ಜಾಕಿರ್ ನಾಯಕ್ ಗಡಿಪಾರು ಮಾಡಲ್ಲ
Team Udayavani, Jul 7, 2018, 6:00 AM IST
ಪುತ್ರಜಯ: ವಿವಾದಿತ ಧಾರ್ಮಿಕ ಮುಖಂಡ ಜಾಕಿರ್ ನಾಯಕ್ರನ್ನು ಗಡಿಪಾರು ಮಾಡುವುದಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್ ಹೇಳಿದ್ದಾರೆ. ಇದರಿಂದಾಗಿ ಝಾಕಿರ್ನನ್ನು ಭಾರತಕ್ಕೆ ಗಡಿಪಾರು ಮಾಡಲಾಗುತ್ತದೆ ಎಂಬ ನಿರೀಕ್ಷೆ ಹುಸಿಯಾದಂತಾಗಿದೆ.
ಭಾರತದಲ್ಲಿ ಉಗ್ರ ಚಟುವಟಿಕೆಗಳು ಹಾಗೂ ಕೋಮು ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದ ಝಾಕಿರ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. 2016ರಲ್ಲೇ ಭಾರತ ತೊರೆದಿರುವ ಜಾಕಿರ್, ಮುಸ್ಲಿಂ ಬಾಹುಳ್ಯವಿರುವ ಮಲೇಷ್ಯಾಗೆ ತೆರಳಿದ್ದರು. ಮಲೇಷ್ಯಾದಲ್ಲಿ ಕಾಯಂ ನಿವಾಸಿಯಾಗಿ ದ್ದಾರೆ. ಭಾರತ ಮತ್ತು ಮಲೇಷ್ಯಾ ಮಧ್ಯೆ ಗಡಿಪಾರು ಒಪ್ಪಂದವಿದ್ದು, ಕಳೆದ ಜನವರಿಯಲ್ಲೇ ಗಡಿಪಾರು ಮಾಡಬೇಕೆಂದು ಭಾರತ ಕೇಳಿಕೊಂಡಿತ್ತು.
ಪ್ರೊಫೈಲ್ ಪಿಕ್ಚರ್ ಆಗಿದ್ದ ಜಾಕಿರ್: ಮಲೇಷ್ಯಾದಲ್ಲಿ ಹಲವು ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳ ಮೇಲೆ ಜಾಕಿರ್ಪ್ರಭಾವವಿದ್ದು, ಹಿಂದಿನ ಸರ್ಕಾರವಿದ್ದಾಗ ಹಲವು ಅಧಿಕಾರಿಗಳು ಜಾಕಿರ್ ಪ್ರಭಾವಕ್ಕೆ ಒಳಗಾಗಿದ್ದರು. ಅಷ್ಟೇ ಅಲ್ಲ, ಆತನ ಚಿತ್ರವನ್ನು ತಮ್ಮ ವಾಟ್ಸ್ಆ್ಯಪ್ ಪ್ರೊಫೈಲ್ ಪಿಕ್ಚರ್ ಆಗಿಯೂ ಉಳಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಹರಪನ್ ಪಕಟನ್ ಪ್ರಾಂತ್ಯದಲ್ಲಿನ ಪುತ್ರಜಯ ದಲ್ಲಿರುವ ಜಾಕಿರ್, ಅಲ್ಲಿನ ಅತ್ಯಂತ ಪ್ರತಿಷ್ಠಿತ ಮಸೀದಿಯಲ್ಲಿ ಎಂದಿನಂತೆಯೇ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ಮಸೀದಿಯಲ್ಲಿ ಕೆಲವು ದಿನಗಳ ಹಿಂದೆ ಪ್ರಧಾನಿ ಮಹತಿರ್ರನ್ನು ಝಾಕಿರ್ ಭೇಟಿಯಾಗಿದ್ದರು ಎನ್ನಲಾಗಿದೆ.
ಈಗ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಝಾಕಿರ್ ನಾಯಕ್ರನ್ನು ಬಂಧಿಸಿ ಕರೆತರಲಾ ಗುತ್ತದೆ. ಅವರನ್ನು ಯಾವುದೇ ಕಾರಣಕ್ಕೂ ಬಿಡಲಾಗದು.
ಹಂಸರಾಜ್ ಅಹಿರ್, ಕೇಂದ್ರ ಸಚಿವ
ಮಲೇಷ್ಯಾದಲ್ಲಿ ಸಮಸ್ಯೆ ಉಂಟು ಮಾಡದೇ ಇರುವಲ್ಲಿಯವರೆಗೆ ಅವರನ್ನು ಗಡಿಪಾರು ಮಾಡ ಲಾಗದು. ಯಾಕೆಂದರೆ ಅವರಿಗೆ ಶಾಶ್ವತ ನಿವಾಸಿ ಸ್ಥಾನಮಾನ ನೀಡಲಾಗಿದೆ.
ಮಹತಿರ್ ಮೊಹಮ್ಮದ್, ಮಲೇಷ್ಯಾ ಪ್ರಧಾನಿ