ಹೆಚ್ಚುತ್ತಿರುವ ಬಳಕೆದಾರರು: ಖಾಯಂ ಸಿಬಂದಿ ಕೊರತೆ
Team Udayavani, Jul 24, 2018, 9:28 AM IST
*ಆನ್ಲೈನ್ ಮೂಲಕ ಅರ್ಜಿ * ಪಾಸ್ಪೋರ್ಟ್ಗೆ ಮಧ್ಯವರ್ತಿ ಅವಲಂಬಿಸಬೇಡಿ
ಬ್ರಹ್ಮಾವರ: ಇಲ್ಲಿನ ಪ್ರಾದೇಶಿಕ ಪಾಸ್ಪೋರ್ಟ್ ಸೇವಾ ಕೇಂದ್ರದ ಬಳಕೆ ದಾರರು ದಿನೇದಿನೆ ಹೆಚ್ಚುತ್ತಿದ್ದು, ಜಿಲ್ಲೆಯವ ರಲ್ಲದೇ ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪಾಸ್ಪೋರ್ಟ್ ಆಕಾಂಕ್ಷಿಗಳೂ ಆಗಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಖಾಯಂ ಸಿಬಂದಿ ಕೊರತೆ ಕಾಡತೊಡಗಿದೆ.
ಉಡುಪಿ ಜಿಲ್ಲೆಗೆ ಮಂಜೂರಾದ ಪಾಸ್ಪೋರ್ಟ್ ಸೇವಾ ಕೇಂದ್ರ ಐದು ತಿಂಗಳ ಹಿಂದೆ ಬ್ರಹ್ಮಾವರದಲ್ಲಿ ಆರಂಭವಾಗಿತ್ತು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಮೂರೇ ದಿನಗಳಲ್ಲಿ ಸಂದರ್ಶನಕ್ಕೆ ಸಮಯ ನಿಗದಿಯಾಗುತ್ತಿದೆ. ದಿನಕ್ಕೆ 50 ಮಂದಿಗೆ ಟೋಕನ್ ನೀಡಲಾಗುತ್ತಿದ್ದು, ಎಲ್ಲರೂ ಸಂದರ್ಶನಕ್ಕೆ ಬರುತ್ತಿದ್ದಾರೆ. ವಾರದ ಆರು ದಿನವೂ ಟೋಕನ್ ಪಡೆದವರೆಲ್ಲ ಸಂದರ್ಶನಕ್ಕೆ ಬಂದರೆ ಕೇಂದ್ರ ಮೇಲ್ದರ್ಜೆ ಗೇರಲಿದೆ. ರಾಜ್ಯದ ಯಾವುದೇ ಜಿಲ್ಲೆಯವರು ಸಂದರ್ಶನಕ್ಕೆ ಈ ಕೇಂದ್ರವನ್ನು ಆರಿಸಬಹುದು. ಉಡುಪಿ ಜಿಲ್ಲೆಯವರೇ ಜಾಸ್ತಿ ಬಳಸುತ್ತಿದ್ದಾರೆ. ಅನಂತರದ ಸ್ಥಾನ ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯವರಿಗೆ.
3,995 ಮಂದಿ ಸಂದರ್ಶನ
ಜು. 23ರ ವರೆಗೆ 3,995 ಮಂದಿಯ ಸಂದರ್ಶನ ಪ್ರಕ್ರಿಯೆ ಪೂರ್ಣಗೊಂಡಿದೆ. 3,102 ದಾಖಲೆಗಳು ಬೆಂಗಳೂರು ಕೇಂದ್ರ ಕಚೇರಿಗೆ ರವಾನೆ ಯಾಗಿದ್ದು, ಸುಮಾರು 2,460 ಮಂದಿಗೆ ಪಾಸ್ಪೋರ್ಟ್ ಕೈ ಸೇರಿದೆ ಎಂದು ಅಂದಾಜಿಸಲಾಗಿದೆ. ಪಾಸ್ಪೋರ್ಟ್ಗೆ ಆನ್ಲೈನ್ನಲ್ಲಿ 1,500 ರೂ. ಶುಲ್ಕ ಪಾವತಿಸಬೇಕು. ಆದರೆ ಮಧ್ಯವರ್ತಿಗಳು ಹೆಚ್ಚು ಹಣ ವಸೂಲು ಮಾಡುತ್ತಿರುವ ಆರೋಪವಿದೆ. ವಿದ್ಯಾವಂತರು, ಅಂತರ್ಜಾಲ ಬಳಕೆದಾರರೂ ಏಜೆನ್ಸಿಗಳ ಮೊರೆ ಹೋಗುತ್ತಿದ್ದಾರೆ ಎಂಬುದು ಕಂಡುಬಂದಿರುವ ಅಂಶ.
