ಶಬರಿ ಬಾಗಿಲು ಮುಕ್ತ: ಮಹಿಳೆಯರೂ ಶಬರಿಮಲೆ ಪ್ರವೇಶಿಸಬಹುದು; ಸುಪ್ರೀಂ
Team Udayavani, Sep 29, 2018, 6:00 AM IST
ಹೊಸದಿಲ್ಲಿ/ತಿರುವನಂತಪುರ: ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ದೇವಳಕ್ಕೆ 10-50 ವಯೋಮಿತಿ ಸಹಿತ ಎಲ್ಲ ವಯೋಮಾನದ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ. ಈ ಮೂಲಕ 800 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ಮುಖ್ಯ ನ್ಯಾ| ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ತೆರೆ ಎಳೆದಿದೆ.
4:1 ಅನುಪಾತದಲ್ಲಿ ತೀರ್ಪು ಬಂದಿದ್ದು, ನ್ಯಾ| ಇಂದೂ ಮಲ್ಹೋತ್ರಾ ಆಕ್ಷೇಪ ವ್ಯಕ್ತಪಡಿಸಿ, ಧಾರ್ಮಿಕ ವಿಚಾರ ಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಸರಿಯಲ್ಲ. ಈ ತೀರ್ಪು ಇತರ ಧಾರ್ಮಿಕ ಕ್ಷೇತ್ರಗಳ ಮೇಲಿನ ಆಚರಣೆ ಮೇಲೂ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕರ್ನಾಟಕದ ಸಚಿವೆ ಜಯಮಾಲಾ, ಕೇಂದ್ರ ಸಚಿವೆ ಮೇನಕಾ ಗಾಂಧಿ ಸಹಿತ ಹಲವರು ಸ್ವಾಗತಿಸಿದ್ದಾರೆ. ಶಬರಿಮಲೆ ಕ್ಷೇತ್ರದ ಮುಖ್ಯ ಅರ್ಚಕ ಕಂಡರಾರು ರಾಜೀವರಾರು, ಸಾಮಾಜಿಕ ಹೋರಾಟಗಾರ ರಾಹುಲ್ ಈಶ್ವರ್ ಆಕ್ಷೇಪಿಸಿದ್ದಾರೆ. ಕೇರಳ ಸರಕಾರ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದೆ.
ನಿಷೇಧವೇ ಪ್ರಧಾನವಲ್ಲ
ಶಬರಿಮಲೆ ದೇಗುಲದಲ್ಲಿ ಸದ್ಯ ಆಚರಣೆಯಲ್ಲಿರುವ 10-50 ವಯೋಮಿತಿ ನಡುವಿನ ಮಹಿಳೆಯರಿಗೆ ಪ್ರವೇಶ ನಿಷೇಧವು ಲಿಂಗ ತಾರತಮ್ಯವಾಗುತ್ತದೆ. ಭಕ್ತಿ ಎನ್ನುವುದು ತಾರತಮ್ಯ ಮತ್ತು ಸಮಾನತೆಯನ್ನು ನಿರಾಕರಿಸು ವಂತೆ ಇರಬಾರದು ಎಂದು ಮುಖ್ಯ ನ್ಯಾ| ದೀಪಕ್ ಮಿಶ್ರಾ ಹೇಳಿದರು. “ಜೀವನ ಮತ್ತು ಭಕ್ತಿಯನ್ನು ಸಮ್ಮಿಳಿತಗೊಳಿಸುವುದಕ್ಕೆ ಧರ್ಮ ದಾರಿ’ ಎಂದು ನ್ಯಾ| ಮಿಶ್ರಾ ವ್ಯಾಖ್ಯಾನಿಸಿದ್ದಾರೆ. ಅಯ್ಯಪ್ಪ ಭಕ್ತರು ಎಂಬ ಪ್ರತ್ಯೇಕ ಧಾರ್ಮಿಕ ಪಂಥ ಇಲ್ಲ. 10-50 ವಯೋ ಮಾನದ ಮಹಿಳೆಯರನ್ನು ದೇಗುಲ ಪ್ರವೇಶದಿಂದ ಹೊರಗಿಡುವುದನ್ನು ಧಾರ್ಮಿಕ ಪದ್ಧತಿಯ ಭಾಗ ಎಂದು ಕರೆಯಲು ಸಾಧ್ಯವಿಲ್ಲ. ಎಲ್ಲ ಭಕ್ತರು ಸಮಾನರು ಮತ್ತು ಅವರ ನಡುವೆ ಯಾವುದೇ ತಾರತಮ್ಯ ಇರಬಾರದು ಎಂದು ನ್ಯಾ| ಮಿಶ್ರಾ ಪ್ರತಿಪಾದಿಸಿದರು.
