ಕೋಟ: ನಿಯಂತ್ರಣ ತಪ್ಪಿ ಟ್ಯಾಂಕರ್ಗೆ ಢಿಕ್ಕಿಯಾದ ಆ್ಯಂಬುಲೆನ್ಸ್
Team Udayavani, Oct 28, 2018, 10:12 AM IST
ಕೋಟ: ಕಾರವಾರದಿಂದ ರೋಗಿಯೊಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಬುಲೆಟ್ ಟ್ಯಾಂಕರ್ಗೆ ಢಿಕ್ಕಿ ಹೊಡೆದು ರೋಗಿ ಸಹಿತ ಮೂವರು
ಮೃತಪಟ್ಟು, ಮತ್ತೆ ಮೂವರು ತೀವ್ರ ಗಾಯಗೊಂಡ ಘಟನೆ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಸಮೀಪ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಕಾರವಾರ ಸಮೀಪ ಅಮದಲ್ಲಿ ನಿವಾಸಿ ಉಲ್ಲಾಸ್ ಗಣಪತಿ ತಾಳೇಕರ್ (58), ಶೈಲೇಶ್ ತಾಳೇಕರ್ (42), ಅಶೋಕ್ ಬಾದ್ಕರ್ (38) ಮೃತರು. ಸರಿತಾ (ಸಾಧನಾ, 35) ಅರವಿಂದ ಗಣಪತಿ ತಾಳೇಕರ್ (44) ಹಾಗೂ ಆ್ಯಂಬುಲೆನ್ಸ್ ಚಾಲಕ ರಾಘವೇಂದ್ರ (28) ಗಂಭೀರವಾಗಿ ಗಾಯಗೊಂಡಿದ್ದಾರೆ. ಅರವಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಹಾಗೂ ಇಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದೇ ಕುಟುಂಬದವರು
ಮೃತ ಉಲ್ಲಾಸ್ ಹಾಗೂ ಶೈಲೇಶ್ ಭಾವಂದಿರಾಗಿದ್ದು, ಅಶೋಕ್ ಇವರ ಸಹೋದರ ಸಂಬಂಧಿ. ಗಾಯಾಳು ಸರಿತಾ ಅವರು ಮೃತ ಉಲ್ಲಾಸ್ ಅವರ ಪತ್ನಿ. ಅರವಿಂದ್ ಗಣಪತಿ ತಾಳೇಕರ್ ಕೂಡ ಸಂಬಂಧಿಯಾಗಿದ್ದಾರೆ.
ಉಲ್ಲಾಸ್ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಪತ್ನಿ ಸರಿತಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಅಶೋಕ್ ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಅವಿವಾಹಿತ ಕೂಲಿ ಕಾರ್ಮಿಕ ಶೈಲೇಶ್ ಅವರು ತಂದೆ, ತಾಯಿಯನ್ನು ಅಗಲಿದ್ದಾರೆ.
ಆಸ್ಪತ್ರೆಗೆ ಕರೆತರುತ್ತಿದ್ದಾಗ ಘಟನೆ
ಉಲ್ಲಾಸ್ ತಾಳೇಕರ್ ಜಾಂಡಿಸ್ ಹಾಗೂ ಜ್ವರದಿಂದ ಬಳಲುತ್ತಿದ್ದು, ಕಾರವಾರದ ಸಮೀಪ ಪಿಪಳಿ ಆಸ್ಪತ್ರೆ
ಯಲ್ಲಿ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕಾಯಿಲೆ ಉಲ್ಬಣಗೊಂಡ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಶುಕ್ರವಾರ ಸಂಜೆ ಸಲಹೆ ನೀಡಿದ್ದರು. ಅದರಂತೆ ಕಾರವಾರದ ಖಾಸಗಿ ಆ್ಯಂಬುಲೆನ್ಸ್ನಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಪಿಪಳಿ ಆಸ್ಪತ್ರೆಯಿಂದ ಮಂಗಳೂರಿನ ಕಡೆಗೆ ಪ್ರಯಾಣಿಸಿದ್ದರು.
ಮುಗಿಲು ಮುಟ್ಟಿದ ರೋದನ
ಗಾಯಗೊಂಡವರಲ್ಲಿ ಸರಿತಾ ಪ್ರಜ್ಞೆ ಹೊಂದಿದ್ದು, ತಮ್ಮನ್ನು ಹೊರತೆಗೆಯಲು ಶ್ರಮಿಸುತ್ತಿದ್ದವರಲ್ಲಿ ಕೈಸನ್ನೆಯ
ಮೂಲಕ ಕಾಪಾಡುವಂತೆ ಅಂಗಲಾಚುತ್ತಿದ್ದರು, ಆಸ್ಪತ್ರೆಗೆ ಸಾಗಿಸುವಾಗ ಆಕೆಯ ರೋದನ ಮುಗಿಲು ಮುಟ್ಟಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನೆರವಾದ ಮೊಬೈಲ್
ಅಪಘಾತ ಸ್ಥಳದಲ್ಲಿ ಗಾಯಾಳುಗಳಲ್ಲೊಬ್ಬರ ಮೊಬೈಲ್ ದೊರೆತಿತ್ತು. ಆದರೆ ಮೊಬೈಲ್ ಲಾಕ್ ಮಾಡಿದ್ದ ಕಾರಣ ಕರೆ ಮಾಡಲು ಸಾಧ್ಯವಾಗಲಿಲ್ಲ. ಸ್ವಲ್ಪ ಹೊತ್ತಿನ ಅನಂತರ ಅದಕ್ಕೆ ಕರೆಯೊಂದು ಬಂದಿದ್ದು, ಆಗ ಅಪಘಾತದ ಮಾಹಿತಿ ನೀಡಲಾಯಿತು, ಅಪಘಾತಕ್ಕೀಡಾದ ಆ್ಯಂಬುಲೆನ್ಸ್ ಮಾಲಕರಿಗೂ ವಿಷಯ ತಿಳಿಸಲಾಯಿತು. ಕುಟುಂಬಸ್ಥರು ಬೆಳಗಿನ ಜಾವ ಮೂರು ಗಂಟೆಗೆ ಕಾರವಾರದಿಂದ ಕುಂದಾಪುರ ಕಡೆ ಪ್ರಯಾಣ ಬೆಳೆಸಿದರು.
