ಧರೆಗುರುಳಿದ ಬೃಹತ್ ಕಟೌಟ್ : ಕೈ ಸಮಾವೇಶದಲ್ಲಿ ಗೊಂದಲ
Team Udayavani, Apr 8, 2018, 5:29 PM IST
ಬೆಂಗಳೂರು: ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಅಳವಡಿಸಲಾಗಿದ್ದ ಬೃಹತ್ ಕಟೌಟ್ ಧರೆಗುರುಳಿದ ಘಟನೆ ಭಾನುವಾರ ನಡೆದಿದೆ.
ವೇದಿಕೆಯ ಸಮೀಪ ಹಾಕಲಾಗಿದ್ದ 30 ಅಡಿ ಎತ್ತರದ ಕಟೌಟ್ ಜೋರಾಗಿ ಗಾಳಿ ಬೀಸಿದ ಪರಿಣಾಮ ಉರುಳಿ ಬಿದ್ದಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವೇದಿಕೆಯಲ್ಲಿ ಡೊಳ್ಳು ಕುಣಿತ ನಡೆಯುತ್ತಿತ್ತು,ಈ ವೇಳೆ ಘಟನೆ ನಡೆದಿದ್ದು ಕಟೌಟ್ ಕೆಳಗೆ ಕುಳಿತಿದ್ದ ಕಾಂಗ್ರೆಸ್ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿದ್ದಾರೆ. ಓಡುವ ವೇಳೆ ನೂಕುನುಗ್ಗಲಾಗಿದ್ದು ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಷಾತ್ ಯಾವುದೇ ದೊಡ್ಡ ಮಟ್ಟದ ಹಾನಿಯಾಗಿಲ್ಲ.
ರಾಹುಲ್ ಗಾಂಧಿ ಅವರು ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಲಿದ್ದು ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದು, ಅವರಲ್ಲಿ ಘಟನೆಯಿಂದ ಗೊಂದಲ ನಿರ್ಮಾಣವಾಗಿದೆ.