ಮಂದಿರಕ್ಕೆ ಅಪರ್ಣಾ ಆಗ್ರಹ
Team Udayavani, Nov 2, 2018, 8:35 AM IST
ಹೊಸದಿಲ್ಲಿ: ರಾಮಮಂದಿರ ನಿರ್ಮಾಣದ ಕೂಗಿಗೆ ಹೊಸ ಸೇರ್ಪಡೆಯೆಂಬಂತೆ, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಅವರೂ ಮಂದಿರ ನಿರ್ಮಾಣಕ್ಕೆ ಧ್ವನಿಯೆತ್ತಿದ್ದಾರೆ. ಗುರುವಾರ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತಲೇಬೇಕು ಎಂದು ಹೇಳಿದ್ದಾರೆ. ಜತೆಗೆ, ಸುಪ್ರೀಂಕೋರ್ಟ್ ಮೇಲೆ ನಂಬಿಕೆಯಿದೆ. ತೀರ್ಪು ಬರುವವರೆಗೆ ಕಾಯೋಣ ಎಂದೂ ತಿಳಿಸಿದ್ದಾರೆ. ರಾಮಮಂದಿರ ವಿಚಾರದಲ್ಲಿ ಬಿಜೆಪಿಯ ಜೊತೆಗಿದ್ದೀರಾ ಎಂಬ ಪ್ರಶ್ನೆಗೆ ಅಪರ್ಣಾ, ನಾನು ಬಿಜೆಪಿಯ ಜತೆಗಿಲ್ಲ, ಶ್ರೀರಾಮನ ಜತೆಗಿದ್ದೇನೆ ಎಂದಿದ್ದಾರೆ. ಮುಲಾಯಂರ ಕಿರಿಯ ಪುತ್ರ ಪ್ರತೀಕ್ರ ಪತ್ನಿಯಾಗಿರುವ ಅಪರ್ಣಾ ಈ ಹಿಂದೆ ಸಿಎಂ ಯೋಗಿ ಆದಿತ್ಯನಾಥ್ರನ್ನು ಹಲವು ಬಾರಿ ಭೇಟಿಯಾಗುವ ಮೂಲಕ ಕುಟುಂಬದೊಳಗೆ ಹಾಗೂ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು.
ಕಾಂಗ್ರೆಸ್ಗೆ ಪ್ರಶ್ನೆ: ಈ ನಡುವೆ, ರಾಮಮಂದಿರ ಯಾವಾಗ ನಿರ್ಮಿಸುತ್ತೀರಿ ಎಂದು ಪದೇ ಪದೆ ಪ್ರಶ್ನಿಸುವ ಕಾಂಗ್ರೆಸ್, ಎಸ್ಪಿ, ಸಿಪಿಎಂ, ಬಿಎಸ್ಪಿಗೆ ಬಿಜೆಪಿ ಸಂಸದ ರಾಕೇಶ್ ಸಿಂಗ್ ಪ್ರಶ್ನೆಯೊಂದನ್ನು ಹಾಕಿದ್ದು, ರಾಮಮಂದಿರ ಕುರಿತು ನಾನು ಖಾಸಗಿ ಮಸೂದೆ ಮಂಡಿಸಿದರೆ, ಅದಕ್ಕೆ ನೀವು ಬೆಂಬಲ ಕೊಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ, ಬಿಜೆಪಿಗೆ ಚುನಾವಣೆ ಸಮೀಪಿಸಿದಾಗ ಮಾತ್ರ ರಾಮಮಂದಿರ ನೆನಪಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ವ್ಯಂಗ್ಯವಾಡಿದ್ದಾರೆ. ಇನ್ನೊಂದೆಡೆ, ಬಿಜೆಪಿಯೇನಾದರೂ ಮಂದಿರದ ವಿಚಾರದಲ್ಲೂ ಸುಳ್ಳು ಹೇಳಿದ್ದೇ ಆದರೆ, ಅದರ ಸಂಖ್ಯಾಬಲ ಲೋಕಸಭೆ ಚುನಾವಣೆಯಲ್ಲಿ 280ರಿಂದ 2ಕ್ಕಿಳಿಯಲಿದೆ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಕುಟುಕಿದ್ದಾರೆ.