ತಜ್ಞರ ಸಮಿತಿ ವರದಿ ಮಾನ್ಯ ಮಾಡಲ್ಲ: ತಿಪ್ಪಣ್ಣ
Team Udayavani, Mar 4, 2018, 6:15 AM IST
ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಕುರಿತು ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಗುಡ್ಡ ಅಗೆದು ಇಲಿ ಹಿಡಿದಂತೆ ಮಾಡಿದೆ. ವೀರಶೈವ ಮಹಾಸಭೆಯು ಈ ವರದಿಯನ್ನು ಮಾನ್ಯ ಮಾಡುವುದಿಲ್ಲ. ಇದೊಂದು ಚುನಾವಣೆ ಸಂದರ್ಭದಲ್ಲಿ ಜನರ ಮೂಗಿಗೆ ತುಪ್ಪ ಸವರುವ ಭರವಸೆಯಂತಿದೆ. ಇದರಿಂದ ಯಾವುದೇ ಸಾಧನೆಯೂ ಆಗುವುದಿಲ್ಲ ಎಂದು ವೀರಶೈವ ಮಹಾಸಭೆ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ತಿಳಿಸಿದ್ದಾರೆ.
ತಜ್ಞರ ಸಮಿತಿ ವರದಿ ಕುರಿತು ವೀರಶೈವ ಮಹಾಸಭೆಯ ಪದಾಧಿಕಾರಿಗಳ ಸಭೆ ನಡೆಸಿ ನಂತರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮಹಾಸಭೆಯು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ಆದರೆ, ತಜ್ಞರ ಸಮಿತಿಯ ವರದಿಯಲ್ಲಿನ ಶಿಫಾರಸುಗಳನ್ನು ಗಮನಿಸಿದರೆ, ಧಾರ್ಮಿಕ ಅಲ್ಪ ಸಂಖ್ಯಾತರೆಂದು ಪರಿಗಣಿಸಬಹುದೆಂದು ಹೇಳಿರುವುದು ಹಾಸ್ಯಾಸ್ಪದ. ಧರ್ಮದ ಮಾನ್ಯತೆ ಸಿಗದೇ ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣಿಸುವುದು ಹೇಗೆಂಬ ಅರಿವು ಈ ಸಮಿತಿಯವರಿಗೆ ಇಲ್ಲವೆಂಬುದು ಇದರಿಂದ ಸಾಬೀತಾಗಿದೆ. ಆರು ತಿಂಗಳು ಸಮಯ ಕೇಳಿದ್ದ ಸಮಿತಿಯು ಎರಡೇ ತಿಂಗಳಲ್ಲಿ ಯಾವ ತಂತ್ರ ಬಳಸಿ ವರದಿ ನೀಡಿದೆ ಎನ್ನುವುದನ್ನು ತಿಳಿಸಲಿ. ಈ ಬೆಳವಣಿಗೆಗಳನ್ನು ನೋಡಿದರೆ, ಸಮಿತಿಯು ಸರ್ಕಾರದ ಅಣತಿಯಂತೆ ನಡೆದಿರುವುದು ಸ್ಪಷ್ಟವಾಗಿದೆ ಎಂದು ತಿಪ್ಪಣ್ಣ ತಿಳಿಸಿದ್ದಾರೆ.