ಸಿಜೆಐ ಜತೆ ಸಹಮತ
ಮುಖ್ಯ ನ್ಯಾಯಮೂರ್ತಿ ಮಿಶ್ರಾ ಜತೆಗೆ ಸಹಮತ ವ್ಯಕ್ತಪಡಿಸಿದ ನ್ಯಾ| ಆರ್.ಎಫ್. ನಾರಿಮನ್, ನಿಷೇಧ ವಿಚಾರ ಸಮಾನತೆಯನ್ನು ಪ್ರತಿಪಾದಿಸುವ ಸಂವಿಧಾನದ 25 ಮತ್ತು 26ನೇ ವಿಧಿಗಳಿಗೆ ವಿರುದ್ಧವಾದದ್ದು ಎಂದರು. ಇದರ ಜತೆಗೆ ಕೇರಳದಲ್ಲಿ ಹಿಂದೂ ಪ್ರಾರ್ಥನಾ ಕೇಂದ್ರ (ಪ್ರವೇಶ ನಿಗದಿ ಅಧಿಕಾರ) ಕಾಯ್ದೆ 1965ರ ನಿಯಮ 3 ಬಿಯನ್ನೂ ನ್ಯಾ| ನಾರಿಮನ್ ತೆಗೆದುಹಾಕಿದ್ದಾರೆ.
ಪ್ರಾರ್ಥನಾ ಕೇಂದ್ರ ಪ್ರವೇಶಕ್ಕೆ ಮಹಿಳೆಯರನ್ನು ನಿಷೇಧಿಸುವುದು ಅವರಿಗೆ ಇರುವ ಪೂಜೆಯ ಹಕ್ಕು ಕಸಿದುಕೊಂಡಂತೆ ಮತ್ತು ಮಾನವ ಘನತೆಗೆ ಕುಂದು ತರುವ ವಿಚಾರ ಎಂದು ನ್ಯಾ| ಡಿ.ವೈ. ಚಂದ್ರಚೂಡ್ ತಮ್ಮ ತೀರ್ಪಿನಲ್ಲಿ ಹೇಳಿದರು.
ಧಾರ್ಮಿಕೇತರ ಕಾರಣಗಳಿಂದಾಗಿ ಶತಮಾನಗಳಿಂದ ಮಹಿಳೆಯರನ್ನು ಪೂಜಾ ಕೇಂದ್ರದ ಪ್ರವೇಶಕ್ಕೆ ಅನುಮತಿ ನೀಡದೇ ಇರುವುದು ಸರಿಯಾದ ಕ್ರಮವಲ್ಲ ಎಂದರು. ಮಹಿಳೆಯರ ಘನತೆಗೆ ಕುಂದು ತರುವ ಯಾವುದೇ ಧಾರ್ಮಿಕ ಪದ್ಧತಿ, ಆಚರಣೆ ಸಂವಿಧಾನ ವಿರೋಧಿ ಎಂದು ನ್ಯಾ| ಚಂದ್ರಚೂಡ್ ಹೇಳಿದರು. ನ್ಯಾಯಪೀಠದಲ್ಲಿದ್ದ ಮತ್ತೂಬ್ಬ ನ್ಯಾ| ಎ.ಎಂ.ಖಾನ್ವಿಲ್ಕರ್ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಸ್ತಕ್ಷೇಪ ಸರಿಯಲ್ಲ: ನ್ಯಾ|ಇಂದೂ ಮಲ್ಹೋತ್ರಾ
ಭಿನ್ನ ತೀರ್ಪು ನೀಡಿರುವ ನ್ಯಾ| ಇಂದೂ ಮಲ್ಹೋತ್ರಾ ಧಾರ್ಮಿಕ ವಿಚಾರಗಳಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದರು. “ಭಾರತ ವಿವಿಧ ರೀತಿಯ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ದೇಶ. ಸಂವಿಧಾನ ಪ್ರಕಾರ ಯಾರಿಗೇ ಆಗಲಿ ಆತ/ಆಕೆ ಬಯಸಿದ ಧರ್ಮ ಆಚರಿಸಲು ಅವಕಾಶ ಇದೆ. ಅದರಲ್ಲಿ ತಾರತಮ್ಯ ಇದೆ ಎಂದು ಕಂಡು ಬಂದರೂ ಕೋರ್ಟ್ಗಳ ಹಸ್ತಕ್ಷೇಪ ಸರಿಯಲ್ಲ’ ಎಂದು ಹೇಳಿರುವ ನ್ಯಾ| ಮಲ್ಹೋತ್ರಾ, ಈ ಅರ್ಜಿ ಪರಿಗಣನೆಗೆ ಯೋಗ್ಯವಲ್ಲ ಎಂದು ಅಭಿಪ್ರಾಯಪಟ್ಟರು.
