ಡಿ.ಸಿಗೆ ವಾರಂಟ್ ಜಾರಿ ತಹಶೀಲ್ದಾರರ ನಿರ್ಲಕ್ಷ್ಯ: ಪ್ರಿಯಾಂಕಾ
Team Udayavani, Mar 10, 2018, 6:05 AM IST
ಉಡುಪಿ: ಭೂ ಒತ್ತುವರಿ ಪ್ರಕರಣಗಳ ವರ್ಗಾವಣೆಗೆ ಸಂಬಂಧಿಸಿದಂತೆ ಬೆಂಗಳೂರಿನ ನ್ಯಾಯಲಯ ಉಡುಪಿ ಜಿಲ್ಲಾಧಿಕಾರಿಗಳಿಗೆ ವಾರಂಟ್ ಜಾರಿಗೊಳಿಸಿದೆ.
ಬೆಂಗಳೂರಿನಲ್ಲಿರುವ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು, “ಅಕ್ರಮ ಭೂ ಒತ್ತುವರಿ ಬಗ್ಗೆ ನಾವು ಸ್ಥಳೀಯ ನ್ಯಾಯಲಯಗಳಲ್ಲಿ ದೂರು ದಾಖಲಿಸಿದ್ದೇವೆ. ಆದರೆ ಅದನ್ನು ಭೂಕಬಳಿಕೆ ನಿಷೇಧ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿಲ್ಲ ಎಂಬ ಹಿನ್ನೆಲೆಯಲ್ಲಿ ಈಗ ವಾರಂಟ್ ಜಾರಿಯಾಗಿದೆ. ತಹಶೀಲ್ದಾರರು ಮಾಡಿರುವ ನಿರ್ಲಕ್ಷ್ಯದಿಂದ ಹೀಗೆ ಆಗಿದೆ. ಇದಕ್ಕೂ ಮೊದಲು ನನಗೆ ಸಮನ್ಸ್ ಬಂದಿಲ್ಲ. ಈಗ ವಾರಂಟ್ ಬಂದಿದೆ. ಮಾ. 13ರಂದು ನ್ಯಾಯಾಲಯಕ್ಕೆ ಹಾಜರಾಗುತ್ತೇನೆ’ ಎಂದು ತಿಳಿಸಿದ್ದಾರೆ.
“ಐಜಿಪಿ ಕಚೇರಿಯಿಂದ ಬಂದ ವಾರಂಟನ್ನು ಮಣಿಪಾಲ ಠಾಣೆಯ ಮುಖಾಂತರ ಜಿಲ್ಲಾಧಿಕಾರಿಯವರಿಗೆ ತಲುಪಿಸಿದ್ದೇವೆ. ಅವರು 10,000 ರೂ.ಗಳ ಬಾಂಡ್ ನೀಡಬೇಕಾಗಿದೆ ಮತ್ತು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ’ ಎಂದು ಎಸ್ಪಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ.