ಸುಳ್ಯ: ಚೈತ್ರಾ ತಂಡಕ್ಕೆ ನ್ಯಾಯಾಧೀಶರಿಂದ ಹಿತವಚನ
Team Udayavani, Nov 6, 2018, 9:11 AM IST
ಸುಳ್ಯ: ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಅ.24ರಂದು ನಡೆದ ಘರ್ಷಣೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾ ಕುಂದಾಪುರ ಹಾಗೂ ಆಕೆಯ ಆರು ಮಂದಿ ಸಹಚರರು ಸೋಮವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರ ನ್ಯಾಯಾಂಗ ಬಂಧನವನ್ನು ನ.19ರ ತನಕ ವಿಸ್ತರಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು.
ಅನಾ ರೋಗ್ಯ ಕಾರಣ ನೀಡಿ ನ.3ರಂದು ಚೈತ್ರಾ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅದಕ್ಕೆ ಅಸ ಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಧೀಶರು, ಗೈರು ಹಾಜರಿಗೆ ಕಾರಣ ಕೇಳಿದ್ದರು. ಅಲ್ಲದೆ ಜೈಲು ಸೂಪ ರಿಂಟೆಂಡೆಂಟ್ ಹಾಗೂ ಜಿಲ್ಲಾ ವೈದ್ಯಾಧಿಕಾರಿ ನ.5ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿ ಆದೇಶಿಸಿದ್ದರು. ಅಗತ್ಯ ಬಿದ್ದರೆ ಚೈತ್ರಾಳನ್ನು ಸರಕಾರಿ ಆ್ಯಂಬುಲೆನ್ಸ್ನಲ್ಲಿ ಕರೆತರುವಂತೆ ಹೇಳಿದ್ದರು.
ಸೋಮವಾರ ಬೆಳಗ್ಗೆ ಚೈತ್ರಾ ಬಾಡಿಗೆ ವಾಹನದಲ್ಲಿ ನ್ಯಾಯಾಲಯಕ್ಕೆ ಬಂದಿದ್ದರು. ಜೈಲು ಸೂಪರಿಂಟೆಂಡೆಂಟ್ ಮತ್ತು ವೈದ್ಯಾಧಿಕಾರಿಗಳನ್ನು ಕಲಾಪ ಆರಂಭಕ್ಕೆ ಮೊದಲೇ ಪ್ರತ್ಯೇಕ ಕೊಠಡಿಗೆ ಕರೆಸಿಕೊಂಡ ನ್ಯಾಯಾಧೀಶರು ಅರ್ಧ ತಾಸು ವಿಚಾರಣೆ ನಡೆಸಿದರು.
ಬಳಿಕ ಹಾಲ್ಗೆ ಆಗಮಿಸಿದ ನ್ಯಾಯಾಧೀಶರು ಚೈತ್ರಾಳ ಆರೋಗ್ಯ ವಿಚಾರಿಸಿದರು. ಈ ವೇಳೆ ಆಕೆಗೆ ಬುದ್ಧಿವಾದ ಹೇಳಿದ ನ್ಯಾಯಾಧೀಶರು, “ನಿಮ್ಮ ನಾಟಕ ಎಲ್ಲ ಬೇಡ. ಉತ್ತರ ಕನ್ನಡದ ನಾಟಕ ಯಕ್ಷಗಾನ, ತಾಳಮದ್ದಳೆ ಎಲ್ಲವನ್ನು ನಾನು ಕಂಡಿದ್ದೇನೆ. ನ್ಯಾಯಾ ಲಯಕ್ಕೆ ಹಾಜರಾಗುವ ಮೊದಲ ದಿನ ಆರೋಗ್ಯವಾಗಿಯೇ ಇದ್ದ ನಿಮಗೆ ತತ್ಕ್ಷಣ ಏನಾಯಿತು? ನಿಯತ್ತಿನಿಂದ ಜಾಮೀನು ಪಡೆಯಲು ಪ್ರಯತ್ನಿಸಿ. ಬದಲಿ ಸುಳ್ಳು ಹೇಳಿ ಆಸ್ಪತ್ರೆ ಸೇರಿಕೊಂಡು ತಪ್ಪಿಸಿಕೊಳ್ಳಬೇಡಿ’ ಎಂದರು.
ಪುತ್ತೂರು ಕೋರ್ಟ ನಲ್ಲಿ ಜಾಮೀನು
ಪುತ್ತೂರು: ಚೈತ್ರಾ ಸಹಿತ ಆಕೆಯ 7 ಮಂದಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಅ. 5ರಂದು ಜಾಮೀನು ಮಂಜೂರು ಮಾಡಿದೆ. ಸುಬ್ರಹ್ಮಣ್ಯದಲ್ಲಿ ನಡೆ ದಿದ್ದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಇದರ ನಡುವೆ ಜಾಮೀನಿಗಾಗಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಚೈತ್ರಾ ಹಾಗೂ ಸಹಚರರಾದ ಸುದಿನ್, ವಿನಯ್, ಮಣಿಕಂಠ, ನಿಖೀಲ್, ಹರೀಶ್ ಯಾನೆ ಶ್ರೀಕಾಂತ್, ಹರೀಶ್ ಖಾರ್ವಿ ಅವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ನೀಡಿ ತೀರ್ಪಿತ್ತಿದೆ. ಇದರ ಪ್ರಕಾರ 50 ಸಾ. ರೂ. ಹಾಗೂ ಓರ್ವ ವ್ಯಕ್ತಿಯನ್ನು ಆಧಾರವಾಗಿ ನೀಡಬೇಕಿದೆ. ಪುತ್ತೂರು ನ್ಯಾಯಾಲಯ ವಿಧಿಸಿರುವ ಷರತ್ತು ಹಾಗೂ ಆದೇಶದ ಪ್ರತಿಯನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕವಷ್ಟೇ ಬಿಡುಗಡೆ ಹೊಂದಲು ಸಾಧ್ಯವಾಗುತ್ತದೆ.