ವಿದೇಶಿ ಮಾಧ್ಯಮಗಳಲ್ಲಿ ಪ್ರಶಂಸೆ
ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ವಿದೇಶಿ ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಅಮೆರಿಕದಲ್ಲಿನ ಸುಪ್ರೀಂ ಕೋರ್ಟ್ ಕೇವಲ ಆಯ್ದ ವಿಚಾರಗಳ ಬಗ್ಗೆ ಮಾತ್ರ ವಿಚಾರಣೆ ನಡೆಸುತ್ತದೆ. ಆದರೆ ಭಾರತದ ಸುಪ್ರೀಂ ಕೋರ್ಟ್ ಕಸದ ಸಮಸ್ಯೆಯಿಂದ ಹಿಡಿದು ಮಹಿಳೆಯರ ಹಕ್ಕಿನ ವರೆಗಿನ ವಿವಿಧ ರೀತಿಯ ಕಾನೂನು ಖಟ್ಲೆಗಳ ವಿಚಾರಣೆ ನಡೆಸುತ್ತದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂಬ ವ್ಯವಸ್ಥೆಯ ಮೂಲಕ ಭಾರತದ ಎಲ್ಲ ನಾಗರಿಕರಿಗೂ ಕಾನೂನು ಹೋರಾಟ ನಡೆಸುವ ಅವಕಾಶ ಇದೆ ಎಂದು “ದ ವಾಷಿಂಗ್ಟನ್ ಪೋಸ್ಟ್’ ಅಭಿಪ್ರಾಯಪಟ್ಟಿದೆ.
ಮೇಲ್ಮನವಿ ಸಲ್ಲಿಸುತ್ತೇವೆ
ತೀರ್ಪು ಪ್ರಕಟವಾಗುತ್ತಲೇ ಪ್ರತಿಕ್ರಿಯೆ ನೀಡಿದ ಸಾಮಾಜಿಕ ಹೋರಾಟಗಾರ, ಅಯ್ಯಪ್ಪ ಧರ್ಮಸೇನಾ ಅಧ್ಯಕ್ಷ ರಾಹುಲ್ ಈಶ್ವರ್, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತದೆ. ವಿಸ್ತೃತ ಪೀಠದಲ್ಲಿ ವಿಚಾರಣೆಗಾಗಿ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಅಯ್ಯಪ್ಪ ಸ್ವಾಮಿ ಹಲವು ವಿಶೇಷಣಗಳಿಂದ ಕೂಡಿದ ದೇವರು. ಆತ ನೈಷ್ಟಿಕ ಬ್ರಹ್ಮಚಾರಿ ಮತ್ತು ದೇವರಿಗೆ ಇರುವ ಖಾಸಗಿತನ ಎತ್ತಿ ಹಿಡಿಯಬೇಕಾಗಿದೆ ಎಂದು ಈಶ್ವರನ್ ಹೇಳಿದರು. ಅ.16ರ ವರೆಗೆ ದೇಗುಲ ಮುಚ್ಚಿರುತ್ತದೆ. ಹೀಗಾಗಿ ಯೋಚಿಸಿ ತೀರ್ಮಾನ ಕೈಗೊಳ್ಳಲು ಸಮಯವಿದೆ. ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಸದ್ಯ ಇರುವ ವ್ಯವಸ್ಥೆ ಲಿಂಗ ತಾರತಮ್ಯಕ್ಕೆ ದಾರಿ ಮಾಡುತ್ತಿದೆ.
ಜೀವನ ಮತ್ತು ಭಕ್ತಿಯನ್ನು ಸಮ್ಮಿಳಿತ ಗೊಳಿಸುವುದಕ್ಕೆ ಧರ್ಮ ದಾರಿ
ಅಯ್ಯಪ್ಪ ಭಕ್ತರು ಪ್ರತ್ಯೇಕ ಧಾರ್ಮಿಕ ಪಂಥ ಹೊಂದಿಲ್ಲ.
