ಕಣ್ಮನ ಸೆಳೆಯುತ್ತಿರುವ ದಸರಾ ಬೊಂಬೆ ಪ್ರದರ್ಶನ
Team Udayavani, Oct 15, 2018, 3:51 PM IST
ಭದ್ರಾವತಿ: ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷವಾಗಿ ಶಕ್ತಿದೇವತೆಯ ದೇವಾಲಯಗಳಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪ್ರತಿನಿತ್ಯ ದೇವಿಗೆ ವಿವಿಧ ಅಲಂಕಾರ ಮಾಡಲಾಗುತ್ತಿದೆ. ಸಂಜೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ಅಲಂಕಾರವನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಅದೇ ರೀತಿ ಹಲವು ಮನೆಗಳಲ್ಲಿ ಸಂಪ್ರದಾಯ ಪೂರ್ವಕವಾಗಿ ದಸರಾ ಗೊಂಬೆಗಳನ್ನು ಇಟ್ಟು ಪೂಜಿಸುತ್ತಿರುವುದನ್ನೂ ಇಲ್ಲಿ ಕಾಣಬಹುದಾಗಿದೆ. ಆ ರೀತಿಯಲ್ಲಿಟ್ಟಿರುವ ಗೊಂಬೆ ಪ್ರದರ್ಶನಗಳಲ್ಲಿ ಹಳೇನಗರದ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿರುವ ಅರ್ಚಕ ರಂಗನಾಥ ಶರ್ಮ ಅವರ ಮನೆಯಲ್ಲಿ ಕೂಡಿಸಿರುವ ವೈವಿಧ್ಯಮಯ ದಸರಾ ಗೊಂಬೆಗಳ ಪ್ರದರ್ಶನ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ.
ದಶಾವತಾರ ಮತ್ತು ಕೈಲಾಸ ದರ್ಶನ: ಪಟ್ಟದ ಗೊಂಬೆಗಳನ್ನು ಎಲ್ಲಕ್ಕಿಂತ ಮೇಲೆ ಪ್ರಥಮವಾಗಿಟ್ಟು ನಂತರ ವಿಷ್ಣುವಿನ ಹತ್ತುಅವತಾರಗಳನ್ನು ನೆನಪಿಸುವ ದಶಾವತಾರದ ಗೊಂಬೆಗಳನ್ನು ಒಂದೆಡೆ ಜೋಡಿಸಿದ್ದರೆ ಮತ್ತೂಂದೆಡೆ ಗಣಪತಿ, ಶಿವ, ಪಾರ್ವತಿ, ನಂದಿ ಮುಂತಾದ ಶಿವನ ಕೈಲಾಸದಲ್ಲಿನ ದೇವತೆಗಳ ಗೊಂಬೆಗಳು, ಷಣ್ಮುಖ ಜನನದ ಗೊಂಬೆಗಳನ್ನು ಸಹ ಜೋಡಿಸಿಡಲಾಗಿದೆ. ಅದೇ ರೀತಿ ವಸುದೇವ ದೇವಕಿಯರಿಗೆ ಸೆರೆಮನೆಯಲ್ಲಿ ಜನಿಸುವ ಶ್ರೀಕೃಷ್ಣನ ಜನನದ ಘಟನೆಗಳನ್ನು ನೆನೆಪಿಸುವ ಗೊಂಬೆಗಳು, ರಾಮಾವತಾರದಲ್ಲಿನ ರಾಮಾಯಣ- ಮಹಾಭಾರತದ ಘಟನಾ ವಳಿಗಳನ್ನು ನೆನಪಿಸುವ ಬೊಂಬೆಗಳು, ನರಸಿಂಹಾವತಾರದ ಗೊಂಬೆಗಳು, ಅಷ್ಟಲಕ್ಷ್ಮೀಯರ ಗೊಂಬೆಗಳನ್ನು ಕ್ರಮಬದ್ಧವಾಗಿ ಜೋಡಿಸಿಡಲಾಗಿದೆ.
ತಿರುಪತಿ ಬ್ರಹ್ಮರಥೋತ್ಸವ: ತಿರುಪತಿಯಲ್ಲಿ 10 ದಿನಗಳ ಕಾಲ ನಡೆಯುವ ಶ್ರೀನಿವಾಸ- ಪದ್ಮಾವತಿಯರ ಬ್ರಹ್ಮ ರಥೋತ್ಸವವನ್ನು ನೆನೆಪಿಸುವ ಗೊಂಬೆಗಳನ್ನು ಜೋಡಿಸಿಟ್ಟಿರುವುದು ಒಂದು ವಿಶೇಷ.
ಮೈಸೂರು ದಸರಾ ಕಲಾಕೃತಿ: ಮೈಸೂರಿನ ಅರಮನೆ, ವಿಜಯದಶಮಿಯ ಮೆರವಣಿಗೆಯ ಮಾರ್ಗ, ದೊಡ್ಡಗಡಿಯಾರದ ವೃತ್ತ, ಜಾನಪದ ಕುಣಿತದ ಗೊಂಬೆಗಳು, ಆನೆ- ಅಂಬಾರಿ ಸೇರಿದಂತೆ ಮೈಸೂರಿನ ದಸರಾ ಮೆರವಣಿಗೆಯನ್ನು ನೆನೆಪಿಸುವ ಯಥಾವತ್ತಾದ ಮೂರ್ತಿಗಳನ್ನು ಜೋಡಿಸಿಡಲಾಗಿದೆ. ಅದೇರೀತಿ ಜೋಗ್ಫಾಲ್ಸ್ ಸೇರಿದಂತೆ ವಿವಿಧ ತರಾವರಿ ಗೊಂಬೆಗಳನ್ನು ಹಾಗೂ ವಿವಿಧ ರೀತಿಯ ಫಲಪುಷ್ಪಗಳ ಮಾದರಿಗಳನ್ನು ಇಡಲಾಗಿದೆ.
ಮಹಿಷಾಸುರ ಸಂಹಾರ: ಮಹಿಷಾಸುರನನ್ನು ಸಂಹಾರ ಮಾಡುತ್ತಿರುವ ಮಹಿಷಾಸುರ ಮರ್ಧಿನಿ ಹಾಗೂ ಕಾಡು ಮನುಷ್ಯರ ಪರಿಸರವನ್ನು ಬಿಂಬಿಸುವ ಗೊಂಬೆಗಳನ್ನೂ ಇಲ್ಲಿ ಕಾಣಬಹುದಾಗಿದೆ.
ಗ್ರಾಮೀಣ ದೃಶ್ಯ: ಕಮ್ಮಾರಿಕೆ, ಕುಲುಮೆ, ಕುಂಬಾರಿಕೆ, ರೈತಾಪಿ ಕೆಲಸ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ವಿವಿಧ ವೃತ್ತಿಗಳನ್ನು ಸಾರುವ ಗೊಂಬೆಗಳನ್ನು ಸಹ ಕಾಣಬಹುದಾಗಿದೆ. ವಿಧಾನಸೌಧ: ಸರ್ಕಾರಿ ಕೆಲಸ ದೇವರ ಕೆಲಸ ಎಂದು ಸಾರುವ ವಿಧಾನಸೌಧದ ಮಾದರಿಯನ್ನು
ಸಹ ಇಲ್ಲಿ ಕಾಣಬಹುದಾಗಿರುತ್ತದೆ.
