ಸ್ಕಿಲ್ ಗೇಮ್ ಗೆ ಸ್ಥಳೀಯಾಡಳಿತದ ಕೃಪಾಕಟಾಕ್ಷ
Team Udayavani, Jun 27, 2018, 4:15 AM IST
ಸ್ಕಿಲ್ ಗೇಮ್ ಫಾಲೋಅಪ್ – ಸುಳ್ಯ: ಕೂಲಿ ಕಾರ್ಮಿಕರು, ಚಾಲಕರು, ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಸ್ಕಿಲ್ ಗೇಮ್ ಹೆಸರಿನಲ್ಲಿ ನಡೆಯುತ್ತಿರುವ ಜೂಜಾಟಗಳಿಗೆ ಸ್ಥಳೀಯಾಡಳಿತಗಳ ಕೃಪಾಕಟಾಕ್ಷ ಇರುವ ಅನುಮಾನ ವ್ಯಕ್ತವಾಗಿದೆ. ಕಟ್ಟಡ ನಿರ್ಮಾಣಕ್ಕೆ, ನಿರ್ದಿಷ್ಟ ವ್ಯಾಪಾರ, ವ್ಯವಹಾರ ನಡೆಸಲು ಸ್ಥಳೀಯಾಡಳಿತಗಳಿಂದ ಪರವಾನಿಗೆ ಪಡೆದುಕೊಳ್ಳುವುದು ಕಡ್ಡಾಯ. ಹಾಗಿರುವಾಗ ಇಂತಹ ಅಡ್ಡೆ ಹುಟ್ಟಿಕೊಂಡದ್ದು ಹೇಗೆ ಎಂಬ ಪ್ರಶ್ನೆಯೀಗ ಎದ್ದಿದೆ.
ನಿಯಮ ಇಂತಿದೆ
ಉದಾಹರಣೆಗೆ ಸುಳ್ಯ ನಗರ ಪಂಚಾಯತ್ ನ ಪರವಾನಿಗೆ ಹೊಂದಿರುವ ಖಾಸಗಿ ಕಟ್ಟಡದಲ್ಲಿ ಅಂಗಡಿ, ಕಚೇರಿ ಇತ್ಯಾದಿ ವ್ಯವಹಾರ ಆರಂಭಿಸಬೇಕು ಎಂದಿಟ್ಟುಕೊಳ್ಳೋಣ. ಅಂಗಡಿ ಮಾಡುವ ವ್ಯಕ್ತಿ ಕಟ್ಟಡ ಪರವಾನಿಗೆ ಹೊಂದಿದ್ದರೆ ಸಾಲದು. ಆತ ತಾನು ವ್ಯವಹಾರ ನಡೆಸುವ ಉದ್ದೇಶವನ್ನು ದಾಖಲಿಸಿ ನಗರ ಪಂಚಾಯತ್ ಗೆ ಪರವಾನಿಗೆ ನೀಡುವಂತೆ ಅರ್ಜಿ ಸಲ್ಲಿಸಬೇಕು. ಬಳಿಕ ಕಂದಾಯ ನಿರೀಕ್ಷಕರು, ಆರೋಗ್ಯ ನಿರೀಕ್ಷಕರು ಆ ಕಟ್ಟಡ/ ಸ್ಥಳವನ್ನು ಪರಿಶೀಲಿಸಿ, ಅನುಮತಿ ನೀಡುವ ಕುರಿತು ತೀರ್ಮಾನಿಸುತ್ತಾರೆ.
11 ತಿಂಗಳಿಗೆ ಅನುಮತಿ ಪತ್ರ ನೀಡಿದ ಬಳಿಕ, ಅರ್ಜಿದಾರ ವ್ಯವಹಾರ ಆರಂಭಿಸಿದ 15 ದಿನ ಅಥವಾ 1 ತಿಂಗಳೊಳಗೆ ನಗರ ಪಂಚಾಯತ್ ನ ಕಂದಾಯ, ಆರೋಗ್ಯ ನಿರೀಕ್ಷಕರು ತಪಾಸಣೆ ನಡೆಸಿ ಪರವಾನಿಗೆ ಪಡೆದ ಉದ್ದೇಶಕ್ಕೆ ಅನುಗುಣವಾಗಿ ವ್ಯವಹಾರ ನಡೆಯುತ್ತಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು. 11 ತಿಂಗಳು ಅವಧಿ ಪೂರ್ಣಗೊಂಡ ಮೇಲೆ ಪರವಾನಿಗೆ ನವೀಕರಣಗೊಳಿಸಬೇಕು. ಆಗ ಮತ್ತೂಮ್ಮೆ ವ್ಯವಹಾರದ ಉದ್ದೇಶವನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು. ಇದು ಸ್ಥಳೀಯಾಡಳಿತ ಪಾಲಿಸಬೇಕಾದ ನಿಯಮಗಳು.
