ಇಂದು ರಕ್ಷಣಾ ಸಚಿವೆ ಧರ್ಮಸ್ಥಳಕ್ಕೆ
Team Udayavani, Oct 29, 2018, 11:25 AM IST
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸೋಮವಾರ ನಡೆಯಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಗುಂಪು ವಿಮಾ ಯೋಜನೆ “ಪ್ರಗತಿ ರಕ್ಷಾ ಕವಚ’ದ ಅನಾವರಣ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಪರಿಸರದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಝಡ್ ಪ್ಲಸ್ ಭದ್ರತೆ ಹೊಂದಿರುವ ಕೇಂದ್ರ ರಕ್ಷಣಾ ಸಚಿವೆ ರಸ್ತೆಯ ಮೂಲಕ ಆಗಮಿಸುವುದಾದರೆ ಝೀರೋ ಟ್ರಾಫಿಕ್ ರೂಪಿಸಲಾಗುತ್ತದೆ. ಸಚಿವರ ವಾಹನದ ಮುಂದೆ ಯಾವುದೇ ವಾಹನಕ್ಕೆ ಅವಕಾಶವಿರುವುದಿಲ್ಲ. ಜತೆಗೆ ಹಿಂದಿನಿಂದ 1 ಕಿ.ಮೀ. ದೂರದವರೆಗೆ ಯಾವುದೇ ವಾಹನಗಳು ಸಂಚರಿಸುವಂತಿಲ್ಲ.
ಸಚಿವರು ಮಂಗಳೂರಿನಿಂದ ರಸ್ತೆಯ ಮೂಲಕ ಧರ್ಮಸ್ಥಳಕ್ಕೆ ಆಗಮಿಸುವುದು ನಿಗದಿಯಾಗಿತ್ತು. ಆದರೆ ಟ್ರಾಫಿಕ್ ನಿಯಂತ್ರಣ ಹಾಗೂ ರಸ್ತೆಗಳು ಹದಗೆಟ್ಟಿರುವ ಕಾರಣ ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣಕ್ಕೆ ಏರ್ಪಾಡು ಮಾಡಲಾಗಿದೆ.
ಸಂಜೆ 4ಕ್ಕೆ ಧರ್ಮಸ್ಥಳದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಉಳಿದು ಕೊಳ್ಳಲಿದ್ದಾರೆ ಎಂದು ಸಚಿವರ ಕಚೇರಿಯ ವೇಳಾ ಪಟ್ಟಿಯಲ್ಲಿದ್ದರೂ ಸಚಿವರು ಸಂಜೆ 5.15ಕ್ಕೆ ಹೊರಟು ರಾತ್ರಿಯೇ ವಿಮಾನದ ಮೂಲಕ ಹೊಸದಿಲ್ಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದೆ.