ಸೇನೆಗೆ ತಟ್ಟಿತ್ತು ನೀತಿ ಗ್ರಹಣ: ಯುಪಿಎ ವಿರುದ್ಧ ಮೋದಿ ಆಕ್ರೋಶ
Team Udayavani, Apr 13, 2018, 6:00 AM IST
ತಿರುವಿದಾಂತೈ (ತಮಿಳುನಾಡು): ಯುಪಿಎ ಸರಕಾರದ ಆಡಳಿತಾವಧಿಯಲ್ಲಿನ ನೀತಿ ಗ್ರಹಣದಿಂದಾಗಿ ದೇಶದ ಸೇನೆ ಯಾವುದೇ ಸವಾಲನ್ನು ಎದುರಿಸದೇ ಇರುವಂಥ ಸ್ಥಿತಿಯಲ್ಲಿತ್ತು. ಸೇನಾ ಸನ್ನದ್ಧತೆಗೆ ಇದುವೇ ದೊಡ್ಡ ಅಡ್ಡಿಯಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿ ದ್ದಾರೆ. ಹಿಂದಿನ ಅವಧಿಯಲ್ಲಿದ್ದಂತೆ ಸಮರ ವಿಮಾನಗಳ ಖರೀದಿಗೆ ಹತ್ತು ವರ್ಷ ಕಾಯಬೇಕಾದ ಸ್ಥಿತಿ ಈಗ ಇಲ್ಲ ಎಂದೂ ಹೇಳಿದ್ದಾರೆ.
ತಮಿಳುನಾಡು ರಾಜಧಾನಿ ಚೆನ್ನೈ ಸಮೀಪ ಇರುವ ತಿರುವಿದಾಂತೈನಲ್ಲಿ ನಾಲ್ಕು ದಿನಗಳ ರಕ್ಷಣಾ ವಸ್ತು ಪ್ರದರ್ಶನ(ಡಿಫೆನ್ಸ್ ಎಕ್ಸ್ಪೋ) ಉದ್ಘಾಟಿಸಿ ಅವರು ಮಾತನಾಡಿದರು. ಯುಪಿಎ ಅವಧಿಯಲ್ಲಿ 126 ಮಧ್ಯಮ ದರ್ಜೆಯ ಬಹೂಪಯೋಗಿ ಯುದ್ಧ ವಿಮಾನ (ಎಂಎಂಆರ್ಸಿಎ) ಖರೀದಿಸು ವಲ್ಲೂ ವಿಳಂಬ ನೀತಿ ಅನುಸರಿಸಲಾಗಿತ್ತು ಎಂದು ಮೋದಿ ಟೀಕಿಸಿದ್ದಾರೆ. “ನಮ್ಮ ನೇತೃತ್ವದ ಕೇಂದ್ರ ಸರಕಾರ ಸೇನೆಯ ಅಗತ್ಯಕ್ಕೆ ಕೂಡಲೇ ಸ್ಪಂದಿಸಿದೆ. 110 ಯುದ್ಧ ವಿಮಾನಗಳ ಖರೀದಿಗೆ ಕ್ರಮ ಕೈಗೊಂಡಿದ್ದೇವೆ. ನಾವು ಬರೀ ಚರ್ಚೆಯಲ್ಲಿಯೇ ಹತ್ತು ವರ್ಷಗಳ ಕಾಲ ಕಳೆಯುವುದಿಲ್ಲ’ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಕಳೆದ ವಾರವೇ ಕೇಂದ್ರ ಸರಕಾರ ಸಂಬಂಧಿತ ವಿಮಾನದ ಬಗ್ಗೆ ಆಂತರಿಕ ಟೆಂಡರ್ ಕರೆದಿದೆ. ಭಾರತೀಯ ವಾಯುಪಡೆಗಾಗಿ ಐದು ವರ್ಷಗಳ ಹಿಂದೆ 126 ಮಧ್ಯಮ ದರ್ಜೆಯ ಬಹೂಪಯೋಗಿ ಯುದ್ಧ ವಿಮಾನಗಳ ಖರೀದಿಗಾಗಿ ಇದ್ದ ಟೆಂಡರ್ ರದ್ದು ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಇಂಥ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದರು.
ಎನ್ಡಿಎ ಸರಕಾರ ರಕ್ಷಣಾ ಉತ್ಪಾದನಾ ಸಂಸ್ಥೆಗಳ ಜತೆ ಪ್ರಾಮಾಣಿಕತೆ ಮತ್ತು ಪಾರದರ್ಶತೆಯಿಂದ ಕೂಡಿದ ಸಹಭಾಗಿತ್ವತೆ ಬಯಸುತ್ತದೆ. ಒಂದು ಅವಧಿಯಲ್ಲಿ ರಕ್ಷಣಾ ಇಲಾಖೆಗೆ ಅಗತ್ಯವಾಗಿರುವ ತಾಂತ್ರಿಕ ವಸ್ತುಗಳನ್ನು ಪೂರೈಸುವಲ್ಲಿ ನೀತಿ ಗ್ರಹಣ ಕಾಡಿತ್ತು. ಅದರಿಂದಾಗಿ ದೇಶದ ರಕ್ಷಣಾ ವ್ಯವಸ್ಥೆ ಅನಿರೀಕ್ಷಿತವಾಗಿ ಎದುರಾಗಬಹುದಾಗಿದ್ದ ಸವಾಲುಗಳನ್ನೂ ನಿಭಾಯಿಸಲಾಗದೇ ಇದ್ದ ಸ್ಥಿತಿ ಇತ್ತು ಎಂದು ಮೋದಿ ಹೇಳಿದ್ದಾರೆ. ಬದಲಾಗಿರುವ ಕಾಲಕ್ಕೆ ತಕ್ಕಂತೆ ದೇಶದ ರಕ್ಷಣಾ ವ್ಯವಸ್ಥೆ ಬಲಗೊಳ್ಳಬೇಕು. ಅದಕ್ಕಾಗಿ ದೇಶಿಯವಾ ಗಿಯೇ ರಕ್ಷಣಾ ವಸ್ತುಗಳನ್ನು ಉತ್ಪಾದಿಸುವಂತಾ ಗಬೇಕು. ಆ ರೀತಿಯಾದಾಗ ಮಾತ್ರ ಈ ಗುರಿ ಸಾಧಿಸಲು ಸಾಧ್ಯ ಎಂದರು ಪ್ರಧಾನಿ.