ಚರ್ಚ್ ಮತ್ತು ಮಸೀದಿ: ಇದೆಲ್ಲದರ ಜೊತೆಗೆ ಕ್ರಿಸ್ಮಸ್ ಹಬ್ಬದ ಕ್ರಿಸ್ಮಸ್ ಟ್ರೀ, ಸಾಂತಾಕ್ಲಾಸ್ ಬೊಂಬೆ ಸೇರಿದಂತೆ ಕ್ರಿಸ್ಮಸ್ ಹಬ್ಬವನ್ನು ನೆನಪಿಸುವ ಬೊಂಬೆಗಳನ್ನೂ, ಮುಸ್ಲಿಂ ಜನಾಂಗದ ಮಸೀದಿ ಸೇರಿದಂತೆ ವಿವಿಧ ಧರ್ಮಗಳ ಗೊಂಬೆಗಳನ್ನು ಇಡುವ ಮೂಲಕ ಕವಿ ಕುವೆಂಪು ವಿರಚಿತ ನಾಡಗೀತೆಯಲ್ಲಿ ಬರುವ ಸರ್ವ ಜನಾಂಗದ ಶಾತಿಯ ತೋಟ ರಸಿಕರ ಕಣ್ಗಳ ಸೆಳೆಯುವ ನೋಟ, ಹಿಂದೂ- ಕ್ರೈಸ್ತ- ಮುಸಲ್ಮಾನ ಪಾರಸಿಕ ಜೈನರುದ್ಯಾನ ಎಂಬ ನಾಡಗೀತೆಯ ಸಾಲನ್ನು ಕಣ್ಮುಂದೆ ತಂದು ನಿಲ್ಲಿಸುವ ರೀತಿಯಲ್ಲಿ ದಸರಾ ಬೊಂಬೆಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿರುವುದು ವಿಶೇಷ.
ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್: ಕ್ರೀಡೆಗಳಾದ ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಡುತ್ತಿರುವ ದೃಶ್ಯಾವಳಿಯ ಬೊಂಬೆಗಳನ್ನೂ ಸಹ ಇಲ್ಲಿ ಪ್ರದರ್ಶಿಸಲಾಗಿದೆ. ಇದೆಲ್ಲದರ ಜೊತೆಗೆ ಧಾರ್ಮಿಕ ಗ್ರಂಥಗಳಾದ ರಾಮಾಯಣ, ಮಹಾಭಾರತ, ವಿವಿಧ ಆಯುಧಗಳನ್ನೂ ಸಹ ಆಯುಧ ಪೂಜೆ ಮತ್ತು ಶಾರದಾ ಪೂಜೆಯಂದು ಇರಿಸುವ ಮೂಲಕ ಕನ್ನಡನಾಡ ಪರಂಪರಾಗತ ದಸರಾ ಬೊಂಬೆ ಪೂಜೆ ಪ್ರದರ್ಶನವನ್ನು ಇಲ್ಲಿ ನಡೆಸಿಕೊಂಡು ಬರುತ್ತಿರುವುದು ಹೆಚ್ಚಿನ ಜನರ ಶ್ಲಾಘನೆಗೆ ಪಾತ್ರವಾಗಿದೆ.
ಈ ಗೊಂಬೆಗಳ ಸಂಗ್ರಹ ಮತ್ತು ಅದನ್ನು ಆಸಕ್ತಿಯಿಂದ ಜೋಡಿಸುವ ಕಾರ್ಯವನ್ನು ಕುಟುಂಬದ ಎಲ್ಲರ ಸಹಕಾರದೊಂದಿಗೆ ಸಹಾಯಕ ಅರ್ಚಕ ಶ್ರೀನಿವಾಸ್ ಅವರ ಪತ್ನಿ ಮೈಥಿಲಿ ಮಾಡುತ್ತಾ ಬರುತ್ತಿದ್ದಾರೆ. ದಸರಾ ಹಬ್ಬದ ಹತ್ತು ದಿನಗಳು ಮುಗಿದ ಮೇಲೂಸಹ ಈ ಗೊಂಬೆ ಪ್ರದರ್ಶನವನ್ನು 4-5 ದಿನಗಳ ಕಾಲ ಜನರ ವೀಕ್ಷಣೆಗಾಗಿ ಅವಕಾಶ ನೀಡುವ ಪದ್ಧತಿಯನ್ನು ಇಲ್ಲಿ ಮಾಡಿಕೊಂಡು ಬರಲಾಗಿದೆ. ಸುಮಾರು 3 ಸಾವಿರಕ್ಕೂ ಅಧಿಕ ಬೊಂಬೆಗಳನ್ನು ಇಲ್ಲಿ ಕಾಣಬಹುದಾಗಿದೆ.
ಕೆ.ಎಸ್. ಸು ಧೀಂದ್ರ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು
BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್