ಗಜ ಮಾರುತ: ಮೃತರ ಸಂಖ್ಯೆ 33ಕ್ಕೇರಿಕೆ
Team Udayavani, Nov 18, 2018, 6:00 AM IST
ಚೆನ್ನೈ: ತಮಿಳುನಾಡಿನ ನಾಗಪಟ್ಟಣಕ್ಕೆ ಗುರುವಾರ ರಾತ್ರಿ ಅಪ್ಪಳಿಸಿದ ಗಜ ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ ಶನಿವಾರ 33ಕ್ಕೇರಿಕೆಯಾಗಿದೆ. ಗಜ ಮಾರುತದ ಅಬ್ಬರಕ್ಕೆ 30 ಸಾವಿರ ವಿದ್ಯುತ್ ಕಂಬಗಳು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಸಿಎಂ ಪಳನಿಸ್ವಾಮಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಸಂತ್ರಸ್ತರಿಗೆ ನೀಡಿದ ಆಹಾರ ಪೊಟ್ಟಣಗಳ ಮೇಲೆ ನಟ ರಜನೀಕಾಂತ್ರ ಫೋಟೋ ಮುದ್ರಿತವಾಗಿರುವುದು ವಿವಾದಕ್ಕೆ ಕಾರಣವಾಗಿದೆ. ರಜನೀಕಾಂತ್ ಚಂಡಮಾರುತವನ್ನೂ ತಮ್ಮ ರಾಜ ಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಿರೋಧಿಗಳು ಟೀಕಿಸಿದ್ದಾರೆ. ಪೊಟ್ಟಣಗಳ ಮೇಲೆ ಪಡಿ ಯಪ್ಪ, ಬಾಷಾ ಚಿತ್ರಗಳಲ್ಲಿನ ಫೋಟೋಗಳಿತ್ತು.
ಕೇರಳದಲ್ಲೂ ಹಾನಿ
ಕೊಚ್ಚಿ: ಗಜ ಚಂಡಮಾರುತದ ವೇಗ ಕಡಿಮೆಯಾಗಿದ್ದರೂ ಕೇರಳದ ಎರ್ನಾ ಕುಲಂ ಜಿಲ್ಲೆಯಲ್ಲಿ ಶನಿವಾರ ಸಂಜೆ ವ್ಯಾಪಕ ಹಾನಿ ಎಸಗಿದೆ. ಕನಿಷ್ಠ 200 ಮನೆಗಳು ಜಖಂ ಗೊಂಡಿದ್ದು, ಎರಡು ಮನೆಗಳು ಪೂರ್ತಿಯಾಗಿ ಕುಸಿದಿವೆ. ನೂರಾರು ಮರ ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಇದರಿಂದ ವಾಹನ ಸಂಚಾರ ಕೂಡ ಅಸ್ತವ್ಯಸ್ತಗೊಂಡಿದೆ.