ನನ್ನ ಟೀಕಿಸುವ ಭರದಲ್ಲಿ ದೇಶ ಮರೆತರು
Team Udayavani, May 28, 2018, 2:21 PM IST
ಹೊಸದಿಲ್ಲಿ/ಬಾಗ್ಪಥ್: “ಒಂದು ಕುಟುಂಬವನ್ನಷ್ಟೇ ಪೂಜಿಸುತ್ತಿದ್ದ ಕೆಲವರು ಈಗ ಮೋದಿಯನ್ನು ವಿರೋಧಿಸುವ ಸಲುವಾಗಿ ದೇಶವನ್ನೇ ವಿರೋಧಿಸಲು ಆರಂಭಿಸಿದ್ದಾರೆ. ಅಭಿವೃದ್ಧಿಯನ್ನೂ ಅವರು ವಿರೋಧಿಸುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರವಿವಾರ ಉತ್ತರಪ್ರದೇಶದ ಬಾಗ್ಪಥ್ನಲ್ಲಿ ಈಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್ವೇ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳನ್ನು ವಿಕಾಸದ ವಿರೋಧಿಗಳು ಎಂದು ಟೀಕಿಸಿದ್ದಾರೆ.
“ಒಂದು ಕುಟುಂಬವನ್ನು ಪೂಜಿಸುವವರು ಯಾವತ್ತೂ ಪ್ರಜಾಪ್ರಭುತ್ವವನ್ನು ಪೂಜಿಸುವುದಿಲ್ಲ. ಚುನಾವಣೆಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿದ ಬಳಿಕ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಕಾಂಗ್ರೆಸ್ಗೆ ಯಾವತ್ತೂ ಪ್ರಜಾಪ್ರಭುತ್ವದಲ್ಲಿ ಅಥವಾ ಯಾವುದೇ ಸಾಂವಿಧಾನಿಕ ಸಂಸ್ಥೆಯಲ್ಲಿ ನಂಬಿಕೆಯಿರಲಿಲ್ಲ. ಸುಪ್ರೀಂ ಕೋರ್ಟ್ ಕಡೆ ಬೆರಳು ತೋರಿಸಿದ್ದು, ಚುನಾವಣಾ ಆಯೋಗ ಮತ್ತು ಇವಿಎಂಗಳ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ರಿಸರ್ವ್ ಬ್ಯಾಂಕ್ ಬಗ್ಗೆ ಅನುಮಾನಗೊಂಡಿದ್ದು, ಭಾರತವನ್ನು ಶ್ಲಾ ಸಿದಂಥ ಅಂತಾರಾಷ್ಟ್ರೀಯ ಸಂಸ್ಥೆಗಳನ್ನೇ ಪ್ರಶ್ನಿಸಿದ್ದು ಇದಕ್ಕೆ ಸಾಕ್ಷಿ. ಈಗ ಅವರು ಮಾಧ್ಯಮಗಳು ತಾರತಮ್ಯ ಎಸಗುತ್ತಿವೆ ಎಂದು ಆರೋಪಿಸುತ್ತಿದ್ದಾರೆ’ ಎಂದು ಪ್ರಧಾನಿ ಹೇಳಿದ್ದಾರೆ.
ದಲಿತರು, ರೈತರ ಬಗ್ಗೆ ಮೊಸಳೆ ಕಣ್ಣೀರು: ತಮ್ಮ ರಾಜಕೀಯ ಲಾಭಕ್ಕಾಗಿ ರೈತರು, ದಲಿತರ ಹೆಸರು ಹೇಳಿಕೊಂಡು ಮೊಸಳೆ ಕಣ್ಣೀರು ಹಾಕುತ್ತಾರೆ. ದಲಿತರ ವಿರುದ್ಧದ ದೌರ್ಜನ್ಯ ಕಾಯ್ದೆ ಕುರಿತ ಕಾನೂನು ಅಥವಾ ಅವರಿಗೆ ಸಂಬಂಧಿಸಿದ ಮೀಸಲಾತಿ, ರೈತರ ಸಮಸ್ಯೆ… ಹೀಗೆ ಎಲ್ಲ ವಿಚಾರದಲ್ಲೂ ಸದಾ ಸುಳ್ಳುಗಳನ್ನೇ ಹೇಳುತ್ತಾ ಜನರ ಹಾದಿ ತಪ್ಪಿಸುತ್ತಾರೆ. ಅವರ ಸುಳ್ಳುಗಳಿಂದ ದೇಶದಲ್ಲಿ ಅಸ್ಥಿರತೆ ಸೃಷ್ಟಿಯಾಗುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುವುದೇ ಇಲ್ಲ ಎಂದೂ ಕಾಂಗ್ರೆಸ್ ವಿರುದ್ಧ ಮೋದಿ ಕಿಡಿಕಾರಿದರು. ಜತೆಗೆ, ದಲಿತರು, ಬಡವರು ಹಾಗೂ ರೈತರ ಅಭಿವೃದ್ಧಿಗಾಗಿ ತಮ್ಮ ಸರ್ಕಾರ ಕೈಗೊಂಡ ಕಾರ್ಯಕ್ರಮಗಳನ್ನೂ ಅವರು ಪ್ರಸ್ತಾವಿಸಿದರು.
