ಮಗುಚಿದ ಲಾರಿಯಡಿ ಸಿಲುಕಿ ಓರ್ವ ಸಾವು
Team Udayavani, Dec 19, 2018, 10:00 AM IST
ಉಳ್ಳಾಲ: ಕಟ್ಟಿಗೆ ಸಾಗಿಸುತ್ತಿದ್ದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್ ಬಳಿ ಉರುಳಿ ಬಿದ್ದು, ಲೋಡರ್ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಮತ್ತು ಕಾಮಗಾರಿ ನಡೆಸುವ ಸಂಸ್ಥೆಯೇ ಇದಕ್ಕೆ ಕಾರಣ ಎಂದು ಆರೋಪಿಸಿದ ಸ್ಥಳೀಯರು ಪೊಲೀಸರನ್ನು ಅಮಾನತುಗೊಳಿಸ ಬೇಕೆಂದು ಆಗ್ರಹಿಸಿ ಒಂದು ತಾಸು ಹೆದ್ದಾರಿ ತಡೆ ನಡೆಸಿದರು.
ಶಿವಮೊಗ್ಗ ಶಿಕಾರಿಪುರದ ಈಸೂರ ನಿವಾಸಿ ವಸಂತ ಕುಮಾರ್ ಯಾನೆ ರಂಗ (35) ಮೃತಪಟ್ಟವರು. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಘಟನೆಯ ವಿವರ
ಲಾರಿಯಲ್ಲಿ ಕಾರ್ಕಳದಿಂದ ಉಳ್ಳಾಲದ ಮೀನಿನ ಎಣ್ಣೆ ಮಿಲ್ಲಿಗೆ ಕಟ್ಟಿಗೆ ಸಾಗಿಸಲಾಗುತ್ತಿತ್ತು. ತೊಕ್ಕೊಟ್ಟು ಜಂಕ್ಷನ್ಗೆ ತಲುಪಿದಾಗ ಓವರ್ಲೋಡ್ ಆಗಿರುವುದನ್ನು ಗಮನಿಸಿದ ಕರ್ತವ್ಯ ನಿರತ ಪೊಲೀಸರು ಲಾರಿ ನಿಲ್ಲಿಸಲು ಸೂಚಿಸಿದ್ದರು. ಲಾರಿ ಜಂಕ್ಷನ್ ದಾಟಿ ತಲಪಾಡಿ ಕಡೆ ಹೋಗುವ ರಸ್ತೆಯ ಬದಿಗೆ ಚಲಿಸಿ ನಿಲ್ಲಲು ಅನುವಾಗುತ್ತಿದ್ದಂತೆ ಚರಂಡಿಯ ಕಾಂಕ್ರೀಟ್ ಸ್ಲ್ಯಾಬ್ ಕುಸಿಯಿತು. ಹಿಂದಿನ ಗಾಲಿ ಚರಂಡಿಯೊಳಗೆ ಸಿಲುಕಿಕೊಂಡು ಉರುಳಿ ಬಿತ್ತು. ಲಾರಿ ವಾಲುತ್ತಿದ್ದಂತೆ ವಸಂಜ ಅವರು ಬಾಗಿಲು ತೆರೆದು ಇಳಿಯಲು ಯತ್ನಿಸಿದ್ದು, ಲಾರಿಯಡಿ ಸಿಲುಕಿದರು. ಹತ್ತಿರದಲ್ಲೇ ಇದ್ದ ಕ್ರೇನ್ ಮೂಲಕ ಲಾರಿಯನ್ನೆತ್ತಿ ವಸಂತ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಧ್ಯಾಹ್ನದ ವೇಳೆಗೆ ಮೃತಪಟ್ಟರು.
ಒಂದು ತಾಸು ರಸ್ತೆ ತಡೆ
ಅಪಘಾತಕ್ಕೆ ಪೊಲೀಸರು ಲಾರಿ ನಿಲ್ಲಿಸಿದ್ದೇ ಕಾರಣ ಎಂದು ತಿಳಿಯು ತ್ತಿದ್ದಂತೆ ಸ್ಥಳದಲ್ಲಿ ಜನರು ಜಮಾಯಿಸಿ ಟ್ರಾಫಿಕ್ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು, ಮೃತನ ಕುಟುಂಬಕ್ಕೆ ಶೀಘ್ರ ಪರಿಹಾರ ಒದಗಿಸಬೇಕು, ಇಲ್ಲಿ ಹಿಂದೆ ಸಂಭವಿಸಿದ ನಾಲ್ಕು ಅಪಘಾತಗಳ ತನಿಖೆ ಮತ್ತು ಅವರ ಮನೆಮಂದಿಗೂ ಶೀಘ್ರ ಪರಿಹಾರ ನೀಡಬೇಕು, ಕಾಮಗಾರಿ ಮುಗಿಯುವ ವರೆಗೆ ಟೋಲ್ ಸಂಗ್ರಹ ನಿಲ್ಲಿಸಬೇಕು ಹಾಗೂ ಸ್ಥಳಕ್ಕೆ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಭೇಟಿ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಶೆಟ್ಟಿ, ಅಪರಾಧ ವಿಭಾಗದ ರಾಮ ರಾವ್, ಸಂಚಾರ ಠಾಣಾಧಿಕಾರಿ ಗುರುದತ್ ಕಾಮತ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು. ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು. ಸುಮಾರು 2 ಗಂಟೆ ಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
“ಉದಯವಾಣಿ’ ಹಲವು ಬಾರಿ ಎಚ್ಚರಿಸಿತ್ತು
ತೊಕ್ಕೊಟ್ಟು ಜಂಕ್ಷನ್ನಿಂದ ಭಟ್ನಗರದ ವರೆಗೆ ಅತ್ಯಂತ ಅಪಾಯಕಾರಿಯಾಗಿರುವ ಈ ರಸ್ತೆ ಮತ್ತು ಕುಸಿದಿರುವ ಕಾಂಕ್ರೀಟ್ ಸ್ಲ್ಯಾಬ್ ಕುರಿತ ಸಚಿತ್ರ ವರದಿಯನ್ನು “ಉದಯವಾಣಿ’ ಪ್ರಕಟಿಸಿ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ಈ ಭಾಗದಲ್ಲಿ ಕೇರಳದ ಕಡೆಗೆ ಸಂಚರಿಸುವ ಅನೇಕ ವಾಹನಗಳು ಅಪಘಾತಕ್ಕೀಡಾಗಿದ್ದು, ಪಾದಚಾರಿಗಳೂ ಕಾಂಕ್ರೀಟ್ ಸ್ಲ್ಯಾಬ್ನಿಂದ ಚರಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿತ್ತು. ಜಂಕ್ಷನ್ ಬಳಿ ಫುಟ್ಪಾತ್ ಇಲ್ಲದೆ ರಸ್ತೆಯಲ್ಲೇ ಸಂಚರಿಸುವ ಸ್ಥಿತಿ ಇದ್ದರೂ ಸಂಬಂಧಿತ ಇಲಾಖೆಗಳು ಗಮನಹರಿಸಿಲ್ಲ.