ಹೊಸಂಗಡಿ: ಗಾಯಗೊಂಡ ಕಡವೆಯ ರಕ್ಷಣೆ
Team Udayavani, Nov 14, 2018, 2:35 AM IST
ಕುಂದಾಪುರ: ಯಾವುದೋ ವಾಹನ ಢಿಕ್ಕಿಯಾಗಿ ಗಂಭೀರ ಗಾಯಗೊಂಡು, ಚರಂಡಿಯಲ್ಲಿ ಬಿದ್ದಿದ್ದ ಕಡವೆಯೊಂದನ್ನು ಸಕಾಲದಲ್ಲಿ ರಕ್ಷಿಸಿ, ಸೂಕ್ತ ಚಿಕಿತ್ಸೆ ಕೊಡಿಸಿದ ಘಟನೆ ಹೊಸಂಗಡಿ ಸಮೀಪದ ಕಂಠೆಗದ್ದೆ ಎನ್ನುವಲ್ಲಿ ಮಂಗಳವಾರ ಸಂಭವಿಸಿದೆ. ಕಂಠೆಗದ್ದೆ ಸಮೀಪದ ರಸ್ತೆ ಬದಿಯ ಚರಂಡಿಯಲ್ಲಿ ಬಲಗಾಲಿಗೆ ಗಂಭೀರ ಗಾಯಗೊಂಡು ಬಿದ್ದಿದ್ದ ಕಡವೆಯನ್ನು ಅದೇ ಮಾರ್ಗವಾಗಿ ಬೆಳಗ್ಗೆ ಪತ್ನಿ ಜತೆ ವಾಕಿಂಗ್ ಹೋಗುತ್ತಿದ್ದ ಹೊಸಂಗಡಿ ಗ್ರಾ.ಪಂ. ಸಿಬಂದಿ ಪ್ರವೀಣ್ ಕುಮಾರ್ ಅವರು ನೋಡಿ, ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತತ್ಕ್ಷಣ ಸ್ಥಳಕ್ಕೆ ಆಗಮಿಸಿದ ಉಪ ವಲಯ ಅರಣ್ಯ ಅಧಿಕಾರಿ ವೀರಣ್ಣ, ಅರಣ್ಯ ರಕ್ಷಕ ಪ್ರಕಾಶ್, ಸತೀಶ್ ಹೆನ್ನಾಬೈಲು, ಸಂತೋಷ್, ಕೃಷ್ಣಮೂರ್ತಿ ಹಾಗೂ ಸ್ಥಳೀಯರ ಸಹಕಾರದಿಂದ ಅದನ್ನು ರಕ್ಷಿಸಲಾಗಿದೆ. ಸದ್ಯ ಹೆನ್ನಾಬೈಲುವಿನ ಅರಣ್ಯ ವಸತಿ ಗೃಹದಲ್ಲಿ ಪಶು ವೈದ್ಯರ ನೆರವಿನಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಚಿಕಿತ್ಸೆಗೆ ಸ್ಪಂದನೆ
ಮೊದಲೇ ಒಂದು ಕೋಡು ಹೋಗಿದ್ದು, ಈಗ ಈ ಅಪಘಾತದಿಂದ ಮತ್ತೂಂದು ಕೋಡು ಕೂಡ ಹೋಗಿದೆ. ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಉಪವಲಯ ಅರಣ್ಯ ಅಧಿಕಾರಿ ವೀರಣ್ಣ ಅವರು ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.