ರಾಜಸ್ಥಾನದಲ್ಲಿ BJPಗೆ ಹಿನ್ನಡೆ; ಸಂಸದ ಮೀನಾ ಕಾಂಗ್ರೆಸ್ ಗೆ ಸೇರ್ಪಡೆ
Team Udayavani, Nov 14, 2018, 4:44 PM IST
ಜೈಪುರ್: ಮುಂಬರುವ ರಾಜಸ್ಥಾನ್ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ದೌಸಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹರೀಶ್ ಮೀನಾ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ.
ಹರೀಶ್ ಮೀನಾ ಅವರನ್ನು ರಾಜಸ್ಥಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಪೈಲಟ್ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪಕ್ಷಕ್ಕೆ ಬರಮಾಡಿಕೊಂಡರು.
2014ರಲ್ಲಿ ಹರೀಶ್ ಮೀನಾ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 2009ರಿಂದ 2013ರ ಡಿಸೆಂಬರ್ ವರೆಗೆ ಮೀನಾ ರಾಜಸ್ಥಾನದ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ಇವರ ಕಾರ್ಯದಕ್ಷತೆಗೆ ಇಂಡಿಯನ್ ಪೊಲೀಸ್ ಹಾಗೂ ರಾಷ್ಟ್ರಪತಿ ಪದಕವನ್ನು ಕೂಡಾ ಪಡೆದಿದ್ದರು.
ಕಳೆದ ತಿಂಗಳು ಬಿಜೆಪಿ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಪುತ್ರ, ಮಾಜಿ ಶಾಸಕ ಮಾನವೇಂದ್ರ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.