ಬೇಡದ ವಿಚಾರಗಳಿಗೆ ಮಾಧ್ಯಮಗಳ ಮಹತ್ವ
Team Udayavani, Aug 27, 2018, 11:51 AM IST
ಮೈಸೂರು: ಮಾಧ್ಯಮಗಳು ಇಂದು ಸಮಾಜಕ್ಕೆ ಮತ್ತು ಜನರಿಗೆ ಯಾವುದೇ ಉಪಯೋಗವಿಲ್ಲದ ಕ್ಷುಲ್ಲಕ ವಿಚಾರಗಳಿಗೆ ಬಹಳ ಮಹತ್ವ ನೀಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜಶೇಖರ ಕೋಟಿ ಸಭಾಂಗಣ ನಾಮಫಲಕ ಅನಾವರಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಿಕೆ ದನಿ ಇಲ್ಲದವರಿಗೆ ದನಿಯಾಗಬೇಕು. ಆ ಕೆಲಸವನ್ನು ರಾಜಶೇಖರ ಕೋಟಿ ಮಾಡಿದರು. ಎಷ್ಟೇ ತೊಂದರೆ ಬಂದರೂ ಆದರ್ಶಗಳಲ್ಲಿ ಎಂದಿಗೂ ರಾಜಿಯಾಗುತ್ತಿರಲಿಲ್ಲ. ಕೋಟಿ ನನಗೆ ಬಹಳ ಒಳ್ಳೆಯ ಸ್ನೇಹಿತ. ಆದರೂ ನನ್ನ ಪರವಾಗಿ ಪಕ್ಷದ ಪರವಾಗಿ ಬರೆಯುವಂತೆ ನಾನು ಹೇಳುತ್ತಿರಲಿಲ್ಲ. ಅವರೂ ಬರೆಯುತ್ತಿರಲಿಲ್ಲ. ಸರಿ ಅ°ನಿಸಿದರೆ, ವಾಸ್ತವವಾಗಿದ್ದರೆ ಬರೆಯುವ ಅಥವಾ ನಿಷ್ಠುರವಾಗಿ ಬರೆಯುವ ಕೆಲಸವನ್ನು ಮಾಡಿದರು.
ನಾನು ಉಪ ಮುಖಮಂತ್ರಿಯಾಗಿದ್ದ ವೇಳೆ ರಾಜಶೇಖರ ಕೋಟಿ ಅವರು ಆಹ್ವಾನಿಸಿ ಸಂಘದ ಕಟ್ಟಡವನ್ನು ಉದ್ಘಾಟಿಸಿದ್ದರು. ಇಂದು ಅವರ ಹೆಸರಿನ ಸಭಾಂಗಣದ ನಾಮಫಲಕ ಅನಾವರಣಗೊಳಿಸುತ್ತಿರುವುದು ಸಂತಸ ತಂದಿದೆ. ಕೋಟಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಜಿಲ್ಲಾ ಪತ್ರಕರ್ತರ ಸಂಘ ಒಳ್ಳೆಯ ಕೆಲಸ ಮಾಡಿದೆ ಎಂದು ಪ್ರಶಂಸಿಸಿದರು.
ನವದೆಹಲಿ ಆಕಾಶವಾಣಿ ನಿವೃತ್ತ ಹಿರಿಯ ವಾರ್ತಾ ಉದ್ಘೋಷಕ ಎ.ಆರ್.ರಂಗರಾವ್ ಅವರು ಎಸ್ಸೆಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧಕ್ಷ ಸಿ.ಕೆ.ಮಹೇಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಂದೋಲನ ದಿನಪತ್ರಿಕೆ ಸಂಪಾದಕ ರವಿ ಕೋಟಿ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು ಉಪಸ್ಥಿತರಿದ್ದರು.