀಸದೆ ಈ ಮಾತುಗಳನ್ನು ಹೇಳಿದ ಕೇಂದ್ರ ಸಚಿವರು, ಕೆಂಪಂಗಿ ದೊರೆಗಳು, ಎಡಬಿಡಂಗಿಗಳು ಹಾಳು ಮಾಡಿರುವ ದೇಶವನ್ನು ಮತ್ತೆ ಅಭಿವೃದ್ಧಿಯೆಡೆ ಕೊಂಡೊಯ್ದು ಸಮಾಜಕ್ಕೆ ಹೊಸತನ ತುಂಬಲು ಕೌಶಲ್ಯದಿಂದ ಮಾತ್ರ ಎಂದು ಹೇಳಿದರು.
ಈಗ ಹಿಂದುಳಿದವರು ಎಂದು ಹೇಳಿಕೊಳ್ಳುವುದೇ ಒಂದು ಫ್ಯಾಷನ್ ಆಗಿಬಿಟ್ಟಿದೆ. ಹಾಗೇ ಹೇಳಿಕೊಳ್ಳುವುದರಿಂದ ಏನು ಸಿಗುತ್ತದೋ ಗೊತ್ತಿಲ್ಲ, ಆದರೂ ಅದನ್ನೇ ಪ್ಯಾಷನ್ ಮಾಡಿಕೊಂಡಿದ್ದಾರೆ. ಈ ಕೀಳರಿಮೆಯಿಂದ ಹೊರಬಂದು ಜಗತ್ತಿನ ದೃಷ್ಠಿಕೋನದಿಂದ ನೋಡಬೇಕು. ವಿಶ್ವದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಬುನಾದಿ ಹಾಕಿಕೊಟ್ಟಿದ್ದೇ ಭಾರತ ಎಂದು ರಾಬರ್ಟ್ ಐನ್ಸ್ಟಿàನ್ ಹೇಳಿದ್ದರು. ಇದೇ ಮಾತು ನಾವ್ಯಾರಾದರೂ ಹೇಳಿದರೆ ಕೋಮುವಾದಿ ಎಂಬ ಪಟ್ಟ ಕಟ್ಟುತ್ತಾರೆ ಎಂದು ಕಿಡಿ ಕಾರಿದರು.
ಇಂದಿನ ಬಹುಸಂಖ್ಯಾತರು ಮುಂದಿನ ಕೆಲವೇ ವರ್ಷದಲ್ಲಿ ಅಲ್ಪಸಂಖ್ಯಾತರಾಗಲಿದ್ದಾರೆ. ಇದಕ್ಕೆ ಅಲ್ಪಸಂಖ್ಯಾತರಲ್ಲಿ ಇರುವ ಇತರೆ ಕೌಶಲ್ಯವೇ (ಎಕ್ಸ್ಟ್ರಾ ಸ್ಕಿಲ್) ಕಾರಣ. ಬಹುಸಂಖ್ಯಾತರು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ದೇಶ ಉಳಿಸಿಕೊಳ್ಳಲು ಇತರೆ ಕೌಶಲ್ಯವನ್ನು ಉಪಯೋಗಿಸಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ಗೆ ಬಡವರ ಕಲ್ಯಾಣ ಬೇಕಿಲ್ಲ
ಬಡವರು ಸ್ವಾಲಂಬನೆಯಿಂದ ಬದುಕುವುದು ಕಾಂಗ್ರೆಸ್ಗೆ ಬೇಕಾಗಿಲ್ಲ. ಇದರಿಂದಾಗಿಯೇ ಅವರು 70 ವರ್ಷ ನಮ್ಮನ್ನಾಳಿದರೂ ದೇಶ ಹಿಂದುಳಿದಿದೆ. ಆದರೆ, ಈಗ ದೇಶ ಹಿಂದುಳಿದಿದೆ ಎಂದು ಹೇಳಿಕೊಂಡು ಬರುತ್ತಿರುವ ಕಾಂಗ್ರೆಸ್ಗೆ ನಾಚಿಗೆಯಾಗಬೇಕು ಎಂದ ಅವರು, ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡುವಂತೆ ಗಾಂಧೀಜಿಯವರು ಹಿಂದೆಯೇ ಹೇಳಿದ್ದರು. ದೇಶ ಉಳಿಸಲು ಈಗಾದರೂ ಆ ಕೆಲಸ ಮಾಡಲಿ ಅಥವಾ ಕಾಂಗ್ರೆಸ್ನವರಿಗೆ ತಲೆ, ಪ್ರಜ್ಞೆ ಹಾಗೂ ಸಾಮಾಜಿಕ ಕಳಕಳಿ ಇದ್ದರೆ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಳ್ಳಲಿ ಎಂದು ಅನಂತ್ ಕು ಮಾರ್ ಹೆಗಡೆ ಸವಾಲು ಹಾಕಿದರು.ವಸೂಲಿಬಾಜಿ ರಾಜಕಾರಣ: ಕಾಂಗ್ರೆಸ್ ವಸೂಲಿಬಾಜಿ ರಾಜಕಾರಣ ಮಾಡುತ್ತಿದೆ. ಅಧಿಕಾರದಲ್ಲಿ ಇದ್ದಾಗ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಇಂತಹ ಮಾನವೀಯತೆ ಇಲ್ಲದವರಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.