ಹೈವೇ, ರೈಲ್ವೇ, ಏರ್ವೆà, ಐವೇ ನಮ್ಮ ಆದ್ಯತೆ: ಮೂಲಸೌಕರ್ಯ ಅಭಿವೃದ್ಧಿಯೇ ನಮ್ಮ ಸರ್ಕಾರದ ಆದ್ಯತೆ ಎಂದು ಪ್ರಧಾನಿ ಮೋದಿ ಹೇಳಿದ್ದು, 28 ಸಾವಿರ ಕಿ.ಮೀ. ಹೆದ್ದಾರಿ ನಿರ್ಮಾಣಕ್ಕೆ 3 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದೇವೆ ಎಂದು ಹೇಳಿದ್ದಾರೆ. ಹೈವೇ, ರೈಲ್ವೆ, ಏರ್ವೆà ಮತ್ತು ಐ-ವೇಗಳತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ದಿನಕ್ಕೆ 27 ಕಿ.ಮೀ.ನಂತೆ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದೂ ನುಡಿದಿದ್ದಾರೆ. ಕಬ್ಬು ಬೆಳೆಗಾರರಿಗೆ ಅವರ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನೂ ನೀಡಿದರು.
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ದೆಹಲಿ-ಸಹರಾನ್ಪುರ ಹೆದ್ದಾರಿಯನ್ನೂ ಈಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್ವೇ ಮಾದರಿಯಲ್ಲಿ ನಿರ್ಮಿಸುವ ಆಶ್ವಾಸನೆ ನೀಡಿದರು.
ಜನ ನನ್ನೊಂದಿಗಿದ್ದಾರೆ
ವಿಪಕ್ಷಗಳು ನನ್ನ ವಿರುದ್ಧ ಎಷ್ಟೇ ವಾಗ್ಧಾಳಿ ನಡೆಸಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಈ ದೇಶದ ಜನ ನನ್ನೊಂದಿಗಿದ್ದಾರೆ ಎಂದೂ ಪ್ರಧಾನಿ ಹೇಳಿದರು. ಇದೇ ವೇಳೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಮೋದಿ, “ತಲೆ ಮಾರುಗಳಿಂದ ಅಧಿಕಾರವನ್ನು ಅನುಭವಿಸಿ ಕೊಂಡು ಬಂದವರು ಬಡವರಿಗಾಗಿ ಯಾವ ಯೋಜನೆ ಮಾಡಿದರೂ ತಮಾಷೆಯಾಗಿ ನೋಡುತ್ತಾರೆ. ಸಂಪುಟ ಟಿಪ್ಪಣಿಯನ್ನೇ ಹರಿದುಹಾಕುವವರು ಸಂಸತ್ ಅವಿರೋಧ ವಾಗಿ ಅಂಗೀಕರಿಸಿದ ಕಾನೂನಿಗೆ ಗೌರವ ಕೊಡುತ್ತಾರೆಯೇ’ ಎಂದು ಪ್ರಶ್ನಿಸಿದರು.
ಫಲಾನುಭವಿಗಳ ಜತೆ ಇಂದು ಮಾತುಕತೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬೃಹತ್ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದಲ್ಲಿ ಸೋಮವಾರ ಭಾಗವಹಿಸಲಿದ್ದಾರೆ. ಎನ್ಡಿಎ ಸರಕಾರ ನಾಲ್ಕು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಉಜ್ವಲ ಯೋಜನೆ ಮತ್ತು ಮುದ್ರಾ ಯೋಜನೆ ಫಲಾನು ಭವಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. “ಬೆಂಬಲಕ್ಕಾಗಿ ಸಂಪರ್ಕ’ ಎಂಬ ಧ್ಯೇಯವಾಕ್ಯದ ಅಡಿ ಈ ಕಾರ್ಯಕ್ರಮ ನಡೆಯಲಿದ್ದು, ಶಾ ಅವರೂ 50ಕ್ಕೂ ಹೆಚ್ಚು ಮಂದಿಯ ಜತೆಗೆ ಖುದ್ದಾಗಿ ಮಾತುಕತೆ ನಡೆಸಲಿದ್ದಾರೆ.