ಖಾಯಂ ಸಿಬಂದಿ ಅಗತ್ಯ
ಕೇಂದ್ರದಲ್ಲೀಗ ಓರ್ವ ಅಧಿಕಾರಿ, ಇಬ್ಬರು ಅಂಚೆ ಕಚೇರಿ ಸಿಬಂದಿ ಇದ್ದಾರೆ. ಈ ಇಬ್ಬರಲ್ಲಿ ಓರ್ವರನ್ನು ತುರ್ತು ಕಾರ್ಯ ನಿಮಿತ್ತ ಬೇರೆಡೆಗೆ ಕಳುಹಿಸಿದರೆ ಆ ದಿನ ಸಂದರ್ಶನ ವಿಳಂಬವಾಗುತ್ತದೆ. ಆದ್ದರಿಂದ ಮೂವರು ಸಿಬಂದಿ ಖಾಯಂ ಸೇವೆಗೆ ಒದಗಿಸಲು ಸಂಸದರು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ. ಇದರೊಂದಿಗೆ ಕೇಂದ್ರದ ಪರಿಸರದಲ್ಲಿ ವ್ಯವಸ್ಥಿತ ವಾಹನ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲೂ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯಾಡಳಿತ ಗಮನ ಹರಿಸಬೇಕಿದೆ.
ಕಾರ್ಯ ಚಟುವಟಿಕೆ
ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಮತ್ತು ಅಂಚೆ ಇಲಾಖೆ ಸಹಯೋಗದಲ್ಲಿ ಈ ಕೇಂದ್ರ ನಿತ್ಯವೂ ಬೆಳಗ್ಗೆ 9.30ರಿಂದ ಸಂಜೆ 6ರ ವರೆಗೆ ಕಾರ್ಯ ನಿರ್ವಹಿಸುತ್ತಿದೆ. ರವಿವಾರ ರಜೆ.
ಪಾಸ್ಪೋರ್ಟ್ಗೆ ಅರ್ಜಿ:
ಹೀಗೆ ಮಾಡಿ
ಪ್ರಾರಂಭದಲ್ಲಿ www.passportindia.gov.in ವೆಬ್ಸೈಟ್ಗೆ ತೆರಳಿ ರೀಜನ್ ಬೆಂಗಳೂರು ಆಯ್ಕೆ ಮಾಡಬೇಕು.
ಅನಂತರ ನ್ಯೂ ಯೂಸರ್ ಲಾಗ್ ಇನ್ ಮಾಡಿ ಮೂಲ ಮಾಹಿತಿ ನೀಡಬೇಕು.
ಆಗ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಲಭ್ಯ ವಾಗುತ್ತದೆ. ಬಳಿಕ ಆನ್ಲೈನ್ನಲ್ಲೇ ಶುಲ್ಕ ಪಾವತಿಸಬೇಕು.
ಅನಂತರ ದೊರೆಯುವ ಆಯ್ಕೆಗಳಲ್ಲಿ ಉಡುಪಿ (ಬ್ರಹ್ಮಾವರ) ಕೇಂದ್ರವನ್ನು ಆರಿಸಬೇಕು. ಎಆರ್ಎನ್ ನಂಬರ್ ಹಾಗೂ ಸಂದರ್ಶನ ಸಮಯ ದೊರೆಯುತ್ತದೆ.
ಆಗ ದಾಖಲೆಗಳ ಜೆರಾಕ್ಸ್ ಹಾಗೂ ಮೂಲ ಪ್ರತಿಯೊಂದಿಗೆ ಬ್ರಹ್ಮಾವರಕ್ಕೆ ಹಾಜರಾಗಬೇಕು.
ಸಂಬಂಧಪಟ್ಟ ದಾಖಲೆಗಳನ್ನು ನೀಡಿದ ಬಳಿಕ ಪೊಲೀಸ್ ವೆರಿಫಿಕೇಶನ್ಗೆ ಕಳುಹಿಸಲಾಗುತ್ತದೆ. ಮಾಹಿತಿಗಳು ಸರಿಯಾಗಿದ್ದಲ್ಲಿ ತಿಂಗಳೊಳಗೆ ಪಾಸ್ಪೋರ್ಟ್ ದೊರೆಯುತ್ತದೆ.
ಬೇಕಾದ ದಾಖಲೆಗಳು
ಎಸ್ಎಸ್ಎಲ್ಸಿ ಅಥವಾ ಅನಂತರದ ಅಂಕಪಟ್ಟಿ, ವಿಳಾಸ ಹಾಗೂ ಜನನ ದಿನಾಂಕ ಸರಿಯಾಗಿ ಇರುವ ಆಧಾರ್ ಕಾರ್ಡ್ ಮುಖ್ಯ ದಾಖಲೆಗಳು.
ಕೇಂದ್ರದ ಸಂಪರ್ಕ ಸಂಖ್ಯೆ : 0820-2987020
*ಪ್ರವೀಣ್ ಮುದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