ನೀರಿಲ್ಲದೆ ಬತ್ತಿಹೋದ ಕಂದಾವರದ ಹೇರಿಕೆರೆ
Team Udayavani, Apr 28, 2018, 6:20 AM IST
ಬಸ್ರೂರು: ಉಳ್ಳೂರು, ಕಾಡಿನಕೊಂಡ, ಮೂಡ್ಲಕಟ್ಟೆ, ಐದು ಮುಡಿ, ಸಾಂತಾವರ, ಸಟ್ವಾಡಿ ಮುಂತಾದ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ನೀರೊದಗಿಸುವ ಕಂದಾವರದ ಹೇರಿಕೆರೆ ಈಗ ನೀರಿಲ್ಲದೆ ಬತ್ತಿ ಹೋಗಿದೆ.
ಒತ್ತುವರಿ ಸಮಸ್ಯೆ
ಬಸ್ರೂರಿನ ಬಿ.ಎಚ್.ರಸ್ತೆಯಿಂದ ಮುಂದೆ ಹೋದರೆ ಕಂದಾವರದ ಹೇರಿಕೆರೆ ಸಿಗುತ್ತದೆ.15 ವರ್ಷಗಳ ಹಿಂದೆ ಈ ಕೆರೆ 38ರಿಂದ 40 ಎಕರೆ ವಿಸ್ತೀರ್ಣ ಹೊಂದಿದ್ದು, ಸುತ್ತಮುತ್ತಲಿನ ಅನೇಕ ಭಾಗಗಳಿಗೆ ನೀರುಣಿಸುತ್ತಿತ್ತು. ಈಗ ಅದರ ಗಾತ್ರ 8ರಿಂದ 10 ಎಕರೆಗೆ ಕುಗ್ಗಿದೆ. ಕೆರೆ ಜಾಗಗಳಲ್ಲಿ ಮನೆ/ಕಟ್ಟಡ ತಲೆ ಎತ್ತಿವೆ. ಉಳಿದ 8 ಎಕರೆ ಕೆರೆಯಲ್ಲಿ ಹನಿ ನೀರಿಲ್ಲದೆ ಬತ್ತಿ ಹೋಗಿದೆ.
2 ವರ್ಷಗಳಿಂದ ಹೂಳೆತ್ತಿಲ್ಲ
ಎರಡು ವರ್ಷಗಳ ಹಿಂದೆ ಒಂದು ಬಾರಿ ಹೂಳೆತ್ತಲಾಗಿತ್ತು. ಅದರ ಅನಂತರ ಕೆರೆಯಲ್ಲಿ ನೀರಿನ ಸೆಲೆ ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೆರೆಗೆ ಒಂದು ಗೇಟ್ ಇದ್ದು, ನೀರಿದ್ದ ಸಮಯ ಗೇಟ್ ತೆರೆದರೆ ಬೇಕಾದಷ್ಟು ನೀರು ಹರಿದುಹೋಗುತ್ತಿತ್ತು. ಆದರೆ ಇದು ಗತಕಾಲ ಎಂಬಂತಾಗಿದೆ. ಕೆರೆಗಳ ಪುನಶ್ಚೇತನ ಯೋಜನೆಯಡಿ ಈ ಕೆರೆಯನ್ನೂ ಅಭಿವೃದ್ಧಿಪಡಿಸಲು ಸಂಬಂಧಪಟ್ಟವರು ಮುಂದಾಗಬೇಕಿದೆ.