ಸಿಎಂ ಆಗಲು ಇಷ್ಟ ಇರಲಿಲ್ಲ: ಎಚ್ಡಿಕೆ
Team Udayavani, Jun 12, 2018, 6:15 AM IST
ಬೆಂಗಳೂರು: “ಮುಖ್ಯಮಂತ್ರಿ ಆಗಲು ನನಗೆ ಇಷ್ಟ ಇರಲಿಲ್ಲ.ಅನಿವಾರ್ಯ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಈ ಹುದ್ದೆಯನ್ನು ಸ್ವೀಕರಿಸಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಗಾಂಧಿ ಭವನದಲ್ಲಿ ಸೋಮವಾರ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಆಗುವುದು ದೇವೇಗೌಡರಿಗೂ ಬೇಡವಾಗಿತ್ತು. ನನ್ನ ಮಗನ ಆರೋಗ್ಯ ಸರಿ ಇಲ್ಲ. ಎರಡು ಬಾರಿ ಹಾರ್ಟ್ ಆಪರೇಷನ್ ಆಗಿದೆ. ನಿಮ್ಮಲ್ಲೇ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ತಂದೆಯವರು ಹೇಳಿದ್ದರು.
ಆದರೆ, ಇಲ್ಲ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್ ಮುಖಂಡರು ಪಟ್ಟು ಹಿಡಿದರು.
ಹಾಗಾಗಿ, ಅನಿವಾರ್ಯ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೇನೆ ಎಂದರು. ಭ್ರಷ್ಟಾಚಾರ ಆರಂಭವಾಗುವುದಕ್ಕೆ ವರ್ಗಾವಣೆ ಮೂಲ ಬೇರು. ವಿಧಾನಸೌಧದಲ್ಲಿ ವರ್ಗಾವಣೆ ಧಂದೆಗೆ ಮಧ್ಯವರ್ತಿಗಳಿದ್ದಾರೆ. ಈ ಜಾಲ ಬಹಳ ವ್ಯವಸ್ಥಿತವಾಗಿ ಮತ್ತು ಅಷ್ಟೇ ಗಟ್ಟಿಯಾಗಿದೆ. ಆದಾಗ್ಯೂ ಈ ಭ್ರಷ್ಟಾಚಾರದ ಕಡಿವಾಣಕ್ಕೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ ಎಂದರು.