ಎಲ್ಲ ಭಕ್ತರು ಸಮಾನರು, ಅವರ ನಡುವೆ ಯಾವುದೇ ತಾರತಮ್ಯ ಇರಬಾರದು
ಮಹಿಳೆಯರ ಪ್ರವೇಶ ನಿಷೇಧ ಸಂವಿಧಾನದ 25 ಮತ್ತು 26ನೇ ವಿಧಿಗಳಿಗೆ ವಿರುದ್ಧವಾದದ್ದು
ಪ್ರಾರ್ಥನಾ ಕೇಂದ್ರ ಪ್ರವೇಶಕ್ಕೆ
ಮಹಿಳೆಯರನ್ನು ನಿಷೇಧಿಸುವುದು ಅವರಿಗೆ ಇರುವ ಪೂಜೆಯ ಹಕ್ಕು ಕಸಿದುಕೊಂಡಂತೆ ಮತ್ತು ಮಾನವ ಘನತೆಗೆ ಕುಂದುಂಟು ಮಾಡಿದಂತೆ.
ಪ್ರಕರಣದ ಹಿನ್ನೋಟ
1990 ಎಸ್. ಮಹೇಂದ್ರನ್ ಅವರಿಂದ ಕೇರಳ ಹೈಕೋರ್ಟ್ನಲ್ಲಿ ಮನವಿ ಸಲ್ಲಿಕೆ
1991 ಎ. 5 ಕೇರಳ ಹೈಕೋರ್ಟ್ನಿಂದ ವಯೋಮಿತಿ ಆಧಾರದಲ್ಲಿ ನಿಷೇಧ ಸರಿ ಎಂದು ತೀರ್ಪು
2006 ಎ.4 ಸು. ಕೋರ್ಟ್ ನಲ್ಲಿ ಇಂಡಿಯನ್ ಯಂಗ್ ಲಾಯರ್ಸ್ ಅ.ನಿಂದ ಅರ್ಜಿ
2017 ಅ.13 ಸಾಂವಿಧಾನಿಕ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್
2018 ಆ.1: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಸೆ. 28: 4:1ರ ಆಧಾರದಲ್ಲಿ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್
ನ್ಯಾಯಾಂಗ, ಸಂವಿಧಾನ, ನಂಬಿಕೆ ಎಂಬುದು ಸತ್ಯ. ಆ ಸತ್ಯವೇ ದೇವರು. ಇಡೀ ದೇಶದ ಮಹಿಳೆಯರಿಗೆ ಸುಪ್ರೀಂ ಕೋರ್ಟ್ನಿಂದ ಜಯ ಸಿಕ್ಕಿದೆ. ಇದು ಕೇವಲ ಶಬರಿಮಲೆ ಪ್ರವೇಶದ ತೀರ್ಪು ಆಗಿರಬಹುದು. ಆದರೆ, ಇಂತಹ ತೀರ್ಪು ಮಹಿಳಾ ಸಮುದಾಯಕ್ಕೆ ನೈತಿಕ ಹಾಗೂ ಆತ್ಮಸ್ಥೈರ್ಯ ತುಂಬುತ್ತದೆ.
ಜಯಮಾಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ
ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಹಿಂದೂ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಎಲ್ಲರನ್ನೂ ಸ್ವೀಕರಿಸುವಂತಾಗಿದೆ. ಅದು ನಿಗದಿತ ಒಂದು ಜಾತಿ ಮತ್ತು ಲಿಂಗದ ಆಸ್ತಿಯಲ್ಲ ಎಂದು ಸಾರಿದಂತಾಗಿದೆ.
ಮೇನಕಾ ಗಾಂಧಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
ವಿಚಾರಣೆ ವೇಳೆ ಹಾಲಿ ಇರುವ ಪದ್ಧತಿ ಮುಂದುವರಿಯಬೇಕೆಂದು ಅರಿಕೆ ಮಾಡಿಕೊಂಡಿದ್ದೆವು. ತೀರ್ಪನ್ನು ಅಧ್ಯಯನ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ.
ಎ.ಪದ್ಮಕುಮಾರ್, ತಿರುವಾಂಕೂರು ದೇವಸ್ವಂ ಬೋರ್ಡ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