ಪುಣೆ ಶ್ರೀ ಗುರುದೇವ ಸೇವಾ ಬಳಗದ 15ನೇ ವಾರ್ಷಿಕೋತ್ಸವ ಸಂಭ್ರಮ
Team Udayavani, Nov 21, 2018, 12:15 PM IST
ಪುಣೆ: ಶ್ರೀ ಗುರು ದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ 15 ನೇ ವಾರ್ಷಿಕೋತ್ಸವ ಸಮಾರಂಭವು ನ. 22ರಂದು ಅಪರಾಹ್ನ 2.30 ರಿಂದ ತಿಲಕ್ ಸ್ಮಾರಕ ರಂಗ ಮಂದಿರದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ನಾಲ್ಕು ದಿನಗಳ ಈ ಧಾರ್ಮಿಕ ಕಾರ್ಯಕ್ರಮ ಹಾಗೂ ಅಹಮದ್ ನಗರದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರೀ ಗುರುದೇವ ದತ್ತ ಸಂಸ್ಥಾನಮ… ಶ್ರೀ ದತ್ತಗುರು ವೀರಾಂಜನೇಯ ಸ್ವಾಮಿ ಕ್ಷೇತ್ರ ಒಡಿಯೂರಿನ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಶ್ರೀ ಮಾತಾನಂದಮಯಿ ಅವರು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರನ್ನು ಪುಣೆ ಬಳಗದ ಪರವಾಗಿ ಹೂ ಹಾರ ಹಾಕಿ ಸ್ವಾಗತಿಸಲಾಯಿತು.
ಪುಣೆ ಬಳಗದ ಪ್ರಮುಖರಾದ ಗೌರವ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಮಾಜಿ ಅಧ್ಯಕ್ಷ ಹಾಗೂ ಸಲಹೆಗಾರರಾದ ಉಷಾಕುಮಾರ್ ಶೆಟ್ಟಿ, ಕೋಶಾಧಿಕಾರಿ ರಂಜಿತ್ ಶೆಟ್ಟಿ, ಮುಂಬಯಿ ಶ್ರೀ ಗುರುದೇವ ಸೇವಾ ಬಳಗದ ಪ್ರಮುಖರಾದ, ಅಧ್ಯಕ್ಷ ಕೃಷ್ಣ ಶೆಟ್ಟಿ, ಗೌರವ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ರತ್ನಾಕರ ಶೆಟ್ಟಿ ಮೋರ್ಲಾ, ಮೋಹನ್ ಹೆಗ್ಡೆ, ಸುಜಿತ್ ಪೂಂಜಾ, ಡಾ| ಆದಿಪ್ ಶೆಟ್ಟಿ, ಉಷಾ ಶೆಟ್ಟಿ, ಕಲ್ಪನಾ ಕೆ. ಶೆಟ್ಟಿ ಅವರು ಉಪಸ್ಥಿತರಿದ್ದರು.