RBI ಗವರ್ನರ್ಗೆ ಸಂಸತ್ ಸಮಿತಿ ಸಮನ್ಸ್
Team Udayavani, Apr 18, 2018, 10:00 AM IST
ಹೊಸದಿಲ್ಲಿ: ಇತ್ತೀಚೆಗಿನ ಬ್ಯಾಂಕ್ ಹಗರಣಗಳಿಗೆ ಸಂಬಂಧಿಸಿ, ಮಾಜಿ ಸಚಿವ ಎಂ. ವೀರಪ್ಪ ಮೊಯ್ಲಿ ನೇತೃತ್ವದ ಹಣಕಾಸಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಗೆ ಸಮನ್ಸ್ ಜಾರಿಗೊಳಿಸಿದ್ದು, ಮೇ 17ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಹಗರಣಗಳ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಿದ್ದ ಪಟೇಲ್, ಸಾರ್ವಜನಿಕ ರಂಗದ ಬ್ಯಾಂಕ್ಗಳ ಜತೆಗೆ ವ್ಯವಹರಿಸುವ ಅಧಿಕಾರ RBIಗೆ ಇಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ, RBIಗೆ ಯಾವ ರೀತಿಯ ಅಧಿಕಾರ ಬೇಕಿದೆ ಎಂಬುದನ್ನು ಊರ್ಜಿತ್ ರಿಂದಲೇ ತಿಳಿಯಲು ಸಮಿತಿ ನಿರ್ಧರಿಸಿ, ಸಮನ್ಸ್ ಜಾರಿ ಮಾಡಿದೆ ಎಂದು ಹೇಳಲಾಗಿದೆ.