ಕುಂದಾಪುರ: ಶವಪರೀಕ್ಷೆ
ಮೃತದೇಹಗಳನ್ನು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿರಿಸಿ, ಬೆಳಗ್ಗೆ ಶವಪರೀಕ್ಷೆ ನಡೆಸಿ ಸಂಬಂಧಿಗಳಿಗೆ ಹಸ್ತಾಂತರಿಸಲಾಯಿತು. ಕಾರವಾರದಿಂದ ಹಲವರು ಆಗಮಿಸಿದ್ದರು. ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದು, ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೀಕರ ಅಪಘಾತ
ಶುಕ್ರವಾರ ತಡರಾತ್ರಿ 12.50ರ ಸುಮಾರಿಗೆ ಕೋಟ ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅನಂತರ ಎದುರಿನ ರಸ್ತೆಗಿಳಿದು ಬುಲೆಟ್ ಟ್ಯಾಂಕರ್ಗೆ ಅಪ್ಪಳಿಸಿ ಹೆದ್ದಾರಿಯಲ್ಲಿ ಎರಡು-ಮೂರು ಪಲ್ಟಿ ಹೊಡೆದಿದೆ. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ಸಂಪೂರ್ಣ ನಜ್ಜುಗುಜ್ಜಾಗಿ ಒಳಗಡೆ ಇದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂದರ್ಭ ಗೋವಾದಿಂದ ಮಂಗಳೂರಿನ ಕಡೆಗೆ ಬರುತ್ತಿದ್ದ ಟ್ರಾವೆಲರ್ ವಾಹನದಲ್ಲಿದ್ದವರು ಅಪಘಾತವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬುಲೆಟ್ ಟ್ಯಾಂಕರ್ಗೆ ಹೆಚ್ಚಿನ ಹಾನಿಯಾಗಿಲ್ಲ.
ಒಂದು ತಾಸು ಕಾರ್ಯಾಚರಣೆ
ಅಪಘಾತದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಹಲವು ಮಂದಿ ಸ್ಥಳದಲ್ಲಿ ಸೇರಿ ಗಾಯಾಳುಗಳನ್ನು ಹೊರತೆಗೆಯಲು ಶ್ರಮಿಸುತ್ತಿದ್ದರು. ಜೀವನ್ಮಿತ್ರ ಆ್ಯಂಬುಲೆನ್ಸ್ ಚಾಲಕ ನಾಗರಾಜ್ ಪುತ್ರನ್, ಸ್ಥಳೀಯರಾದ ವಸಂತ್ ಸುವರ್ಣ, ಗಣಪತಿ ಶ್ರೀಯಾನ್, ಸತೀಶ್ ಕುಂದರ್, ನಿತ್ಯಾನಂದ ಪೈ, ವಾಸುದೇವ ಪೈ ಹಾಗೂ ತೆಕ್ಕಟ್ಟೆ ಫ್ರೆಂಡ್ಸ್ನ ಆ್ಯಂಬುಲೆನ್ಸ್ನ ಪ್ರಕಾಶ್ ಶೆಟ್ಟಿ, ದಯಾನಂದ, ಸಂತೋಷ ಹಾಗೂ ಟೋಲ್ಗೇಟ್ನ ಸಿಬಂದಿ, 108 ವಾಹನದ ಸಿಬಂದಿ, ವಾಹನಗಳ ಚಾಲಕರು, ಕೋಟ ಪೊಲೀಸ್ ಸಿಬಂದಿ ರಾಘವೇಂದ್ರ, ಸುರೇಶ ಶೆಟ್ಟಿ, ಸುರೇಶ ಹೆಮ್ಮಾಡಿ ಹಾಗೂ ಸ್ಥಳೀಯರ ಸಹಿತ 60ಕ್ಕೂ ಹೆಚ್ಚು ಮಂದಿ ಪಲ್ಟಿಯಾಗಿದ್ದ ಆ್ಯಂಬುಲೆನ್ಸ್ ಮೇಲೆತ್ತಿದರು. ಸತತ ಒಂದು ತಾಸು ಕಾರ್ಯಾಚರಣೆ ನಡೆಸಿ ನುಜ್ಜುಗುಜ್ಜಾಗಿದ್ದ ಆ್ಯಂಬುಲೆನ್ಸ್ನಿಂದ ಗಂಭೀರವಾಗಿ ಗಾಯಗೊಂಡಿದ್ದವರನ್ನು ಹೊರತೆಗೆಯಲಾಯಿತು. ಆದರೆ ಅದಾಗಲೇ ಮೂವರು ಮೃತಪಟ್ಟಿದ್ದರು. ಅನಂತರ ಗಾಯಗೊಂಡವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