ಅವಹೇಳನಕಾರಿ Post; ಮಂಗಳೂರು ಮುಸ್ಲಿಂ Facebook ಪೇಜ್ ವಿರುದ್ಧ ಕೇಸ್
Team Udayavani, Nov 12, 2018, 6:34 PM IST
ಮಂಗಳೂರು:ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನಕ್ಕೆ ರಾಜ್ಯ ಸೇರಿದಂತೆ ರಾಷ್ಟ್ರಮಟ್ಟದ ರಾಜಕಾರಣಿಗಳು, ಕಾಂಗ್ರೆಸ್ ಮುಖಂಡರು ಕಂಬನಿ ಮಿಡಿದಿದ್ದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿನ ಮಂಗಳೂರು ಮುಸ್ಲಿಮ್ಸ್ ಪೇಜ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿ ವಿಕೃತಿ ಮೆರೆದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಏತನ್ಮಧ್ಯೆ ಮಂಗಳೂರು ಮುಸ್ಲಿಮ್ಸ್ ಫೇಸ್ ಬುಕ್ ಪೇಜ್ ವಿರುದ್ಧ ಪೊಲೀಸರು ಸ್ವಯಂ ಆಗಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಫೇಸ್ ಬುಕ್ ನಲ್ಲಿ ಮಂಗಳೂರು ಮುಸ್ಲಿಮ್ಸ್ ಪೇಜ್ ನಲ್ಲಿ ಅನಂತ ಕುಮಾರ್ ಅವರ ನಿಧನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ. ಜಾತಿ ರಾಜಕಾರಣ, ಕುತಂತ್ರಿ ಬ್ರಾಹ್ಮಣ ಅನಂತಕುಮಾರ್ ಮೇಲೆ ಹೋಗಿಯೂ ಜಾತಿ ವಿಷ ಬೀಜ ಬಿತ್ತಬೇಡ ಎಂಬುದಾಗಿ ಬರೆಯಲಾಗಿದೆ. ಅಲ್ಲದೇ ಅನಂತ್ ಕುಮಾರ್ ಅವರ ಫೋಟೋ ಹಾಕಿ ಅದರ ಮೇಲೆ, ಜಾತಿ ಜಾತಿ ರಾಮ ರಾಮ ಅನ್ನುತ್ತಲೇ ಹೊಗೆ ಹಾಕಿಸಿಕೊಂಡ ಕೋಮುವಾದಿ ಅನಂತ ಕುಮಾರ್ ದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಿ ಬರಬೇಡ ಎಂದು ಬರೆದುಕೊಳ್ಳುವ ಮೂಲಕ ತಮ್ಮ ವಿಕೃತ ಮನಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ಅನಂತಕುಮಾರ್ ಅವರ ಸಾವಿನ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಐಟಿ ಕಾಯ್ದೆಯಡಿಯೂ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.