ಪೂವಮ್ಮಗೆ ಸಿಎಂ ಸಮ್ಮಾನ
Team Udayavani, Sep 8, 2018, 10:21 AM IST
ಮಂಗಳೂರು: ಏಶ್ಯಾಡ್ ವನಿತಾ ರಿಲೇಯಲ್ಲಿ ಚಿನ್ನ ಗೆದ್ದ ಕರಾವಳಿ ಪ್ರತಿಭೆ ಪೂವಮ್ಮ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ನಗರದಲ್ಲಿ ಸಮ್ಮಾನಿಸಿ ಸರಕಾರದಿಂದ 40 ಲಕ್ಷ ರೂ. ಬಹುಮಾನದ ಚೆಕ್ ಹಸ್ತಾಂತರಿಸಿದರು. ದ.ಕ.ಜಿ.ಪಂ.ನಲ್ಲಿ ಆಯೋಜಿಸಲಾದ ಪ್ರಗತಿ ಪರಿಶೀಲನೆ ಸಭೆಗೆ ಮುನ್ನ ಪೂವಮ್ಮ ಅವರನ್ನು ಅಭಿನಂದಿಸಲಾಯಿತು. ಸರಕಾರದಿಂದ ನಿವೇಶನ ನೀಡುವ ಭರವಸೆಯನ್ನೂ ಮುಖ್ಯಮಂತ್ರಿ ನೀಡಿದರು.
ಪೂವಮ್ಮ ಅವರ ಸಾಧನೆ ರಾಜ್ಯದ ಕ್ರೀಡಾಪಟುಗಳಿಗೆ ಸ್ಫೂರ್ತಿ ಯಾಗಲಿ. ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ನೀಡಲು ಸರಕಾರ ಬದ್ಧವಾಗಿದೆ. ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಕ್ರೀಡಾ ಸಾಧಕರ ಪ್ರೋತ್ಸಾಹ ಧನ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ಸಮ್ಮಾನ ಸ್ವೀಕರಿಸಿದ ಪೂವಮ್ಮ, “ನನ್ನ ಸಾಧನೆಗೆ ನೀಡಿದ ಗೌರವಕ್ಕೆ ಆಭಾರಿ. ಮುಖ್ಯಮಂತ್ರಿಗಳ ಪ್ರೋತ್ಸಾಹ ಮತ್ತಷ್ಟು ಸಾಧನೆಗೆ ಪ್ರೇರಣೆ. ರಾಜ್ಯದ ಕ್ರೀಡಾಪಟು ಎನ್ನಲು ಹೆಮ್ಮೆಯಾಗುತ್ತಿದೆ’ ಎಂದರು.
ಸಚಿವೆ ಜಯಮಾಲಾ, ಸಂಸದ ನಳಿನ್ ಕುಮಾರ್ ಕಟೀಲು, ವಿ.ಪ. ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.