ಕೊಳ್ನಾಡು: ಗುಡ್ಡ ಕುಸಿದು ಮನೆಗೆ ಹಾನಿ, ದಾರಿ ಬಂದ್
Team Udayavani, Jun 28, 2018, 2:10 AM IST
ವಿಟ್ಲ: ಕೊಳ್ನಾಡು ಗ್ರಾಮದ ಮಂಕುಡೆ ನೆಡ್ಯಾಳ ಮುಂಡಪ್ಪ ಪೂಜಾರಿ ಅವರ ಮನೆಗೆ ಗುಡ್ಡ ಕುಸಿದುಬಿದ್ದು ಭಾರೀ ಹಾನಿಯಾಗಿದೆ. ಮನೆಯ ಗೋಡೆ ಬಿರುಕುಬಿಟ್ಟಿದೆ. ಕೊಡಂಗೆ ಕುದ್ರಿಯ ಕುಳಾಲು ಸಾಗುವ ಪಂ. ಕಾಲುದಾರಿ ಬಂದ್ ಆಗಿದೆ. ಮನೆಯ ಹಿಂಭಾಗದ ಸುಮಾರು 40 ಅಡಿ ಎತ್ತರದ ಗುಡ್ಡ ಬುಧವಾರ ಬೆಳಗ್ಗೆ ಕುಸಿಯಿತು. ಈ ಸಂದರ್ಭ ಮಣ್ಣಿನ ಭಾರಕ್ಕೆ ಮನೆಯ ಗೋಡೆ ಬಿರುಕುಬಿಟ್ಟಿದೆ. ಕಿಟಕಿ ಬಾಗಿಲು ಗಳು ಹಾನಿಗೊಂಡಿವೆ. ಈ ಸಂದರ್ಭ ಮನೆಯೊಳಗೆ ನಾಲ್ಕು ಮಂದಿಯಿದ್ದರು. ಅವರು ಹಾಗೂ ಮೂವರು ಕೂಲಿ ಕಾರ್ಮಿಕರು ಪಾರಾದರು.
ಕಳೆದ ಎರಡು ದಿನಗಳಿಂದ ಗುಡ್ಡ ಕುಸಿಯುತ್ತಿರುವುದನ್ನು ಗಮನಿಸಿ, ಮುಂಡಪ್ಪ ಪೂಜಾರಿ ಅವರು ಮನೆಯ ಹಿಂಭಾಗದಲ್ಲಿ ಬಿದ್ದ ಮಣ್ಣನ್ನು ಎತ್ತಲು, ಚರಂಡಿ ನಿರ್ಮಿಸಲು ಕೂಲಿ ಕಾರ್ಮಿಕರನ್ನು ಕರೆದಿದ್ದರು. ಅವರು ಅದೇ ಜಾಗದಲ್ಲಿ ಮಣ್ಣು ತೆರವು ಕಾಮಗಾರಿ ಆರಂಭಿಸುವ ಮುನ್ನವೇ ಈ ಘಟನೆ ಸಂಭವಿಸಿತೆನ್ನಲಾಗಿದೆ. ಕಾರ್ಮಿಕರೆಲ್ಲ ಅಪಾಯದಿಂದ ಪಾರಾದರು. ಕೊಳ್ನಾಡು ಗ್ರಾಮದ ಕೊಡಂಗೆ ಕುದ್ರಿಯ ಕುಳಾಲು ಸಾಗುವ ಪಂ. ಕಾಲುದಾರಿ ಬಂದ್ ಆಗಿ ಪರಸ್ಪರ ಸಂಪರ್ಕ ಕಡಿದುಕೊಂಡಂತಾಗಿದೆ. ಕಾಲುದಾರಿ ಬಳಸುವವರೆಲ್ಲ ಬೇರೆ ಮಾರ್ಗದಲ್ಲಿ ವಾಹನ ಬಾಡಿಗೆಗೆ ಗೊತ್ತು ಮಾಡಿ ಸಾಗಬೇಕಾಗಿದೆ. ಗ್ರಾ.ಪಂ. ಸದಸ್ಯರಾದ ಪವಿತ್ರಾ ಪೂಂಜ ಕೊಡಂಗೆ ಮತ್ತು ಹರೀಶ್ ಟೈಲರ್ ಮಂಕುಡೆ ಅವರ ನೇತೃತ್ವ ದಲ್ಲಿ ಮಣ್ಣು ತೆರವುಗೊಳಿಸುವ ಕಾಮಗಾರಿ ನಡೆಯುತ್ತಿದೆ. ಕಂದಾಯ ಇಲಾಖಾಧಿಕಾರಿಗಳು ಪರಿಶೀಲಿಸಿದ್ದಾರೆ. 2 ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ.