“ಮನೆ’ಗಿಳಿದ ಪ್ರಚಾರ
Team Udayavani, Oct 31, 2018, 6:00 AM IST
ಉಪ ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಾಕ್ಸಮರ ವೈಯಕ್ತಿಕ ನಿಂದನೆ ಮಿತಿ ಮೀರಿದೆ. ಎರಡು ದಿನಗಳಲ್ಲಿ ಬಹಿರಂಗ ಪ್ರಚಾರ ಮುಗಿಸಿ ಮನೆ ಮನೆ ಪ್ರಚಾರ ಮಾಡಬೇಕಾದ ರಾಜಕಾರಣಿಗಳು, ಅದು ಬಿಟ್ಟು ನಾಯಕರ ಮನೆಗಿಳಿದು ಅಗ್ಗದ ಆರೋಪಕ್ಕೆ ಮುಂದಾಗಿದ್ದಾರೆ. ಮಂಗಳವಾರ ಯಾರೆಲ್ಲ ಏನೇನು ಹೇಳಿಕೊಂಡರು ಎನ್ನುವುದರ ಆಯ್ದ ಹೇಳಿಕೆಗಳು ಇಲ್ಲಿವೆ.
ನನ್ನನ್ನು ಜೈಲಿಗೆ ಕಳುಹಿಸಿ ನನ್ನ ಮಕ್ಕಳಿಂದ ದೂರ ಮಾಡಿದ್ದಕ್ಕಾಗಿಯೇ ದೇವರು ಸಿದ್ದರಾಮಯ್ಯ ಅವರನ್ನು ಅವರ ಮಗನಿಂದ ದೂರ ಮಾಡಿದ್ದಾನೆ. ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಸುಳ್ಳು ಆರೋಪ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕೇವಲ ಅಧಿಕಾರದ ಆಸೆಗಾಗಿ ಬೆಂಗಳೂರಿನಿಂದ ಪಾದಯಾತ್ರೆ ಮಾಡಿದ್ದರು. ಇದರಿಂದ ನನ್ನನ್ನು ಅನ್ಯಾಯವಾಗಿ ಜೈಲಿಗೆ ಕಳುಹಿಸಿ ನನ್ನ ಕುಟುಂಬ ಮತ್ತು ಮಕ್ಕಳಿಂದ ನಾಲ್ಕೂವರೆ ವರ್ಷಗಳ ಕಾಲ ದೂರ ಮಾಡಿದ್ದರು.
– ಜನಾರ್ದನ ರೆಡ್ಡಿ, ಮಾಜಿ ಸಚಿವ
ನನ್ನ ಮಗನ ಸಾವು ನನಗೆ ದೇವರು ಕೊಟ್ಟ ಶಿಕ್ಷೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ಬೇಡಿಕೊಳ್ಳುತ್ತೇನೆ.
– ಸಿದ್ದರಾಮಯ್ಯ, ಮಾಜಿ ಸಿಎಂ
ಸಿದ್ದರಾಮಯ್ಯ ಮಗನ ಸಾವಿನ ಬಗ್ಗೆ ಮಾತನಾಡಿರುವ ಜನಾರ್ದನ ರೆಡ್ಡಿಯವರು ತಮ್ಮ ಕೊಳಕು ಮನಸ್ಸನ್ನು ಪ್ರದರ್ಶಿಸಿದ್ದಾರೆ. ಯಾವುದೇ ವ್ಯಕ್ತಿ ಮತ್ತೂಬ್ಬರ ಸಾವನ್ನು ಬಯಸುವ ಮೂಲಕ ರಾಜಕೀಯ ನಡೆಸುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂಥಹದ್ದಲ್ಲ. ಯಡಿಯೂರಪ್ಪನವರಿಗೆ ಆತ್ಮಸಾಕ್ಷಿ ಇಲ್ಲ. ಬಿಜೆಪಿಯನ್ನು ಎಂದೂ ಬೆಂಬಲಿಸುವುದಿಲ್ಲ, ಮುಗಿಸುತ್ತೇನೆ ಅಂದವರಿಂದ ನಮ್ಮ ನಾಯಕರು ಪಾಠ ಕಲಿಯಬೇಕಾಗಿಲ್ಲ.
– ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಪದೇ ಪದೆ ಬಂಗಾರಪ್ಪ ಕುಟುಂಬದ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಎಚ್ಚರದಿಂದ ಇರಬೇಕು. ಇಂತಹ ಆರೋಪಗಳು “ಮಿ ಟೂ’ ರೂಪದಲ್ಲಿ ಅವರನ್ನು ಕಾಡಬಹುದು. ಅವರೂ ಮಿ ಟೂ ಅಭಿಯಾನದಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ರಾಧಿ ಕಾ ಅವರಿಗೇಕೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ? ಒಂದು ವೇಳೆ, ಕುಟುಂಬದ ಭಾಗ ಎಂದು ಪರಿಗಣಿಸಿದ್ದಲ್ಲಿ ರಾಮನಗರ ಪ್ರಚಾರಕ್ಕೆ ಕರೆದುಕೊಂಡು ಹೋಗಬೇಕಿತ್ತು. ರಾಧಿ ಕಾ ಅವರಿಗೆ ಅವಕಾಶ ನೀಡಿಲ್ಲವೆಂದರೆ ಇದುವರೆಗೆ ಅವರನ್ನು ಕುಟುಂಬದ ಸದಸ್ಯರಾಗಿ ಸ್ವೀಕರಿಸಿಲ್ಲವೇ?
– ಕುಮಾರ್ ಬಂಗಾರಪ್ಪ, ಶಾಸಕ
ಕುಮಾರ್ ಬಂಗಾರಪ್ಪ ಅವರ ಹೇಳಿಕೆ ವೈಯಕ್ತಿಕ ವಿಚಾರ. ಅಂತಹ ಕೀಳು ಅಭಿರುಚಿಯ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ. ನಾನೇನೂ ತಪ್ಪು ಮಾಡಿಲ್ಲ. ಆದ್ದರಿಂದ ನಾನೇಕೆ ಹೆದರಲಿ? ಇಂತಹ ಪ್ರಶ್ನೆಗಳ ಬದಲಿಗೆ ರಾಜ್ಯದ ಅಭಿವೃದ್ಧಿಯ ಕುರಿತು ಕೇಳಿದರೆ ಉತ್ತರಿಸುವೆ.
– ಕುಮಾರಸ್ವಾಮಿ, ಮುಖ್ಯಮಂತ್ರಿ
“ಮಿ ಟೂ’ ಬಗ್ಗೆ ಬಿಜೆಪಿಯಲ್ಲಿರುವವರೇ ಚೆನ್ನಾಗಿ ಹೇಳಬಲ್ಲರು. ಮುತ್ತು ಕೊಟ್ಟು ಸುದ್ದಿಯಾದ ರೇಣುಕಾಚಾರ್ಯ, ಸರಸ ಸಲ್ಲಾಪದಿಂದ ಸುದ್ದಿಯಾದ ಹಾಲಪ್ಪ ಅವರೇ “ಮಿ ಟೂ’ ಬಗ್ಗೆ ಸರಿಯಾಗಿ ವಿವರಿಸಲಿ.
– ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಮುಖಂಡ