ಕೆರೆ ಮಲಿನ ತಡೆಗೆ ಗ್ರಾಮಸ್ಥರಿಗೆ ಸಲಹೆ
Team Udayavani, Apr 16, 2018, 4:43 PM IST
ಬಳಗಾನೂರು: ಸಮೀಪದ ಗೋನವಾರ ಹಾಗೂ ದುಮತಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡ ಕೆರೆ ಪುನಶ್ಚೇತನ ಕಾಮಗಾರಿಗೆ ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಹಮ್ಮಿಕೊಂಡ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ಕೆರೆಗಳ ಅಭಿವೃದ್ಧಿ ಕೂಡಾ ಒಂದಾಗಿದೆ. ಕ್ಷೇತ್ರದ ಸಹಕಾರ ಗ್ರಾಮಸ್ಥರ ಸಹಯೋಗದಲ್ಲಿ ಸುಮಾರು 165 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆರೆಗಳ ಪುನಶ್ಚೇತನ ಮಾಡುವ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವುದು ಉದ್ದೇಶವಾಗಿದೆ. ಕೆರೆ ಮಲಿನವಾಗದಂತೆ ಗ್ರಾಮಸ್ಥರು ಜಾಗ್ರತೆ ವಹಿಸಬೇಕು ಎಂದರು.
ಕೆರೆ ಪುನಶ್ಚೇತನ ಸಮಿತಿ ಅಧ್ಯಕ್ಷ ನೀಲಕಂಠಪ್ಪ ನಾಯಕ ಮಾತನಾಡಿ, ಗ್ರಾಮೀಣ ಜನರ ಸಂಕಷ್ಟಗಳನ್ನು ದೂರ ಮಾಡುವುದು ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಉದ್ದೇಶವಾಗಿದೆ ಎಂದರು. ಶ್ರೀ ಗಪೂರ ತಾತಾ ಹಾಗೂ ಶ್ರೀ ಮಲ್ಲಯ್ಯ ತಾತನವರು ಸಾನಿಧ್ಯ ವಹಿಸಿದ್ದರು. ಜಿಲ್ಲಾ ನಿರ್ದೇಶಕ ಎಚ್.ಎಲ್. ಮುರಳೀಧರ, ತಾಲೂಕಿನ ಯೋಜನಾಧಿಕಾರಿ ಎಂ.ಮಂಜುನಾಥ, ಕೃಷಿ ಮೇಲ್ವಿಚಾರಕ ವೀರೇಂದ್ರ ಅಗ್ಗಿಮಠ, ವಲಯ ಮೇಲ್ವಿಚಾರಕ ಭರತ, ಸೇವಾಪ್ರತಿನಿಧಿ ರಾಜೇಶ್ವರಿ, ರತ್ನಮ್ಮ, ಶರಣಮ್ಮ ಸೇರಿದಂತೆ ಗ್ರಾಮದ ಮುಖಂಡರು, ಕೆರೆ ಪುನಶ್ಚೇತನ ಸಮಿತಿ ಪದಾಧಿಕಾರಿಗಳು ಇದ್ದರು.