ಅನೈತಿಕ ಮೈತ್ರಿ ಹೆಚ್ಚು ದಿನ ಉಳಿಯಲ್ಲ: ಈಶ್ವರಪ್ಪ
Team Udayavani, May 21, 2018, 6:10 AM IST
ಶಿವಮೊಗ್ಗ: “ಮೈತ್ರಿ ಹೆಸರಿನ ಇಂತಹ ಅನೈತಿಕ ಸಂಬಂಧವನ್ನು ರಾಜ್ಯದ ಜನ ಒಪ್ಪೋದಿಲ್ಲ. ಈ ಸರ್ಕಾರ ಎಲ್ಲರ ನಿರೀಕ್ಷೆಗೂ ಮೊದಲೇ ಬಿದ್ದು ಹೋಗಲಿದೆ’ ಎಂದು ಶಾಸಕ ಕೆ. ಎಸ್. ಈಶ್ವರಪ್ಪ ಭವಿಷ್ಯ ನುಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ
ನಿರ್ಗಮಿಸಲು ಕ್ಷಣಗಣನೆ ಆರಂಭಗೊಂಡಿದೆ. ಎಷ್ಟು ದಿನ ಎಂದಷ್ಟೇ ಕಾದು ನೋಡಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸಬೇಕೆಂಬ ಉದ್ದೇಶದಿಂದಲೇ ಜನರು ನಮಗೆ ಮತ ನೀಡಿದ್ದಾರೆ. ಶೀಘ್ರದಲ್ಲಿಯೇ ಮತ್ತೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಯಾರೂ ನಿರೀಕ್ಷಿಸದ ಘಟನೆ ನಡೆದು ಹೋಗಿದೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಕಡೆಯ ಮುಖ್ಯಮಂತ್ರಿ ಎಂದು ನಾವು ಮೊದಲೇ ಹೇಳಿದ್ದೆವು. ಈ ಮಾತು ಸತ್ಯವಾಗಿದೆ.
ಆದರೆ ಜನರು ತಿರಸ್ಕರಿಸಿದ ಕಾಂಗ್ರೆಸ್ ಜತೆ ಜೆಡಿಎಸ್ ಹಿಂಬಾಗಿಲ ಮೂಲಕ ಕೈಜೋಡಿಸಿ ಸರ್ಕಾರ ರಚಿಸಲು ಮುಂದಾಗಿದೆ. ಇದೊಂದು ಕುಚೋದ್ಯದ ಸಂಗತಿ ಎಂದು ವಿಶ್ಲೇಷಿಸಿದರು.