ಗೊತ್ತೇ ಇಲ್ಲ ಅನ್ನುತ್ತಿವೆ !
ಸ್ಕಿಲ್ ಗೇಮ್ ಹೆಸರಿನಲ್ಲಿ ಜೂಜಾಟ ನಡೆಯುತ್ತಿರುವ ಕುರಿತು ಜನಸಾಮಾನ್ಯರಿಗೆ ಮಾಹಿತಿ ಇದೆ. ಆದರೆ ಸ್ಥಳೀಯಾಡಳಿತಗಳು ಮಾತ್ರ ಗೊತ್ತೇ ಇಲ್ಲ ಅನ್ನುತ್ತಿವೆ. ನಗರಸಭೆ, ನಗರಪಂಚಾಯತ್ ಅಥವಾ ಇತರ ಸ್ಥಳೀಯಾಡಳಿತದ ಅಧಿಕಾರಿಗಳು ನಾವು ಪರವಾನಿಗೆಯೇ ಕೊಟ್ಟಿಲ್ಲ ಎನ್ನುತ್ತಾರೆ. ಪರವಾನಿಗೆ ಕೊಡದೆ ಸ್ಕಿಲ್ ಗೇಮ್ ಕೇಂದ್ರ ತೆರೆಯಲು ಹೇಗೆ ಸಾಧ್ಯ? ಕಾನೂನುಬಾಹಿರ ವ್ಯವಹಾರವನ್ನು ಮುಚ್ಚಿಸುವ ಅಧಿಕಾರ ಸ್ಥಳೀಯಾಡಳಿತಕ್ಕೆ ಇದ್ದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಯೀಗ ಉದ್ಭವಿಸಿದೆ.
ಕೃಪಾಕಟಾಕ್ಷದ ಅನುಮಾನ
ಇಲ್ಲಿ ಕಟ್ಟಡ ಪರವಾನಿಗೆ ಕೊಟ್ಟಿರುವ ಸ್ಥಳೀಯಾಡಳಿತ ಬಳಿಕ ವ್ಯಾಪಾರ ಇನ್ನಿತರ ವ್ಯವಹಾರಗಳಿಗೂ ಅನುಮತಿ ಕೊಟ್ಟಿದೆ. ಆದರೆ ಅರ್ಜಿದಾರನ ಉದ್ದೇಶವನ್ನು ಖಚಿತಪಡಿಸಿಕೊಂಡಿಲ್ಲ. ಒತ್ತಡಕ್ಕೆ ಒಳಗಾಗಿ ಅನುಮತಿ ಕೊಟ್ಟು, ಅವ್ಯವಹಾರ ನಡೆಯುತ್ತಿರುವ ಅರಿವಿದ್ದರೂ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ಕೆಲವೆಡೆ ಕಮಿಷನ್ ಆಸೆಗೆ ಒಪ್ಪಿಗೆ ಕೊಟ್ಟ ಪ್ರಕರಣಗಳೂ ಇವೆ.
ಸಂಪೂರ್ಣ ವಿರೋಧ
ಸ್ಕಿಲ್ ಗೇಮ್ ಹೆಸರಿನಲ್ಲಿ ನಡೆಯುತ್ತಿರುವ ಜೂಜಾಟದಂತಹ ಅಕ್ರಮ ಅಡ್ಡೆಗಳಿಗೆ ನಮ್ಮ ಸಂಪೂರ್ಣ ವಿರೋಧ ಇದೆ. ಇದಕ್ಕೆ ಅನುಮತಿ ಕೊಟ್ಟಿಲ್ಲ ಎನ್ನುವುದಾದರೆ ಆರಂಭಗೊಂಡದ್ದು ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ. ಕಠಿನ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ.
– ಶೀಲಾವತಿ ಮಾಧವ, ಅಧ್ಯಕ್ಷೆ, ಸುಳ್ಯ ನ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು