ಆರು ತಿಂಗಳಲ್ಲಿ ಬಜೆಟ್ ಅನುಷ್ಠಾನಕ್ಕೆ ಮುಖ್ಯಮಂತ್ರಿ ತಾಕೀತು
Team Udayavani, Sep 29, 2018, 6:10 AM IST
ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಆರು ತಿಂಗಳು ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ನ ಕಾರ್ಯಕ್ರಮಗಳನ್ನು ಇನ್ನುಳಿದ ಆರು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿ ಜನರಿಗೆ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಸಾಲ ಮನ್ನಾ ಘೋಷಣೆಯನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿರುವ ಜತೆಗೆ ದೀನಬಂಧು, ಹಿರಿಯ ನಾಗರಿಕರಿಗೆ ನೀಡುವ ಮಾಸಾಶನ ಹೆಚ್ಚಿಸುವಂತಹ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಜತೆಗೆ ಕಲ್ಯಾಣ ಕಾರ್ಯಕ್ರಮಗಳನ್ನು ತ್ವರಿತವಾಗಿ ಜಾರಿಗೊಳಿಸುತ್ತಲೇ ಅಭಿವೃದ್ಧಿ ಕಾರ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಾಲ ಮನ್ನಾಗೂ ಆಯವ್ಯಯದ ಕಾರ್ಯಕ್ರಮಗಳ ಅನುಷ್ಠಾನಕ್ಕೂ ಸಂಬಂಧವಿಲ್ಲ ಎಂದಿರುವ ಮುಖ್ಯಮಂತ್ರಿಗಳು, ತೆರಿಗೆ ಸಂಗ್ರಹ ಪ್ರಮಾಣವು ಶೇ.34ರಷ್ಟು ಹೆಚ್ಚಳವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಪೂರಕವಾಗಿ ಬಾಕಿಯಿರುವ ಪ್ರಸ್ತಾವಗಳನ್ನು ಅ.15ರೊಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಆರ್ಥಿಕ ವರ್ಷದ ಅರ್ಧ ಹಾದಿ ಈಗಾಗಲೇ ಸವೆದಿರುವುದರಿಂದ ಬಾಕಿಯಿರುವ ಆರು ತಿಂಗಳಲ್ಲಿ ಯೋಜನೆಗಳ ಅನುಷ್ಠಾನ, ಅನುದಾನದ ಸದ್ಬಳಕೆಗೆ ಗಮನ ಹರಿಸಬೇಕು. ಮಾರ್ಚ್ ಅಂತ್ಯದ ವೇಳೆಗೆ ಶೇ.100ರಷ್ಟು ಬಜೆಟ್ ಘೋಷಣೆಗಳು ಕಾರ್ಯಗತವಾಗುವಂತೆ ಮೇಲ್ವಿಚಾರಣೆ ನಡೆಸಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರದೆ ಆದ್ಯತೆ ಮೇರೆ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ. ಸರ್ಕಾರ “ಟೇಕ್ ಆಫ್’ ಆಗಿಲ್ಲ ಎಂದು ಟೀಕಿಸುವವರಿಗೆ ಯೋಜನೆಗಳ ಅನುಷ್ಠಾನದ ಮೂಲಕವೇ ಉತ್ತರ ನೀಡಲು ಸಜ್ಜಾಗಿದ್ದಾರೆ.
2018-19ನೇ ಸಾಲಿನ ಆಯವ್ಯಯದಲ್ಲಿ ಮಾಡಿದ ಘೋಷಣೆಗಳ ಅನುಷ್ಠಾನ ಹಾಗೂ ಈವರೆಗಿನ ಇಲಾಖಾವಾರು ವೆಚ್ಚದ ಬಗ್ಗೆ ವಿಧಾನಸೌಧದಲ್ಲಿ ಶುಕ್ರವಾರ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆಯವ್ಯಯದಲ್ಲಿ ಘೋಷಿಸಲಾದ ಯೋಜನೆ, ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ ಪ್ರತಿ ಇಲಾಖೆಯು ಪ್ರಸ್ತಾವಗಳನ್ನು ಅ.15ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಕಳೆದ ಫೆಬ್ರುವರಿ ಹಾಗೂ ಜುಲೈನಲ್ಲಿ ಮಂಡನೆಯಾದ ಬಜೆಟ್ನ ಘೋಷಣೆಗಳಿಗೆ ಸಂಬಂಧಪಟ್ಟಂತೆ ಇಲಾಖೆಗಳು ಪ್ರಸ್ತಾವ ಸಲ್ಲಿಸಲು ಅ.15ರವರೆಗೆ ಗಡುವು ನೀಡಲಾಗಿದೆ. ಜತೆಗೆ ಬಜೆಟ್ ಘೋಷಣೆಗಳ ಅನುಷ್ಠಾನವನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ಫೆಬ್ರುವರಿಯಲ್ಲಿ ಮಂಡನೆಯಾದ ಬಜೆಟ್ನಲ್ಲಿ 321 ಹಾಗೂ ಜುಲೈನಲ್ಲಿ ಮಂಡಿಸಿದ ಬಜೆಟ್ನಲ್ಲಿ 139 ಘೋಷಣೆ ಸೇರಿದಂತೆ ಸರ್ಕಾರ ಒಟ್ಟು 460 ಘೋಷಣೆ ಮಾಡಿದೆ. ಈ ಪೈಕಿ 230 ಘೊಷಣೆ ಸಂಬಂಧ ಆದೇಶ ಹೊರಡಿಸಲಾಗಿದೆ. 117 ಘೋಷಣೆ ಸಂಬಂಧಪಟ್ಟಂತೆ ಆರ್ಥಿಕ ಇಲಾಖೆ ಪರಿಶೀಲನೆ ಹಂತದಲ್ಲಿದೆ. 18 ಘೋಷಣೆ ಕುರಿತಂತೆ ಸಚಿವ ಸಂಪುಟದ ಮುಂದೆ ಕರಡು ಸಲ್ಲಿಕೆಗೆ ಸಿದ್ಧತೆ ಹಂತದಲ್ಲಿದೆ. 11 ಘೋಷಣೆಗಳು ನಿರೂಪಣಾ ಘೋಷಣೆ ಹಂತದಲ್ಲಿವೆ. ಎಲ್ಲ ಘೋಷಣೆಗಳ ಅನುಷ್ಠಾನವು ನಾನಾ ಹಂತದಲ್ಲಿ ಪ್ರತಿಯಲ್ಲಿವೆ ಎಂದು ತಿಳಿಸಿದರು.
ಕೆಲವರು ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ ಎನ್ನುತ್ತಿದ್ದಾರೆ. ವಾಸ್ತವವಾಗಿ ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಸಮರ್ಪಕವಾಗಿ ಕಾಲಮಿತಿಯೊಳಗೆ ಜಾರಿಗೊಳಿಸುವ ಕಾರ್ಯದಲ್ಲಿ ಮುನ್ನಡೆಯುತ್ತಿದ್ದೇವೆ. ಆಗಸ್ಟ್ ಅಂತ್ಯದವರೆಗೆ ಶೇ.26ರಷ್ಟು ಆರ್ಥಿಕ ಪ್ರಗತಿ ಸಾಧಿಸಿದ್ದೇವೆ. ಕಳೆದ ವರ್ಷ ಇದೇ ಅವಧಿಗೆ ಶೇ.27ರಷ್ಟು ಆರ್ಥಿಕ ಪ್ರಗತಿ ಸಾಧನೆಯಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗಿದ್ದರೂ ನಂತರ ಘೋಷಣೆಗಳ ಜಾರಿ ಪ್ರಕ್ರಿಯೆ ಚುರುಕಾಗಿ ನಡೆದಿದೆ ಎಂದು ಹೇಳಿದರು.
ತೆರಿಗೆ ಸಂಗ್ರಹದಲ್ಲಿ ಶೇ.34ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಜಿಎಸ್ಟಿ ಜಾರಿ ಬಳಿಕ ರಾಜ್ಯ ಸರ್ಕಾರಕ್ಕೆ ಕೇವಲ ನಾಲ್ಕು ತೆರಿಗೆ ಮೂಲಗಳಷ್ಟೇ ಇದ್ದು, ಆಗಸ್ಟ್ 1ರಿಂದ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಸಾಲ ಮನ್ನಾಗೂ ಆಯವ್ಯಯ ಕಾರ್ಯಕ್ರಮಗಳ ಅನುದಾನಕ್ಕೂ ಸಂಬಂಧವಿಲ್ಲ. ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾಗೆಂದು ಬಜೆಟ್ನಲ್ಲಿ 6,500 ಕೋಟಿ ರೂ. ಕಾಯ್ದಿರಿಸಲಾಗಿದೆ. ಪೂರ್ಣಗೊಂಡ ಕಾಮಗಾರಿಗಳಿಗೆ ಸುಮಾರು 2,000- 3,000 ಕೋಟಿ ರೂ. ಬಿಲ್ ಪಾವತಿ ಬಾಕಿ ಇದ್ದು, ಹಿಂದಿನಿಂದಲೂ ನಡೆದುಬಂದಿದೆ. ತ್ವರಿತವಾಗಿ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.
ಉದ್ಯೋಗ ಮೇಳ
ಜನತಾ ದರ್ಶನದಲ್ಲಿ 2335 ತಾಂತ್ರಿಕೇತರ ಉದ್ಯೋಗಾಕಾಂಕ್ಷಿಗಳು, 863 ತಾಂತ್ರಿಕ ಉದ್ಯೋಗಕಾಂಕ್ಷಿಗಳು ಸೇರಿದಂತೆ ಒಟ್ಟು 3,198 ಉದ್ಯೋಗಾಕಾಂಕ್ಷಿಗಳು ಮನವಿ ಸಲ್ಲಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಗ್ರಾಮಾಂತರ ಜಿಲ್ಲಾಧಿಕಾರಿಗಳು ಶನಿವಾರ ಹಾಗೂ ಭಾನುವಾರ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದಾರೆ. ಮೇಳದಲ್ಲಿ 3,198 ಮಂದಿಗೆ ಮೊದಲ ಹಂತದಲ್ಲಿ ಉದ್ಯೋಗ ಕಲ್ಪಿಸಲು ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಜತೆಗೆ ಮೇಳದಲ್ಲಿ ಅರ್ಜಿ ಸಲ್ಲಿಸುವವರಿಗೆ ಕೌಶಲ್ಯಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಉದ್ಯೋಗ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