ಅಭಿವೃದ್ಧಿ ಮರೆತ ಸಮ್ಮಿಶ್ರ ಸರ್ಕಾರ: ಬಿಎಸ್ವೈ
Team Udayavani, Jun 10, 2018, 6:15 AM IST
ಬೆಂಗಳೂರು: “ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರೀ ಕಚ್ಚಾಟದಲ್ಲೇ ಕಾಲ ಕಳೆಯುತ್ತಿದ್ದು ಅಭಿವೃದ್ಧಿ ಮರೆತಿದೆ’
ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡೂ ಪಕ್ಷಗಳಲ್ಲಿ ಸಚಿವಗಿರಿ ಸಿಗದೆ ಅತೃಪ್ತಿ, ಖಾತೆ ಹಂಚಿಕೆಗಾಗಿ ಪೈಪೋಟಿ ನಡೆಯುತ್ತಿದ್ದು ಅಭಿವೃದಿಟಛಿ ಮರೆತಿದ್ದಾರೆ.
ಎಲ್ಲವನ್ನೂ ಜನರು ಗಮನಿಸುತ್ತಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಏಕೈಕ ಕಾರಣದಿಂದ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿ ಪ್ರಜಾತಂತ್ರ ವ್ಯವಸ್ಥೆ ಬುಡಮೇಲು ಮಾಡಿದೆ ಎಂದು ದೂರಿದರು.
ರೈತರ ಸಂಪೂರ್ಣ ಸಾಲ ಮನ್ನಾ, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರಿಗೆ ಆರು ಸಾವಿರ ರೂ.ಮಾಸಾಶನ, ಬಡ ಮಹಿಳೆಯರಿಗೆ ಮಾಸಿಕ 2 ಸಾವಿರ ರೂ., 1.50 ಲಕ್ಷ ರೂ. ಕೋಟಿ ರೂ. ನೀರಾವರಿ ಕ್ಷೇತ್ರಕ್ಕೆ ಮೀಸಲು ಘೋಷಣೆ ಮಾಡದಿದ್ದರೆ ಜೆಡಿಎಸ್ 20 ರಿಂದ 22 ಸೀಟು ಗೆಲ್ಲುತ್ತಿರಲಿಲ್ಲ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ ಏನೆಲ್ಲಾ ಮಾತನಾಡಿದರು. ಕಾಂಗ್ರೆಸ್ಸಿನವರು ದೇವೇಗೌಡ ಹಾಗೂ ಕುಮಾರಸ್ವಾಮಿ ಬಗ್ಗೆ ಏನೆಲ್ಲಾ ಮಾತನಾಡಿದರು ಎಲ್ಲರಿಗೂ ಗೊತ್ತಿದೆ. ಇದೀಗ ಅಧಿಕಾರಕ್ಕೆ ಒಂದಾಗಿದ್ದಾರೆ ಎಂದು ಲೇವಡಿ ಮಾಡಿದರು.
ಈ ಚುನಾವಣೆಯಲ್ಲಿ ಬಿಜೆಪಿ 250 ರಿಂದ 2000 ಸಾವಿರ ಮತಗಳ ಅಂತರದಲ್ಲಿ 30 ಸೀಟುಗಳಲ್ಲಿ ಸೋತಿದೆ. ಗದಗ , ಹಿರೇಕೆರೂರು, ಕುಂದಗೋಳ, ಮಸ್ಕಿ ಸೇರಿ ಕೆಲವೆಡೆ ನೋಟಾ ಮತಗಳು ನಮ್ಮ ಅಭ್ಯರ್ಥಿ ಸೋಲಿನ ಅಂತರಕ್ಕಿಂತ ಹೆಚ್ಚು ಮತ ಚಲಾವಣೆಯಾಗಿವೆ. ಈ ಬಗ್ಗೆ ನಾವು ಗಮನಹರಿಸಬೇಕು. ಜನರ ವಿಶ್ವಾಸಗಳಿಸಲು ಮುಂದಾಗಬೇಕು ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 104 ಸ್ಥಾನ ಬರಲು ಯುವಮೋರ್ಚಾ ಪಾತ್ರ ಹೆಚ್ಚಿನದ್ದಾಗಿದೆ. ಜತೆಗೆ ಯುವಮೋರ್ಚಾ ಅಭ್ಯರ್ಥಿಗಳು ಸಹ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ಯುವಮೋರ್ಚಾ ಒಂದು ಶಕ್ತಿ ಇದ್ದಂತೆ ಎಂದರು. ರಾಜ್ಯ ಯುವಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ, ಮಾಜಿ ಸಚಿವ ಅರವಿಂದ ಲಿಂಬಾವಳಿ, ತಮ್ಮೇಶ್ಗೌಡ ಉಪಸ್ಥಿತರಿದ್ದರು.
ವಿಜಯೇಂದ್ರ ಭಾಗಿ: ಯುವಮೋರ್ಚಾ ಉಪಾಧ್ಯಕ್ಷರಾಗಿರುವ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ಎಸ್.ವಿಜಯೇಂದ್ರ ಸಹ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯಾದ್ಯಂತ ಯುವಮೋರ್ಚಾ ಬಲಪಡಿಸುವುದು ಹಾಗೂ ಮುಂದಿನ ಲೋಕಸಭೆಗೆ ಪಕ್ಷ ಸಂಘಟಿಸುವ ಬಗ್ಗೆ ಮಾತನಾಡಿದರು.