ಎಚ್ಎಎಲ್ ಜತೆ ಒಪ್ಪಂದ
ವಾಯುಪಡೆಯಿಂದ 110 ಸಮರ ವಿಮಾನಗಳ ಗುತ್ತಿಗೆ ಪಡೆಯಲು ಉತ್ಸುಕವಾಗಿರುವ ಅಮೆರಿಕದ ಬೋಯಿಂಗ್ ಸಂಸ್ಥೆಯು ಗುರುವಾರ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಮತ್ತು ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ (ಎಂಡಿಎಸ್) ಜತೆ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಮೇಕ್ ಇನ್ ಇಂಡಿಯಾ ಯೋಜನೆಯನ್ವಯ ಭಾರತದಲ್ಲೇ ಎಫ್/ಎ-18 ಸೂಪರ್ ಹಾರ್ನೆಟ್ ತಯಾರಿಸಲು ಬೋಯಿಂಗ್ ಮುಂದಾಗಿದೆ.
ಆಯೋಗದ ವಿರುದ್ಧದ ಆರೋಪ ಸುಳ್ಳು
ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳ ಮೇಲೆ ಹೆಚ್ಚಿನ ಪ್ರೋತ್ಸಾಹದಾಯಕ ಕ್ರಮ ಕೈಗೊಳ್ಳ ಬೇಕು ಎಂದು 15ನೇ ಹಣಕಾಸು ಆಯೋಗಕ್ಕೆ ಸೂಚಿಸಲಾಗಿತ್ತು. ಕೇವಲ ನಿಗದಿತ ರಾಜ್ಯಗಳನ್ನು ಗುರಿಯಾಗಿರಿಸಿಕೊಂಡು ನಿಯಮಗಳನ್ನು ರಚಿಸಲಾಗಿದೆ ಎಂಬ ಆರೋಪ ಸುಳ್ಳು ಎಂದು ಹೇಳಿದ್ದಾರೆ ಪ್ರಧಾನಿ ನರೇದ್ರ ಮೋದಿ. ಎನ್ಡಿಎ ಸರಕಾರ ಸಹಕಾರ ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿದೆ. ಜನಸಂಖ್ಯೆ ನಿಯಂತ್ರಿಸಲು ಕ್ರಮ ಕೈಗೊಂಡ ರಾಜ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ನಾವೇ ಸೂಚಿಸಿದ್ದೇವೆ. ಆದರೂ ವಿನಾಕಾರಣ ಟೀಕಿಸಲಾಗುತ್ತಿದೆ ಎಂದಿದ್ದಾರೆ. ನಮ್ಮ ನಿಲುವು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಆಗಿದೆ ಎಂದಿದ್ದಾರೆ. ಏ.10ರಂದು ತಿರುವನಂತಪುರದಲ್ಲಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಮತ್ತು ಹಣಕಾಸು ಸಚಿವರ ಸಭೆಯಲ್ಲಿ ಈ ಬಗ್ಗೆ ಕಟುವಾಗಿ ಆಕ್ಷೇಪಿಸಲಾಗಿತ್ತು.
ಎಲ್ಲರ ಜತೆ ಚರ್ಚೆ
ರಕ್ಷಣಾ ಖರೀದಿ ನಿಯಮ ರೂಪಿಸುವ ಸಂದರ್ಭ ದಲ್ಲಿ ದೇಶಿಯ, ವಿದೇಶಿ ಕಂಪನಿಗಳ ಜತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ದೇಶದಲ್ಲಿ ರಕ್ಷಣಾ ಕ್ಷೇತ್ರದ ಉತ್ಪಾ ದನಾ ವ್ಯವಸ್ಥೆ ಬಲ ಗೊಳ್ಳಲು ಅನುಕೂಲವಾ ಗುವಂತೆ ಒಂದು ವ್ಯವಸ್ಥೆ ರೂಪುಗೊಳ್ಳಬೇಕು. ಅದರಲ್ಲಿ ಖಾಸಗಿ, ಸರ್ಕಾರಿ ಸಂಸ್ಥೆಗಳೂ ಭಾಗೀದಾರಿಗಳಾಗಬೇಕು ಎಂದು ಹೇಳಿದ್ದಾರೆ.