ಹೊಟ್ಟೆ ಕೇಂದ್ರೀತವಾದ ರಾಷ್ಟ್ರೀಯತೆಯ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಅದರ ಬದಲು ಈ ನೆಲದ ಮೂಲ ಸತ್ವ ಅಡಗಿರುವ ರಾಷ್ಟ್ರೀಯತೆಯ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯ ಇದೆ. ಅದಕ್ಕಾಗಿ ನಮ್ಮ ವೈಚಾರಿಕ ದೃಷ್ಟಿಕೋನ ಬದಲಾಗಬೇಕು. ದೇಶದ ಅಂತಃಶಕ್ತಿಯನ್ನು ಬಡಿದೆಬ್ಬಿಸುವ ಕೌಶಲ್ಯ ತುಂಬುವ ಕೆಲಸ ಆಗಬೇಕು. ನಮಗೀಗ ಭಾಗಶಃ ಅಭಿವೃದ್ಧಿ ಬೇಕಾಗಿಲ್ಲ, ದೇಶದ ಸಮಗ್ರ ಅಭಿವೃದ್ಧಿಯಾಗಬೇಕು. ನಮ್ಮಲ್ಲಿರುವ ಕೀಳರಿಮೆಯೇ ನಮ್ಮ ಅಂತಃಶಕ್ತಿಯನ್ನು ಕುಗ್ಗಿಸುತ್ತದೆ. ಭಾರತ ಎದ್ದು ನಿಂತರೆ ಜಗತ್ತೇ ನಮ್ಮ ಎದುರು ತಲೆಭಾಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡು ಜೀವನ ಕೌಶಲ್ಯತೆ ಜತೆಗೆ ರಾಷ್ಟ್ರೀಯ ಕೌಶಲ್ಯತೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶೀಘ್ರದಲ್ಲೇ ಕೌಶಲ್ಯಾಭಿವೃದ್ಧಿ ಸಂಸ್ಥೆ:
ದೇಶದ ಯುಜನತೆಗೆ ಕೌಶಲ್ಯಾಧಾರಿತ ತರಬೇತಿ ನೀಡಲು ಆರೋಗ್ಯ, ಶಿಕ್ಷಣ, ಕೃಷಿ, ಕ್ರೀಡೆ ಸೇರಿದಂತೆ 40 ವಲಯದ ತರಬೇತಿಯನ್ನು ಕೈಗಾರಿಕೆಗಳ ಮೂಲಕ ನೀಡುತ್ತಿದ್ದೇವೆ. ಕೈಗಾರಿಕೆಗಳೇ ಇದಕ್ಕೆ ಬೇಕಾದ ಪಠ್ಯಕ್ರಮ ಸಿದ್ಧಪಡಿಸಿಕೊಳ್ಳುತ್ತವೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಮಾದರಿಯಲ್ಲಿ ಕರ್ನಾಟಕದಲ್ಲಿ ಭಾರತೀಯ ಕೌಶಲ್ಯ ಅಭಿವೃದ್ಧಿ ಸಂಸ್ಥೆ ತೆರೆಯಲಿದ್ದೇವೆ. ಎಲ್ಲಾ ರಾಜ್ಯದಲ್ಲೂ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಆರಂಭಿಸಲಿದ್ದೇವೆ. ಐಎಎಸ್, ಐಎಫ್ಎಸ್, ಐಪಿಎಸ್ ಮಾದರಿಯಲ್ಲಿ ಕೌಶಲ್ಯ ತರಬೇತಿ ಅಧಿಕಾರಿಗಳಾಗಿ ಐಎಸ್ಡಿಎಸ್ ಕೂಡ ಆರಂಭಿಸಿದ್ದೇವೆ ಎಂದು ಹೇಳಿದರು.
ಡಾ.ಎಚ್.ಎಂ.ಪ್ರಸನ್ನ ಫೌಂಡೇಷನ್ ಅಧ್ಯಕ್ಷ ಡಾ.ಎಚ್.ಎಂ.ಪ್ರಸನ್ನ, ಮಾಜಿ ಉಪ ಮೇಯರ್ ಎಸ್.ಹರೀಶ್, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ, ಬಿಜೆಪಿ ಮುಖಂಡರಾದ ನೆ.ಲ.ನರೇಂದ್ರಬಾಬು, ಕೆ.ವಿ.ರಾಜೇಂದ್ರಕುಮಾರ್, ವೀರೇಶ್ ಕುಮಾರ್, ಮಂಜುನಾಥ್ ಮತ್ತಿತರರು ಇದ್ದರು.
ವಿದ್ಯಾರ್ಥಿಗಳೊಂದಿಗೆ ಸಂವಾದ
ಸಚಿವ ಅನಂತ್ ಕುಮಾರ್ ಹೆಗಡೆ ತಮ್ಮ ಭಾಷಣದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕೌಶಲಾಭಿವೃದ್ಧಿ ಇಲಾಖೆಯ ಸಾಧನೆ, ಯುವಕರಿಗೆ ನೀಡುತ್ತಿರುವ ತರಬೇತಿ, ಉದ್ಯೋಗ ಸೃಷ್ಟಿಸಲು ಕೈಗೊಂಡಿರುವ ಕ್ರಮಗಳು ಸೇರಿದಂತೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