ಗಡ್ಕರಿಯನ್ನು ರೋಡ್ಕರಿ ಎಂದಿದ್ದ ಠಾಕ್ರೆ
ಸಚಿವ ಗಡ್ಕರಿ ಅವರಿಗೆ ಶಿವಸೇನೆ ವರಿಷ್ಠರಾಗಿದ್ದ ಬಾಳಾ ಠಾಕ್ರೆ ಅವರು ಒಂದು ಆಸಕ್ತಿದಾಯಕ ನಿಕ್ನೇಮ್ ಕೊಟ್ಟಿದ್ದರಂತೆ. ಅದೇನೆಂದರೆ, “ರೋಡ್ಕರಿ’ ಎಂದು. ಇದನ್ನು ಸ್ವತಃ ಸಚಿವ ಗಡ್ಕರಿ ಅವರೇ ಪಂಚಾಯತ್ ಆಚ್ತಕ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಮೋದಿ ಸರಕಾರದಲ್ಲಿ ನೀವು ಸಾರಿಗೆ ಸಚಿವರಾಗಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ಮಾಹಿತಿ ನೀಡಿದ್ದಾರೆ. “ನಾನೇನೂ ಎಂಜಿನಿಯರ್ ಅಲ್ಲ. ಮಹಾರಾಷ್ಟ್ರದಲ್ಲಿ ಪಿಡಬ್ಲೂéಡಿ ಸಚಿವನಾಗಿದ್ದ ಅವಧಿಯಲ್ಲಿ(1995-99) ರಸ್ತೆಗಳ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡೆ. ಮುಂಬಯಿ-ಪುಣೆ ಎಕ್ಸ್ಪ್ರೆಸ್ ವೇಯನ್ನು ಕೇವಲ 2 ವರ್ಷಗಳಲ್ಲಿ ಪೂರ್ಣವಾಗುವಂತೆ ನೋಡಿಕೊಂಡೆ. ತದನಂತರ, ಬಾಳಾ ಠಾಕ್ರೆ ಅವರು ನನ್ನನ್ನು ಗಡ್ಕರಿ ಎನ್ನುವ ಬದಲು ರೋಡ್ಕರಿ ಎಂದೇ ಕರೆಯಲು ಆರಂಭಿಸಿದರು. ಪ್ರಧಾನಿ ಮೋದಿ ಅವರು ನನಗೆ ಯಾವ ಖಾತೆ ಬೇಕು ಎಂದು ಕೇಳಿದಾಗ, ನಾನು ಸಾರಿಗೆ ಖಾತೆಯನ್ನೇ ಕೇಳಿಕೊಂಡೆ. ಅದನ್ನು ನಾನು ಎಂಜಾಯ್ ಮಾಡುತ್ತೇನೆ ಎಂದೆ. ಹಾಗಾಗಿ, ನನಗೆ ಅದೇ ಖಾತೆ ಸಿಕ್ಕಿತು’ ಎಂದಿದ್ದಾರೆ ಗಡ್ಕರಿ. ರವಿವಾರ ಅವರ 61ನೇ ಜನ್ಮದಿನವಾಗಿದ್ದು, ಎರಡು ಪ್ರಮುಖ ಎಕ್ಸ್ಪ್ರೆಸ್ವೇಗಳ ಲೋಕಾರ್ಪಣೆಗೆ ಸಾಕ್ಷಿಯಾಗುವ ಮೂಲಕ ಅವರು ಬರ್ತ್ಡೇ ಆಚರಿಸಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು
ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಷ್ಟ್ರರಾಜಧಾನಿಯ ಹೊರಭಾಗದಲ್ಲಿ ರಿಂಗ್ ರೋಡ್ವೊಂದನ್ನು ನಿರ್ಮಿಸಿ ಎಂದು ಸುಪ್ರೀಂ ಕೋರ್ಟ್ 2005ರಲ್ಲೇ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಜೊತೆಗೆ, 2016ರ ಜುಲೈವೊಳಗೆ ಇದರ ನಿರ್ಮಾಣ ಪೂರ್ಣಗೊಳ್ಳಬೇಕು ಎಂಬ ಗಡುವನ್ನೂ ಹಾಕಿತ್ತು. ಅದರಂತೆ, 2006ರಲ್ಲಿ ಆಗಿನ ಯುಪಿಎ ಸರಕಾರ, ಹೆದ್ದಾರಿಗೆ ಯೋಜನೆ ರೂಪಿಸಿತ್ತು. ಆದರೆ, ಇದಕ್ಕೆ ಚಾಲನೆ ಸಿಕ್ಕಿದ್ದು ಎನ್ಡಿಎ ಸರಕಾರ ಅಧಿಕಾರಕ್ಕೇರಿದ ಬಳಿಕ (2015ರ ನ.5).