ಅಟಲ್ ಗಂಭೀರ :ದೆಹಲಿಯತ್ತ ವಿವಿಐಪಿಗಳು;ಕೇಜ್ರಿ ಬರ್ತ್ ಡೇ ಕ್ಯಾನ್ಸಲ್
Team Udayavani, Aug 16, 2018, 12:45 PM IST
ಹೊಸದಿಲ್ಲಿ: ಮಾಜಿ ಪ್ರಧಾನಿ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವ ಹಿನ್ನಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು ಸೇರಿದಂತೆ ಗಣ್ಯಾತೀಗಣ್ಯರು ದೆಹಲಿಯತ್ತ ದೌಡಾಯಿಸುತ್ತಿದ್ದಾರೆ. ಸಂಜೆ ವೇಳೆಗೆ ಅಟಲ್ ಆರೋಗ್ಯದ ಕುರಿತು ವರದಿಯನ್ನು ಏಮ್ಸ್ ಆಸ್ಪತ್ರೆ ನೀಡುವ ಸಾಧ್ಯತೆ ಇದೆ.
ವಾಜಪೇಯಿ ಅವರು ಆಮ್ಲಜನಕದ ಬೆಂಬಲದೊಂದಿಗೆ ಗಂಭೀರ ಸ್ಥಿತಿಯಲ್ಲಿರುವ ಕುರಿತಾಗಿ ಏಮ್ಸ್ ಆಸ್ಪತ್ರೆ ಪತ್ರಿಕಾ ಪ್ರಕಟಣೆ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ , ಅಮಿತ್ ಶಾ ಸೇರಿದಂತೆ ಗಣ್ಯರು ಆಸ್ಪತ್ರೆ ಭೇಟಿ ನೀಡುತ್ತಿದ್ದಾರೆ. ಹೆಚ್ಚಿನ ಎಲ್ಲಾ ಕೇಂದ್ರ ಸಚಿವರು ವಿವಿಧ ರಾಜ್ಯಗಳ ಪ್ರವಾಸ ಮೊಟಕುಗೊಳಿಸಿ ದೆಹಲಿಯತ್ತ ಆಗಮಿಸುತ್ತಿದ್ದಾರೆ.
ಬಿಜೆಪಿಯ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.
ಕೇಜ್ರಿವಾಲ್ ಬರ್ತ್ ಡೇ ಕ್ಯಾನ್ಸಲ್
ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳದೆ, ಏಮ್ಸ್ ಆಸ್ಪತ್ರೆಗೆ ತೆರಳಿದ್ದಾರೆ.
ಲಕ್ನೋದಲ್ಲಿರುವ ವಾಜಪೇಯಿ ಅವರ ಸಂಬಂಧಿಕರು, ಅವರ ದತ್ತು ಪುತ್ರಿಯನ್ನು ದೆಹಲಿಗೆ ಕರೆಸಿಕೊಳ್ಳಲಾಗುತ್ತಿದೆ.
ವ್ಯಾಪಕ ಕಟ್ಟೆಚ್ಚರ
ಏಮ್ಸ್ ಆಸ್ಪತ್ರೆ ಬಳಿ ಬ್ಯಾರಿಕೇಡ್ಗಳನ್ನು ಹಾಕಿ ತಪಾಸಣೆ ಮಾಡಿ ಗಣ್ಯರನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ. ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ವಾಜಪೇಯಿ ಅವರ ನಿವಾಸದ ಬಳಿಯೂ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ರಸ್ತೆಯನ್ನು ಬಂದ್ ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪೂಜೆ , ಹೋಮ
ವಾಜಪೇಯಿ ಅವರ ಆರೋಗ್ಯ ಚೇತರಿಕೆಗಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಹೋಮ ಹವನಗಳನ್ನು ಮಾಡಲಾಗುತ್ತಿದೆ. ಉತ್ತರ ಪ್ರದೇಶದ ದರ್ಗಾಗಳಲ್ಲೂ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ನಡೆಸಿದ್ದಾರೆ.